ಲಖನೌ
ಲೋಕೋ ಪೈಲಟ್ ಒಬ್ಬರು ಸಿಗರೇಟ್ ಖರೀದಿಗಾಗಿ ಉತ್ತರ ಪ್ರದೇಶದ ಮಲ್ಕನ್ ರೈಲ್ವೆ ಕ್ರಾಸಿಂಗ್ನಲ್ಲಿ ಸುಮಾರು 10 ನಿಮಿಷಗಳ ಕಾಲ ಸರಕು ರೈಲನ್ನು ನಿಲ್ಲಿಸಿದ್ದಾನೆ. ಇದರಿಂದ ಜನನಿಬಿಡ ಲೆವೆಲ್ ಕ್ರಾಸಿಂಗ್ನಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ರೈಲು ನಿಲುಗಡೆಯಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆ ಸಾರ್ವಜನಿಕರ ಗಮನಕ್ಕೆ ಬಂದಿದೆ.
ವರದಿಗಳ ಪ್ರಕಾರ, ರೈಲ್ವೆ ಅಧಿಕಾರಿಗಳು ಈ ನಿಲುಗಡೆಯ ಹಿಂದಿನ ಕಾರಣಗಳನ್ನು ಕಂಡು ಹಿಡಿಯಲು ತನಿಖೆಯನ್ನು ಪ್ರಾರಂಭಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ರಾಯ್ಬರೇಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಲ್ಕನ್ ಲೆವೆಲ್ ಕ್ರಾಸಿಂಗ್ನಲ್ಲಿ ಉದ್ದವಾದ ಸರಕು ಸಾಗಣೆ ರೈಲು ನಿಂತಿರುವುದನ್ನು ಕಂಡು ಬಂದಿದೆ.
ವಿಡಿಯೊದಲ್ಲಿ ಲೋಕೋ ಪೈಲಟ್ ರೈಲಿನಿಂದ ಇಳಿದು ಹಳಿಗಳನ್ನು ದಾಟುತ್ತಿರುವುದು ಸೆರೆಯಾಗಿದೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಲೋಕೋ ಪೈಲಟ್ ಹತ್ತಿರದ ಅಂಗಡಿಯಿಂದ ಸಿಗರೇಟ್ ಖರೀದಿಸಲು ಹೊರಬಂದಿದ್ದ ಎಂದು ಹೇಳಲಾಗಿದೆ. ಆದರೆ ಈ ಹೇಳಿಕೆಯನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.
ಸ್ಥಳೀಯ ಪ್ರಯಾಣಿಕರು ವಿಳಂಬದ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದು, ಕ್ರಾಸಿಂಗ್ನಲ್ಲಿ ಇಂತಹ ನಿಲುಗಡೆಗಳು ಆಗಾಗ ಸಂಭವಿಸುತ್ತವೆ ಎಂದು ಹೇಳಿಕೊಂಡಿದ್ದಾರೆ. ಹಲವು ಸ್ಥಳೀಯರು ಲೋಕೋ ಪೈಲಟ್ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಅವರು ಅನಾನುಕೂಲತೆ ಮತ್ತು ಸುರಕ್ಷತಾ ಕಾಳಜಿಗಳನ್ನು ಉಲ್ಲೇಖಿಸಿದ್ದಾರೆ. ಈ ಸಂಬಂಧ ಶಿಸ್ತು ಕ್ರಮದ ಕುರಿತು ಇನ್ನೂ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ರೈಲ್ವೆಗೆ ಸಂಬಂಧಿಸಿದ ಪ್ರತ್ಯೇಕ ಘಟನೆಯಲ್ಲಿ, ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಸೇತುವೆಯ ಮೇಲೆ ಹತ್ತಿ ರೈಲ್ವೆ ಹಳಿಗಳ ಮೇಲೆ ನಿಂತಿದ್ದಾನೆ. ಇದರಿಂದಾಗಿ ಅತಿ ವೇಗದಿಂದ ಬರುತ್ತಿದ್ದ ಪ್ರಯಾಣಿಕ ರೈಲನ್ನು ನಿಲ್ಲಿಸಲು ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಬೇಕಾಯಿತು. ಘಟನೆ ನಡೆದಾಗ ರೈಲು ಬಾಲಘಾಟ್ನಿಂದ ವಾರಣಾಸಿಗೆ ಪ್ರಯಾಣಿಸುತ್ತಿತ್ತು. ಹಠಾತ್ ನಿಲುಗಡೆಯಿಂದ ಸಂಭಾವ್ಯ ಅಪಘಾತ ತಪ್ಪಿತು. ಆದರೆ ಈ ಘಟನೆ ಪ್ರಯಾಣಿಕರಲ್ಲಿ ಭಯ ಹುಟ್ಟಿಸಿತು ಎನ್ನಲಾಗಿದೆ.
ರೈಲ್ವೇ ಉದ್ಘಾಟನಾ ಸಮಾರಂಭಕ್ಕೆ ತಡವಾಗಿ ಬಂದ ಮೇಯರ್ ಅನ್ನು ಅಲ್ಲೇ ಬಿಟ್ಟು ರೈಲು ಸಮಯಕ್ಕೆ ಸರಿಯಾಗಿ ಹೊರಟ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಡಿಸೆಂಬರ್ 15ರಂದು ಮೆಕ್ಸಿಕೋದ ಜಲಿಸ್ಕೊದ ಟ್ಲಾಜೊ ಮುಲ್ಕೊ ಡಿ ಜುನಿಗಾದಲ್ಲಿ ಈ ಬೆಳವನಿಗೆ ನಡೆದಿದ್ದು, ವಿಡಿಯೊ ವೈರಲ್ ಆಗಿದೆ. ಪ್ಲಾಟ್ಫಾರ್ಮ್ಗೆ ಅಧಿಕಾರಿಗಳು, ಗಣ್ಯರು, ಮಾಧ್ಯಮ ಸಿಬ್ಬಂದಿ, ಆಹ್ವಾನಿತ ಅತಿಥಿಗಳು ಆಗಮಿಸಿದ್ದರು. ಈ ಸಂಭ್ರಮದ ಕ್ಷಣದಲ್ಲಿ ಸಾಕ್ಷಿಯಾಗಲು ರಾಜ್ಯದ ಗವರ್ನರ್ ಸೇರಿದಂತೆ ಹಲವು ಅತಿಥಿಗಳು ರೈಲಿನ ಒಳಗಿದ್ದರು. ರೈಲು ಹೊರಡುವ ಸಮಯವಾದ ಕಾರಣ ಸ್ವಯಂಚಾಲಿತ ಬಾಗಿಲು ಮುಚ್ಚಿ ಇನ್ನೇನು ರೈಲು ಹೊರಡಲು ಸಿದ್ದವಾಗಿತ್ತು.
ಅದೇ ಸಮಯದಲ್ಲಿ ನಗರದ ಮೇಯರ್ ಲಗೆರಾರ್ಡೊ ಕ್ವಿರಿನೊ ಲಾಜ್ಕ್ವೆಜ್ ಫ್ಲಾಟ್ಫಾರ್ಮ್ಗೆ ಬಂದಿದ್ದಾರೆ. ಅವರೂ ಈ ರೈಲಿನಲ್ಲಿ ಪ್ರಯಾಣಿಸಬೇಕಿತ್ತು. ಕೆಲವು ನಿಮಿಷಗಳ ಕಾಲ ಅವರು ತಡವಾಗಿ ಆಗಮಿಸಿದ್ದಾರೆ. ಅದರೆ ಅವರಿಗಾಗಿ ಕಾಯದೆ ರೈಲು ಸಮಯಕ್ಕೆ ಸರಿಯಾಗಿ ತೆರಳಿದೆ. ಎಷ್ಟೇ ಗಣ್ಯ ಅತಿಥಿಯಾಗಿದ್ದರೂ ಸಮಯಕ್ಕೆ ಸರಿಯಾಗಿ ಹಾಜರಿರಬೇಕು ಎನ್ನುವ ಸಂದೇಶವನ್ನು ಸಿಬ್ಬಂದಿ ಸಾರಿದ್ದಾರೆ.








