ಸೋತಿದ್ದಕ್ಕೆ ಪ್ಯಾಟ್ ಕಮ್ಮಿನ್ಸ್ ದೂರಿದ್ದು ಯಾರನ್ನ ನೋಡಿ

ಬೆಂಗಳೂರು

    ವೆಂಕಟೇಶ್ ಅಯ್ಯರ್ ಅವರ 60 ರನ್ ಗಳ ಆಕರ್ಷಕ ಬ್ಯಾಟಿಂಗ್ ಹಾಗೂ ವೈಭವ್ ಅರೋರಾ ಮತ್ತು ವರುಣ್ ಚಕ್ರವರ್ತಿ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 80 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಐಪಿಎಲ್ 2025 ರ ಈ 15 ನೇ ಪಂದ್ಯದಲ್ಲಿ, ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ನಂತರ, 201 ರನ್‌ಗಳ ಗುರಿಯನ್ನು ಬೆನ್ನಟ್ಟುವ ಸಮಯದಲ್ಲಿ ಎಸ್ ಆರ್ ಹೆಚ್ ಕಳಪೆ ಆರಂಭವನ್ನು ಪಡೆಯಿತು ಮತ್ತು ಅಂತಿಮವಾಗಿ 120 ರನ್‌ಗಳಿಗೆ ಆಲೌಟ್ ಆಯಿತು. 

   ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕಳಪೆ ಫೀಲ್ಡಿಂಗ್ ಸೋಲಿಗೆ ದೊಡ್ಡ ಕಾರಣ ಎಂದು ಹೇಳಿದ್ದಾರೆ. ಪಂದ್ಯದ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಕಮ್ಮಿನ್ಸ್, ‘ಇದು ನಮಗೆ ಒಳ್ಳೆಯ ಸಮಯವಲ್ಲ. ಈ ಟಾರ್ಗೆಟ್ ಅನ್ನು ಮುಟ್ಟಬಹುದೆಂದು ನಾನು ಭಾವಿಸುತ್ತೇನೆ, ವಿಕೆಟ್ ಕೂಡ ಚೆನ್ನಾಗಿತ್ತು. ನಾವು ಫೀಲ್ಡಿಂಗ್‌ನಲ್ಲಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟೆವು. ಇದರ ಪರಿಣಾಮವಾಗಿ ಕೊನೆಯಲ್ಲಿ ನಾವು ಗುರಿಯಿಂದ ತುಂಬಾ ದೂರ ಸರಿದೆವು. ಸತತ ಮೂರು ಪಂದ್ಯಗಳಲ್ಲಿ ನಮಗೆ ಪರಿಸ್ಥಿತಿ ಸರಿಯಾಗಿ ಆಗಿಲ್ಲ. ನಾವು ಬಹುಶಃ ಇನ್ನಷ್ಟು ಉತ್ತಮ ಆಯ್ಕೆಗಳನ್ನು ಮಾಡಬಹುದೇ ಎಂದು ನೋಡಬೇಕು’ ಎಂದು ಹೇಳಿದ್ದಾರೆ.

    ಸೋಲಿಗೆ ಕಾರಣವನ್ನು ವಿವರಿಸುತ್ತಾ ಪ್ಯಾಟ್ ಕಮ್ಮಿನ್ಸ್, ‘ಮುಖ್ಯವಾಗಿ ನಮ್ಮ ಫೀಲ್ಡಿಂಗ್, ಬೌಲಿಂಗ್ ಒಟ್ಟಾರೆಯಾಗಿ ಕೆಟ್ಟದಾಗಿತ್ತು. ನಾವು ಕೆಲವು ಕ್ಯಾಚ್‌ಗಳನ್ನು ತೆಗೆದುಕೊಂಡು ಸ್ವಲ್ಪ ಮೊದಲೇ ಅವರ ರನ್​ಗೆ ಕಡಿವಾಣ ಹಾಕಬೇಕಿತ್ತು’ ಎಂಬುದು ಅವರ ಮಾತು. 

    ತಮ್ಮ ಬ್ಯಾಟಿಂಗ್ ಇನ್ನಷ್ಟು ಆಕ್ರಮಣಕಾರಿಯಾಗಿ ಇರಬೇಕಿತ್ತು ಎಂದು ಪ್ಯಾಟ್ ಕಮ್ಮಿನ್ಸ್ ನಂಬಿದ್ದಾರೆ. ‘ನಮ್ಮ ಬ್ಯಾಟ್ಸ್‌ಮನ್‌ಗಳು ಎದುರಾಳಿ ತಂಡದ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಿದಾಗ ಉತ್ತಮವಾಗಿ ಆಡುತ್ತಾರೆ ಆದರೆ ಹಿಂತಿರುಗಿ ನೋಡಿದಾಗ, ಬಹುಶಃ ನಾವು ಬೇರೆ ಬೇರೆ ಆಯ್ಕೆಗಳನ್ನು ಆರಿಸಿಕೊಳ್ಳಬಹುದಿತ್ತು ಎಂದು ನನಗನ್ನಿಸುತ್ತದೆ’ ಎಂದಿದ್ದಾರೆ. 

    ಆಡಮ್ ಜಂಪಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳದಿರುವ ಬಗ್ಗೆ ಕಮ್ಮಿನ್ಸ್ ಹೇಳಿದ್ದು ಹೀಗೆ: ‘ನಾವು ಕೇವಲ 3 ಓವರ್‌ಗಳ ಸ್ಪಿನ್ ಬೌಲಿಂಗ್ ಮಾಡಿದ್ದೇವೆ. ಆದ್ದರಿಂದ ನಾವು ಅವರನ್ನು ಬಿಟ್ಟು ಹೋಗಲು ನಿರ್ಧರಿಸಿದೆವು’.

    ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ನಂತರ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಈಗ ಹ್ಯಾಟ್ರಿಕ್ ಸೋಲುಗಳನ್ನು ಪೂರ್ಣಗೊಳಿಸಿದೆ. ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆದರೆ, ಇವರ ಆಯ್ಕೆಯೇ ತಪ್ಪಾಯಿತು. ಬೌಲಿಂಗ್‌ನಲ್ಲಿ ಸನ್‌ರೈಸರ್ಸ್ ಉತ್ತಮ ಆರಂಭ ಪಡೆದಿರಬಹುದು, ಆದರೆ ಕೊನೆಯ ಓವರ್‌ಗಳಲ್ಲಿ ಅವರು ತಮ್ಮ ಲಯವನ್ನು ಕಳೆದುಕೊಂಡರು. ಬೌಲಿಂಗ್‌ನಲ್ಲಿ ಸ್ವತಃ ನಾಯಕನೇ ಕೆಟ್ಟ ಪ್ರದರ್ಶನ ತೋರಿದರು. 4 ಓವರ್‌ಗಳ ಅವಧಿಯಲ್ಲಿ 44 ರನ್‌ಗಳಿಗೆ 1 ವಿಕೆಟ್ ಪಡೆದರು, ತಂಡದ ಸೋಲಿನಲ್ಲಿ ಇವರ ಪಾತ್ರವೂ ಇತ್ತು.