ಮಧುಗಿರಿ :
ಪಟ್ಟಣದ ಗೌರಿಬಿದನೂರು ಗೇಟ್ ಬಳಿ ಪೊಲೀಸ್ ಕುಮಾರ್ ನೇತೃತ್ವದ ಜಿಬಿಎನ್ ಗೇಟ್ ಗೆಳೆಯರ ಬಳಗದ ವತಿಯಿಂದ ಪ್ರಾಣಿಗಳಿಗೆ ಮತ್ತು ವಾಹನ ಸಂಚಾರರಿಗೆ ಊಟದ ವ್ಯವಸ್ಥೆ ಮಾಡಿ ಗಮನ ಸೆಳೆದಿದ್ದಾರೆ.
ಗುರುವಾರ ಮಧುಗಿರಿ ಪಟ್ಟಣದ ಬೈಪಾಸ್ ರಸ್ತೆ ಸಮೀಪವಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಮುಂಭಾಗ ಕೆಶಿಪ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸರಕು ಸಾಗಣೆಯ ಲಾರಿಗಳು, ಸಣ್ಣ ಪುಟ್ಟ ತರಕಾರಿ ರವಾನೆ ಮಾಡುವ ವಾಹನಗಳು, ಆ್ಯಂಬ್ಯುಲೆನ್ಸ್, ಆಟೊರಿಕ್ಷಾ, ದ್ವಿಚಕ್ರ ವಾಹನ, ಕುಟುಂಬ ಸಮೇತ ತೆರಳುತ್ತಿದ್ದ ವಾಹನ ಸಂಚಾರರಿಗೆ ಊಟದ ಪೊಟ್ಟಣಗಳನ್ನು ಕೊರೋನಾ ನಿಯಮದಡಿ ಪ್ರತ್ಯೇಕವಾಗಿ ಪ್ಯಾಕ್ ಮಾಡಿ, ಕುಡಿಯುವ ನೀರು ಸಮೇತ ನೀಡಿದ್ದಾರೆ.
ಈ ಗೆಳೆಯರ ಬಳಗ ಕಳೆದ ಹದಿನೈದು ದಿನಗಳಿಂದ ಪ್ರಾರಂಭದಲ್ಲಿ ಸಿದ್ಧರಬೆಟ್ಟದಲ್ಲಿರುವ ವಾನರ ಸೈನ್ಯಕ್ಕೆ ಹಣ್ಣು ವಿತರಿಸಿತ್ತು. ನಂತರ ತಿಮ್ಲಾಪುರ ಕರಡಿ ಧಾಮಕ್ಕೆ ಮಧುಗಿರಿ ಪಟ್ಟಣದ ತೋಟದವರು, ಮಂಡಿ ವರ್ತಕರು, ವ್ಯಾಪಾರಸ್ಥರು, ದಾನಿಗಳಿಂದ ಸುಮಾರು ನಾನ್ನೂರಕ್ಕೂ ಹೆಚ್ಚು ಹಲಸಿನ ಹಣ್ಣುಗಳನ್ನು ತೆಗೆದುಕೊಂಡು ಹೋಗಿ ತಿಮ್ಲಾಪುರ ಅಭಯಾರಣ್ಯದಲ್ಲಿ ಕರಡಿಧಾಮದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಕೊಟ್ಟಿದ್ದರು. ಇದಲ್ಲದೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ವಾನರ ಸೈನ್ಯಕ್ಕೆ ಮಧುಗಿರಿ ಪಟ್ಟಣದ ಕಸಬಾ ವ್ಯಾಪ್ತಿಯ ಮರುವೇಕೆರೆ-ಬಂದ್ರೆಹಳ್ಳಿ ತೇರಿನ ಬೀದಿಯ ಶ್ರೀ ಮಲೆ ರಂಗನಾಥಸ್ವಾಮಿ ದೇವಸ್ಥಾನದ ಬಯಲಿನಲ್ಲಿರುವ ವಾನರ ಸೈನ್ಯಕ್ಕೆ ಹಣ್ಣು ನೀಡಿದ್ದಾರೆ.
ಪೊಲೀಸ್ ಕುಮಾರ್, ಸೀಮೆಎಣ್ಣೆ ರಂಗನಾಥ್, ಹೋಟೆಲ್ ನರಸಿಂಹಸ್ವಾಮಿ, ಹೋಟೆಲ್ ಪವನ್, ಸ್ಟುಡಿಯೋ ಪ್ರತಾಪ್, ವಾರ್ಡನ್ ಗಣೇಶ್, ವಿನಯ್ ಮತ್ತಿತರರ ತಂಡ ಈ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
