ಮಧುಗಿರಿ :
ಪಾವಗಡ – ಮಳವಳ್ಳಿ ನಡುವಿನ ಕೆಶಿಪ್ ರಸ್ತೆ ಸೇತುವೆಗಳಲ್ಲಿ ಗಿಡ-ಗೆಂಟೆಗಳು ಬೆಳೆದು ಮಳೆ ನೀರು ಸರಾಗವಾಗಿ ಹರಿಯದೆ ಸೇತುವೆಗಳು ಅಪಾಯದ ಸ್ಥಿತಿಗೆ ತಲುಪುವಂತಾಗುತ್ತಿವೆ.
ಮಧುಗಿರಿಯಿಂದ ಪಾವಗಡ ರಸ್ತೆಯ ಅರೇನಹಳ್ಳಿ ಬಳಿ ಇರುವ ವೃದ್ಧಾಶ್ರಮ ಸಮೀಪ ಮತ್ತು ದೊಡ್ಲ ಹಾಲು ಸಂಗ್ರಹಣಾ ಕೇಂದ್ರದ ಸಮೀಪದ ಸೇತುವೆಯ ಎರಡೂ ಬದಿಯಲ್ಲಿ ಗಿಡ-ಗೆಂಟೆಗಳು ಬೆಳೆದಿವೆ. ಜತೆಗೆ ಎತ್ತಿನಹೊಳೆ ಯೋಜನೆಯ ಕಾಮಗಾರಿ ಅಪೂರ್ಣ ವಾಗಿದ್ದು, ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಸೇತುವೆಗಳ ಕೆಳಭಾಗದಲ್ಲಿ ನೀರು ನಿಂತು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.
ಇನ್ನೂ ಎತ್ತಿನ ಹೊಳೆ ಕಾಮಗಾರಿಯನ್ನು ನಿರ್ವಹಿಸುತ್ತಿರುವವರು ಜಮೀನುಗಳಲ್ಲಿ ಹಾಗೂ ಕೆಶಿಪ್ ರಸ್ತೆಯ ಸಮೀಪ ತೆಗೆದಿರುವ ಬೃಹದಾಕಾರದ ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ. ಬಿತ್ತನೆ ಸಮಯವಾಗಿದ್ದು, ಜಮೀನುಗಳಲ್ಲಿಯೂ ಗುಂಡಿಗಳನ್ನು ಬಿಟ್ಟು, ದೊಡ್ಡ ದೊಡ್ಡ ಕಲ್ಲುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗಿದ್ದು, ವ್ಯವಸಾಯಕ್ಕೂ ತೊಂದರೆಯಾಗುತ್ತಿದೆ. ಈ ಬಗ್ಗೆ ಎತ್ತಿನ ಹೊಳೆ ಯೋಜನೆಯ ಕೆಲ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸುಮಾರು 534 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕೆಶಿಪ್ ರಸ್ತೆಯ ಬಹುತೇಕ ಎಲ್ಲಾ ಸೇತುವೆಗಳ ಪರಿಸ್ಥಿತಿ ಇದೇ ಆಗಿದೆ ಎಂಬ ಅನುಮಾನಗಳು ಮೂಡುತ್ತಿವೆ.
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಮತ್ತು ಶಾಸಕರಾಗಿದ್ದ ಕೆ.ಎನ್.ರಾಜಣ್ಣನವರ ಅಧ್ಯಕ್ಷತೆಯಲ್ಲಿ ಈ ಬೃಹತ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಪ್ರಸ್ತುತ ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿರುವುದರಿಂದ ಏನಾದರೂ ಅವಘಡವಾದರೆ ಯಾರು ಹೊಣೆ ಎಂಬ ಮಾತುಗಳು ವಾಹನಗಳ ಸವಾರರಿಂದ ಕೇಳಿ ಬರುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
