ಮಧುಗಿರಿ:
ಕ್ಷೇತ್ರಕ್ಕೆ 9 ಕೋಟಿ ರೂ ವೆಚ್ಚದಲ್ಲಿ 5 ಚೆಕ್ ಡ್ಯಾಂ ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಸಜ್ಜೆಹೊಸಹಳ್ಳಿ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ 50 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈಗಾಗಲೇ ಕ್ಷೇತ್ರದಲ್ಲಿ ಚೆಕ್ ಡ್ಯಾಂಗಳ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಮುಗಿದ್ದು ಬಡವನಹಳ್ಳಿಯ ದೊಡ್ಡಹಳ್ಳಕ್ಕೆ ನಿರ್ಮಿಸಲಾಗಿರುವ ಸೇತುವೆಯ ಎಡ ಮತ್ತು ಬಲಭಾಗದಲ್ಲಿ ಹಾಗೂ ಪೂಜಾರಹಳ್ಳಿ, ಕಾವಣದಾಲ, ತೆರಿಯೂರುಗಳ ಬಳಿ ಚೆಕ್ ನಿರ್ಮಾಣ ಮಾಡುವುದರಿಂದ ನೀರು ಶೇಖರಣೆಯಾಗಿ ಅಂತರ್ಜಲ ವೃದ್ದಿಯಾಗಲಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕ್ಷೇತ್ರಕ್ಕೆ ಯಾವುದೇ ವಿಶೇಷ ಅನುದಾನಗಳನ್ನು ನೀಡಿಲ್ಲ ಎಂದು ಆರೋಪಿಸಿದರು.
ಮೈತ್ರಿ ಸರಕಾರದ ಅನುದಾನವೇ ಇನ್ನೂ ಬಂದಿಲ್ಲ:
ಶಾಸಕರ ಅನುದಾನವು 2ಕೋಟಿ ಇದ್ದು ಬಿಜೆಪಿ ಸರ್ಕಾರವು 50 ಲಕ್ಷಗಳನ್ನು ಎರಡು ಬಾರಿ ಮಾತ್ರ ಬಿಡುಗಡೆ ಮಾಡಿದೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಇನ್ನೂ ನೀಡಿಲ್ಲ. ಯಾವುದೇ ಸರ್ಕಾರವಿದ್ದರೂ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು, ಸಜ್ಜೆಹೊಸಹಳ್ಳಿ ಗ್ರಾಮವು ಜೆಡಿಎಸ್ನ ಭದ್ರಕೋಟೆಯಾಗಿದ್ದು ಗ್ರಾಮದಲ್ಲಿ 35 ಲಕ್ಷ ರೂ ವೆಚ್ಚದ ಪಶು ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ.
ಕೆ.ಐ.ಆರ್.ಡಿ.ಎಲ್ ಇಂಜಿನಿಯರ್ ಹನುಮಂತರಾಯಪ್ಪ, ಪಿಡಿಒ ಪ್ರಶಾಂತ್, ಮುಖಂಡರಾದ ಬಾವಿಮನೆ ಕಾಂತರಾಜು, ಬೋರ್ವೆಲ್ ಕುಮಾರ್, ಹನುಮಂತರಾಯಪ್ಪ, ವೆಂಕಟೇಶ್, ಲೋಕೇಶ್, ರಂಗನಾಥ್ ಹಾಗೂ ಮುಂತಾದವರು ಇದ್ದರು.
ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಕಾಣದ ಕೈಗಳ ಅಡ್ಡಿ
ಕ್ಷೇತ್ರದಲ್ಲಿ ಕೈಗಾರಿಕಾ ಪ್ರದೇಶ ಮಾಡುವ ಮೂಲಕ ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿತ್ತು ಆದರೆ, ಈ ಯೋಜನೆಗೆ ಕಾಣದ ಕೈಗಳು ಸರ್ಕಾರದ ಮಟ್ಟದಲ್ಲಿ ಅಡ್ಡಿಪಡಿಸಿರುವುದರಿಂದ ಈ ಯೋಜನೆ ತಡವಾಗಿದೆ. ಆದರೂ ಸಹ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ ಈ ಯೋಜನೆಗೆ ಚಾಲನೆ ನೀಡಲಾಗವುದು ಎಂದ ಅವರು ಅಭಿವೃದ್ದಿ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು, ಚುನಾವಣೆಯಲ್ಲಿ ಮಾತ್ರ ರಾಜಕೀಯ ಮಾಡೋಣ ಎಂದು ಶಾಸಕ ವೀರಭದ್ರಯ್ಯ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
