ಮಧುಗಿರಿ : ಶ್ರಮಿಕರಿಗೆ ಕೆ.ಎನ್.ಆರ್., ಆರ್.ಆರ್. ಬಳಗದ ಸಹಾಯಸ್ತ!

ಮಧುಗಿರಿ :

ತಾಲ್ಲೂಕು ಆಡಳಿತಕ್ಕೆ ಕೊರೊನಾ ನಿಯಂತ್ರಣಕ್ಕಾಗಿ ಅಗತ್ಯ ಪರಿಕರಗಳನ್ನು ವಿತರಿಸಿದ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ಮತ್ತು ತಾಲ್ಲೂಕು ಕಾಂಗ್ರೆಸ್ ಮುಖಂಡರ ತಂಡ.

      ಕೊರೊನಾ ಕಾಳ್ಗಿಚ್ಚಿಗೆ ಲಾಕ್‍ಡೌನ್ ಎಂಬ ತಾತ್ಕ್ಕಾಲಿಕ ನಿಯಮಗಳು ಸ್ವಲ್ಪ ಬ್ರೇಕ್ ಹಾಕಿವೆ. ಶ್ರಮಿಕರ ಬದುಕು ದುಸ್ತರವಾಗಿದ್ದು, ಮಧುಗಿರಿ ತಾಲ್ಲೂಕಿನ ಜನತೆಗೆ ಕೆಎನ್‍ಆರ್, ಆರ್‍ಆರ್ ಅಭಿಮಾನಿ ಬಳಗ ಹಾಗೂ ತಾಲ್ಲೂಕು ಕಾಂಗ್ರೆಸ್ ಸಮಿತಿಯವರು ಜನರಿಗೆ ಆಸರೆಯಾಗಿದ್ದಾರೆ. ನಿಮ್ಮ ಜೊತೆಯಲ್ಲಿ ನಾವಿದ್ದೇವೆಂದು ಧೈರ್ಯ ತುಂಬುತ್ತಾ, ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಕೊರೊನಾ ವಾರಿಯರ್‍ಗಳಾಗಿ ನಿಂತಿದ್ದಾರೆ.

      ಮೊದಲ ಅಲೆಯಲ್ಲಿ ಜಿಲ್ಲೆಯ ಜನರ ಹಸಿವು ನೀಗಿಸುವಲ್ಲಿ, ದುಡಿಯುವ ಕೈಗಳಿಗೆ ಹಾಗೂ ಅಶಕ್ತರಿಗೆ ಸಹಾಯ ಹಸ್ತ ಚಾಚುವಲ್ಲಿ ಅಭಿಮಾನಿಗಳ ಬಳಗವು ಯಶಸ್ವಿಯಾಗಿದೆ. ಇದು ಎಲ್ಲ್ಲರಿಗೂ ತಿಳಿದ ವಿಷಯ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೊದಲನೆ ಅಲೆಯಲ್ಲೂ ಲಕ್ಷಾಂತರ ಜನರಿಗೆ ಜಿಲ್ಲೆಯ ಹಿರಿಯ ಸಹಕಾರಿಗಳು, ಮಾಜಿ ಶಾಸಕ ಕೆ.ಎನ್.ರಾಜಣ್ಣನವರ ನಿರ್ದೇಶನದ ಮೇರೆಗೆ 2ನೇ ಅಲೆಯಲ್ಲೂ ಕೊರೊನಾ ಮುಂಚೂಣಿ ಸಿಬ್ಬಂದಿಗೆ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಜರ್‍ಗಳ ಕಿಟ್‍ಗಳನ್ನು ವಿತರಿಸಿದ್ದಾರೆ.

      ಇನ್ನೂ ತಾಲ್ಲೂಕಿನಲ್ಲಿ ಮೊದಲನೆ ಅಲೆಗಿಂತ 2ನೇ ಅಲೆಯ ತ್ರೀವ್ರತೆಯಿಂದ ಸೋಂಕಿತರ ಮತ್ತು ಸಾಯುವವರ ಸಂಖ್ಯೆ ದಿನೇ ದೀನೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಕಂಡು ಬರುತ್ತಿತ್ತು. ಕೋವಿಡ್ ಕೇರ್ ಸೆಂಟರ್‍ಗಳು ಆರಂಭವಾಗುವಷ್ಟರಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಪಕ್ಷಾತೀತವಾಗಿ ತಾಲ್ಲೂಕಿನ ಜನರ ಅಗತ್ಯತೆಯನ್ನು ಮನಗಂಡು ತಾಲ್ಲೂಕು ಆಡಳಿತದೊಂದಿಗೆ ಕೈ ಜೋಡಿಸಿ ಎರಡು ಆ್ಯಂಬ್ಯುಲೆನ್ಸ್, ಹತ್ತು ಆ್ಯಕ್ಸಿಜನ್ ಸಿಲಿಂಡರ್‍ಗಳು ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಿಗೆ ಎರಡು ಶುದ್ದ ಕುಡಿಯುವ ನೀರಿನ ಯಂತ್ರಗಳನ್ನು ಹಾಗೂ ಬೆಡ್‍ಶೀಟ್, ಮಾಸ್ಕ್, ಸ್ಯಾನಿಟೈಜರ್‍ಗಳನ್ನು ಸ್ವತಃ ರಾಜಣ್ಣನವರು ಅಧಿಕಾರಿಗಳಿಗೆ ಹಸ್ತಾಂತರಿಸಿದರು.

      ದಿನೇ ದಿನೇ ಸಾರ್ವಜನಿಕ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗೆ ಸೋಂಕಿತರು ಮತ್ತು ಪಾಲಕರು ಹೆಚ್ಚಾಗಿ ಬರುತ್ತಿರುವುದನ್ನು ಮನಗಂಡ ಕೆ.ಎನ್.ರಾಜಣ್ಣನವರು ಕಳೆದ 16 ದಿನಗಳಿಂದ ಅವರಿಗೆ ಆಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ. ಎಲ್ಲಿಯೂ ಹೊಟೆಲ್‍ಗಳು ತೆರೆಯದೆ ಇರುವುದರಿಂದ ಈ ವ್ಯವಸ್ಥೆ ಬಹಲಷ್ಟು ಉಪಯೋಗವಾಗಿದೆ. ಪಟ್ಟಣದ ಎಂಜಿಎಂ ಶಾಲೆಯಲ್ಲಿ ಪ್ರತಿ ನಿತ್ಯ ಸಾರ್ವಜನಿಕ ಆಸ್ಪತ್ರೆ, ಎಂಜಿಎಂ ಶಾಲೆ ಮತ್ತು ರಾಘವೇಂದ್ರ ನರ್ಸಿಂಗ್ ಹೋಮ್ ಬಳಿ ಉಚಿತವಾಗಿ ಊಟವನ್ನು ನೀಡುವಂತಹ ವ್ಯವಸ್ಥೆ ಕಲ್ಪಿಸಿದ್ದು, ಪ್ರತಿ ದಿನ 600ಕ್ಕೂ ಹೆಚ್ಚು ಜನರು ತರಹೇವಾರಿ ಊಟವನ್ನು ಪಡೆಯುತ್ತಿದ್ದಾರೆ.

ರೈತರಿಂದ ನೇರವಾಗಿ ಕೊಂಡಿರುವ 17 ಟನ್ ತರಕಾರಿಗಳನ್ನು ಪರಿಶೀಲಿಸುತ್ತಿರುವ ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ ಮತ್ತು ಕಾಂಗ್ರೆಸ್ ಮುಖಂಡರು.

      ಲಾಕ್ ಡೌನ್ ಹಿನ್ನೆಲೆಯಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದ್ದರಿಂದ, ತಾಲ್ಲೂಕಿನ ರೈತರು ಬೆಳೆದ ವಿವಿಧ ರೀತಿ ತರಕಾರಿಯನ್ನು ರೈತರಿಂದ ನೇರವಾಗಿ ಅವರ ಜಮೀನುಗಳ ಬಳಿ ಹೋಗಿ ಸುಮಾರು 17 ಟನ್‍ಗೂ ಅಧಿಕ ತರಕಾರಿ ಖರೀದಿ ಮಾಡಿ ರೈತರ ಬೆಂಬಲಕ್ಕೆ ನಿಂತಿದ್ದಾರೆ. ರೈತರಿಂದ ಖರೀದಿಸಿದ ತರಕಾರಿಗಳನ್ನು ಪುತ್ರ ಆರ್.ರಾಜೇಂದ್ರ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ತಮ್ಮ ಯುವ ಬಳಗದೊಂದಿಗೆ ಸೇರಿಕೊಂಡು ಅಚ್ಚು ಕಟ್ಟಾಗಿ ಪಾಕೆಟ್‍ಗಳನ್ನು ಮಾಡಿ ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಸೋಂಕಿತರು ಹೆಚ್ಚಿರುವ ಹಾಟ್‍ಸ್ಪಾಟ್ ಕೇಂದ್ರಗಳಿಗೆ ಭೇಟಿ ನೀಡಿ, ಮೆಡಿ ಕಿಟ್ ಹಾಗೂ ತರಕಾರಿಗಳನ್ನು ವಿತರಣೆ ಮಾಡಿದ್ದಾರೆ.

      ಸೋಂಕಿತರನ್ನು ಭೇಟಿ ಮಾಡಿ ಮಾನಸಿಕವಾಗಿ ಧೈರ್ಯ ತುಂಬಿದ್ದಾರೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಹಾಗೂ ಸೋಂಕಿತರೊಂದಿಗೆ ಚರ್ಚಿಸಿ ದೊರೆಯಬಹುದಾದ ಸೌಲಭ್ಯಗಳನ್ನು ನೀಗಿಸುವ ಭರವಸೆಗಳನ್ನು ನೀಡಿದ್ದಾರೆ. ಇನ್ನೂ ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ ಕೊರೊನಾದಿಂದ ಮೃತಪಟ್ಟ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಆರ್ಥಿಕ ಸಹಾಯ ನೀಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಲಸಿಕೆಯ ಬಗ್ಗೆ ನಿರ್ಲಕ್ಷ್ಯ ತೋರಿರುವ ಮತ್ತು ಅದರಿಂದ ದುಷ್ಟಪರಿಣಾಮವಾಗುತ್ತದೆ ಎಂದು ಆತಂಕ ಪಟ್ಟಿರುವ ಗ್ರಾಮೀಣ ಜನರಿರುವ ಪ್ರತಿ ಹೋಬಳಿಗೂ ಭೇಟಿ ನೀಡಿ ಕೊರೊನಾ ಲಸಿಕೆಯನ್ನು ಹಾಕಿಸಿ ಕೊಳ್ಳುವಂತೆ ಮನವೊಲಿಸಿದ್ದಾರೆ. ಜೊತೆಗೆ ಕಾಲ ಕಾಲಕ್ಕೆ ಸರ್ಕಾರದ ನಿಯಮಗಳು ಮತ್ತು ಅಧಿಕಾರಿಗಳು ನೀಡುವ ಸೂಚನೆಗಳನ್ನು ಪಾಲಿಸುವಂತೆ ಧ್ವನಿವರ್ಧಕ ಅಳವಡಿಸಿರುವ ಎರಡು ವಾಹನಗಳ ಮೂಲಕ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು, ಲಸಿಕೆಯ ಮಹತ್ವ ತಿಳಿಸುವ ಭಿತ್ತಿಪತ್ರಗಳನ್ನು ಹಂಚುತ್ತಾ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

      ರಾಜಣ್ಣನವರು ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಕೊಟ್ಯಂತರ ರೂ.ಗಳ ಅನುದಾನದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದರು. ಇಂದೂ ಅದೇ ಮಾದರಿಯಲ್ಲಿ ಜನರ ಅಧಿಕಾರಿಗಳ, ಆಶಾ, ಅಂಗನವಾಡಿ ಕಾರ್ಯಕರ್ತರ, ಪಕ್ಷಗಳ ಮುಖಂಡರ ಹಿತ ಕಾಪಾಡುತ್ತ ಕೊರೊನಾ ನಿಯಂತ್ರಣಕ್ಕೆ ಸ್ವಂತ ಖರ್ಚು ಮಾಡುತ್ತಿರುವುದು ಕೆಲವು ಜನರಲ್ಲಿ ತಪ್ಪು ಅರಿವು ಮೂಡಿಸುತ್ತಿರುವುದು ವಿಷಾದÀನೀಯವಾಗಿದೆ.

      ಮಧುಗಿರಿ ತಾಲ್ಲೂಕಿನ ಜನತೆ ತೀವ್ರ ಕಷ್ಟದ ವಾತಾವರಣದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆ.ಎನ್.ಆರ್ ಮತ್ತು ಆರ್.ಆರ್‍ರವರ ಜನ ಸೇವೆಗೆ ಬೆಲೆ ಕಟ್ಟಲಾಗದು. ಹಾಲಿ ಅಧಿಕಾರದಲ್ಲಿರುವವರು ಜನರ ಸೇವೆಗೆ ಸ್ಪಂದಿಸುತ್ತಿಲ್ಲ. ಆದರೆ ಇವರು ಅಶಕ್ತ ಜನರ ಹಾಗೂ ರೈತರ ಕೈ ಹಿಡಿದಿದ್ದಾರೆ. ರಾಜಣ್ಣನವರಿಗೆ ತಾಲ್ಲೂಕಿನ ಜನತೆಯ ಪರವಾಗಿ ಅಭಿನಂದನೆಗಳು.

-ಎಂ.ಕೆ.ನಂಜುಂಡರಾಜು, ಮಾಜಿ ಪುರಸಭಾಧ್ಯಕ.್ಷ ಮಧುಗಿರಿ.

      ಕೋವಿಡ್ ಸಂದÀರ್ಭದಲ್ಲಿ ಜಿಲ್ಲೆಯ 11 ಮಾಜಿ ಶಾಸಕರಲ್ಲಿ ಯಾರೊಬ್ಬರು ಅಷ್ಟಾಗಿ ತೊಡಗಿಸಿ ಕೊಂಡಿಲ್ಲ ಹಾಗೂ ಅಧಿಕಾರ ಇರಲಿ ಬಿಡಲಿ ಜನರ ಯೋಗಕ್ಷೇಮ ವಿಚಾರಿಸುವಲ್ಲಿ ಕೆಎನ್‍ಆರ್ ಮುುಂಚೂಣಿ ನಾಯಕರಾಗಿದ್ದಾರೆ. ಸ್ವಂತ ಖರ್ಚಿನಲ್ಲಿ ಅವರು ಮತ್ತು ಅವರ ಪುತ್ರ 24 ಗಂಟೆಯೂ ಕ್ಷೇತ್ರದ ಜನರ ಕಷ್ಟಗಳಲ್ಲಿ ಭಾಗಿಯಾಗುತ್ತಿದ್ದಾರೆ.

-ಸಿದ್ದಾಪುರ ವೀರಣ್ಣ, ಗ್ರಾಪಂ ಅಧ್ಯಕ್ಷ.

      ಕೊರೊನಾ 2ನೇ ಅಲೆಯಲ್ಲಿ ಸುಮಾರು 3000 ಮನೆಗಳಿಗೆ ಕಿಟ್‍ಗಳನ್ನು ವಿತರಿಸಿದ್ದಾರೆ. ರಾಜಣ್ಣನವರು ಮತ್ತು ರಾಜೇಂದ್ರರವರು ವಕೀಲರಾಗಿರುವುದರಿಂದ ವಕೀಲರ ಕಷ್ಟ ಸುಖಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಕುಟುಂಬದ ಮುಖ್ಯಸ್ಥರಾಗಿ ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಅರಿತು ತಾಲ್ಲೂಕಿನ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ.

-ಹೆಚ್.ಟಿ.ತಿಮ್ಮರಾಜು, ಯುವ ವಕೀಲರು, ಮಧುಗಿರಿ.

     ನನಗೆ ಕೊರೊನಾ ಸೋಂಕು ತಗುಲಿತ್ತು. ಇಂತಹ ಸಂದರ್ಭದಲ್ಲಿ ಕೆ.ಎನ್.ಆರ್ ಮತ್ತು ಆರ್.ಆರ್ ಅಭಿಮಾನಿ ಬಳಗದವರು ನೆರವಿನ ಸಹಾಯ ಹಸ್ತ ಚಾಚಿದರು. ಮಾನಸಿಕವಾಗಿ ಧೈರ್ಯ ತುಂಬಿ ಮಾತ್ರೆಗಳನ್ನು ಹಾಗೂ ಸಕಾಲಕ್ಕೆ ವೈದ್ಯರಿಂದ ಸೂಕ್ತ ಚಿಕಿತ್ಸೆ ದೊರಕಿಸಿ ಕೊಟ್ಟರು.

-ಈರ ದಾಸಪ್ಪ, ಹೂವಿನಹಳ್ಳಿ, ಕೋವಿಡ್‍ನಿಂದ ಗುಣಮುಖರಾದವರು.

ರಾಜೇಂದ್ರ ಎಂ.ಎನ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link