ಮಹಾ ಕುಂಭಮೇಳದ ಹೆಸರಲ್ಲಿ ವ್ಯಕ್ತಿಗೆ 64 ಸಾವಿರ ಪಂಗನಾಮ…..!

ಬೆಂಗಳೂರು: 

   ಮಹಾಕುಂಭಮೇಳದ ಹೆಸರಿನಲ್ಲಿ ವ್ಯಕ್ತಿಯೋರ್ವ ವಂಚನೆಗೊಳಗಾಗಿ ಬರೋಬ್ಬರಿ 64 ಸಾವಿರ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿಯಲ್ಲಿ ನಡೆದಿದೆ.

   ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವುದು ಕೋಟ್ಯಂತರ ಜನರ ಹೆಬ್ಬಕೆಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಜನರಿಗೆ ವಂಚಿಸಲು ಶುರುಮಾಡಿದ್ದಾರೆ.

    ಸೈಬರ್ ವಂಚಕರು ಟ್ರೆಂಡ್‌ಗೆ ತಕ್ಕಂತೆ ವಂಚನೆ ಮಾಡಲು ಶುರುಮಾಡಿದ್ದಾರೆ. ಜ್ಞಾನಭಾರತಿಯ ಓರ್ವ ನಿವಾಸಿ ಪ್ರಯಾಗ್‌ರಾಜ್‌ಗೆ ತೆರಳುವ ಪ್ಲ್ಯಾನ್‌ ಮಾಡಿದ್ದರು. ಹಾಗೆಯೇ ಗೂಗಲ್‌ನಲ್ಲಿ ಸರ್ಚ್ ಮಾಡಿ ಕುಂಭಮೇಳಕ್ಕೆ ಹೋಗಲು ಎಷ್ಟು ವೆಚ್ಚ ತಗಲಬಹುದು ಎಂದು ನೋಡಿದ್ದಾರೆ. ಅದಾದ ಕೆಲವೇ ನಿಮಿಷಗಳಲ್ಲಿ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ನಾನು ರಾಕೇಶ್ ಟೂರ್ಸ್‌ & ಟ್ರಾವೆಲ್‌ನಿಂದ ಮಾತಾಡ್ತಿದ್ದೀನಿ. ನಮ್ ಕಂಪನಿಯಿಂದ ಕಡಿಮೆ ಬೆಲೆಯಲ್ಲಿ ಪ್ರಯಾಗ್‌ರಾಜ್‌ಗೆ ಹೋಗುವ ಪ್ಯಾಕೆಜ್ ಇದೆ ಎಂದು ಪರಿಚಯ ಮಾಡಿಕೊಂಡಿದ್ದ. ಕರೆ ಮಾಡಿ ವ್ಯಕ್ತಿಯ ಮಾತನ್ನು ನಂಬಿ, ಅವರು ಹೇಳಿದ ಅಕೌಂಟ್‌ಗೆ ಹಂತ ಹಂತವಾಗಿ 64 ಸಾವಿರ ರೂ. ಹಾಕಿದ್ದಾರೆ.

   ಹಣ ಹಾಕಿದ ಕೆಲವೇ ನಿಮಿಷಗಳ ನಂತರ ಆ ವ್ಯಕ್ತಿಗೆ ಕರೆ ಮಾಡಿದಾಗ, ನಂಬರ್ ಸ್ವಿಚ್ ಆಫ್ ಬಂದಿದೆ. ಬಳಿಕ ಮೋಸ ಹೋಗಿರುವ ಬಗ್ಗೆ ಅರಿವಾದಾಗ 1930ಗೆ ಕರೆ ಮಾಡಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಹಣ ಹಾಕಿರುವ ದಾಖಲೆಯೊಂದಿಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

   ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಸೈಬರ್ ವಂಚಕರು, ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಕುಂಭಮೇಳಕ್ಕೆ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಜೊತೆಗೆ ನಗರದ ಹಲವು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇದೇ ರೀತಿಯ ವಂಚನೆ ಪ್ರಕರಣಗಳು ದಾಖಲಾಗುತ್ತಿವೆ.

Recent Articles

spot_img

Related Stories

Share via
Copy link