ಗುಬ್ಬಿ :

ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪೆಡ್ಡಿಂಗ್ ಇರುವ ಕಡತಗಳ ಪರಿಶೀಲನೆ ಮಾಡುವುದರ ಜೊತೆಗೆ ಕಳೆದ ಎಂಟು ತಿಂಗಳಿಂದ ಸಿ.ಎಸ್.ಪುರ ಹೋಬಳಿಯ ರೈತರ ಕೆಲಸಗಳನ್ನು ಮಾಡದೇ ಮಧ್ಯವರ್ತಿ ಪತ್ರ ಬರಹಗಾರರೊಬ್ಬರ ಆಣತಿಯಂತೆ ಕಡತವನ್ನು ಸ್ಥಗಿತ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಜತೆಗೆ ಹೊರಗುತ್ತಿಗೆ ಕೆಲಸಗಾರರು ಮಧ್ಯವರ್ತಿಗಳ ಕೆಲಸವಷ್ಟೇ ಮಾಡುತ್ತಾರೆ. ಇವರ ಮೇಲೆ ಕ್ರಮವಹಿಸಬೇಕು ಜತೆಗೆ ಉಪನೋಂದಣಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಮೇಲಾಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕರು ಉಪನೋಂದಾಣಾಧಿಕಾರಿಗಳ ಕಚೇರಿ ಹಾಗೂ ತಾಲ್ಲೂಕು ಕಚೇರಿಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಮಧ್ಯವರ್ತಿಗಳೇ ಕಾರಣ. ಕಚೇರಿಯಲ್ಲಿ ನಡೆಯಬೇಕಾದ ಕೆಲಸಗಳಿಗೆ ಮಧ್ಯವರ್ತಿಗಳ ಆದೇಶ ಮುಖ್ಯವಾಗಿದೆ. ಉಪನೋಂದಣಾಧಿಕಾರಿಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವ ಮಧ್ಯವರ್ತಿಗಳ ಹಾವಳಿ ತಪ್ಪಿಸದಿದ್ದಲ್ಲಿ ಕಚೇರಿಗೆ ಬೀಗ ಹಾಕಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿ ಸರ್ಕಾರದಲ್ಲಿ ಇಂತಹ ಭ್ರಷ್ಟಾಚಾರದ ದೂರು ಸಹಿಸಲಾಗದು. ಸಿ.ಎಸ್.ಪುರ ಹೋಬಳಿಯ ಬಹುತೇಕ ಜನರು ತಿಂಗಳುಗಟ್ಟಲೇ ಅಲೆದಾಡಿದ್ದಾರೆ. ಮಧ್ಯವರ್ತಿಗಳ ಹಾವಳಿಗೆ ಹೈರಾಣಾದ ರೈತರು ನೇರ ಕಚೇರಿಗೆ ಹೋದಲ್ಲಿ ಕೆಲಸ ನಡೆಯುವುದಿಲ್ಲ. ಸ್ವತಃ ನನ್ನ ಜಮೀನು ಮಾರಾಟ ಮಾಡಿದ್ದ ಕಡತ 8 ತಿಂಗಳಿಂದ ಪೆಡ್ಡಿಂಗ್ ಇಟ್ಟಿದ್ದಾರೆ. ಕೇಳಿದರೆ ಮಧ್ಯವರ್ತಿ ವಿಶ್ವಣ್ಣನ ಹೆಸರು ಹೇಳುತ್ತಿರುವ ಅಧಿಕಾರಿಗಳ ವರ್ತನೆಗೆ ಏನೋ ಹೇಳಬೇಕು ತಿಳಿಯುತ್ತಿಲ್ಲ. ದಲ್ಲಾಳಿಯೊಬ್ಬನು ಇಡೀ ಉಪನೋಂದಣಾಧಿಕಾರಿಗಳ ಕಚೇರಿ ನಿಯಂತ್ರಿಸುತ್ತಿರುವುದು ಅಚ್ಚರಿ ಎನಿಸಿದೆ. ಈ ಬಗ್ಗೆ ಸರ್ಕಾರದ ಗಮನೆ ಸೆಳೆಯುತ್ತೇನೆ ಎಂದರು.
ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಡಾ.ಪ್ರದೀಪ್ಕುಮಾರ್ ಹಿರೇಮಠ ಅವರೊಂದಿಗೆ ಮಾತನಾಡಿ ತಾಲ್ಲೂಕು ಕಚೇರಿಯಲ್ಲಿ ಯಾವ ಶಾಖೆಗೆ ಹೋದರು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವತ್ತ ಗಮನ ಹರಿಸಬೇಕೆಂದು ಸೂಚಿಸಿದ ಶಾಸಕರು ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಗಳು ವಿಳಂಬವಾದರೆ ಸರ್ಕಾರದೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಕಚೇರಿಯಲ್ಲಿನ ಲಂಚಾವತಾರದ ಬಗ್ಗೆ ಸಾಕಷ್ಟು ದೂರುಗಳು ನನಗೆ ಮತ್ತು ಗುಬ್ಬಿ ಶಾಸಕರಿಗೆ ಬಂದಿದೆ. ಇಬ್ಬರೂ ಸೇರಿ ಶೀಘ್ರದಲ್ಲಿ ಕ್ರಮವಹಿಸುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ. ಒಂದು ವಾರದಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಮತ್ತು ದಲ್ಲಾಳಿಯಾಗಿರುವ ಹೊರಗುತ್ತಿಗೆ ಸಿಬ್ಬಂದಿಗಳ ಅಮಾನತು ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಸಿ.ಎಸ್.ಪುರ ಹೋಬಳಿಯ ಜನತೆ ಮುಂದಾಗಲಿದ್ದಾರೆ ಎಂದು ತಹಸೀಲ್ದಾರ್ ಅವರಿಗೆ ಎಚ್ಚರಿಸಿದ ಶಾಸಕರು ಸರ್ಕಾರದ ಗಮನಕ್ಕೆ ತಂದು ಇಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇನೆ. ಬಡ ಜನರಿಂದ ಸುಲಿಗೆ ಮಾಡುವ ಮಧ್ಯವರ್ತಿಗಳ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದಯ್ಯ, ಕಿರಣ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
