ಜಿನೀವಾ:
ಭಾರತದಲ್ಲಿ ಅಲಸಂಖ್ಯಾತ ವಿರುದ್ಧದ ಹಿಂಸಾಚಾರ, ತಾರತಮ್ಯ ಆರೋಪ ಮತ್ತು ದೇಶದ ಕೆಲವು ಜಿಲ್ಲೆಗಳಲ್ಲಿ ಯುಎಪಿಎ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸುತ್ತಿರುವುದರ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯು ತನ್ನ ಇತ್ತೀಚಿನ ಅಧಿವೇಶನದಲ್ಲಿ ಕ್ರೊಯೇಷಿಯಾ, ಹೊಂಡುರಾಸ್, ಭಾರತ, ಮಾಲ್ಡೀವ್ಸ್, ಮಾಲ್ಟಾ, ಸುರಿನಾಮ್ ಮತ್ತು ಸಿರಿಯಾದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಕುರಿತ ಪರಿಶೀಲನೆಯ ನಂತರ ಭಾರತ ಬಗ್ಗೆ ಈ ರೀತಿ ಹೇಳಿದೆ. ತಾರತಮ್ಯ ಹೋಗಲಾಡಿಸಲು ಭಾರತದಲ್ಲಿ ಅಳವಡಿಸಿಕೊಂಡ ಕ್ರಮಗಳನ್ನು ಶ್ಲಾಘಿಸಿದ ಸಮಿತಿಯು, ಧಾರ್ಮಿಕ ಅಲ್ಪಸಂಖ್ಯಾತರು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಸಿಖ್ಖರು, ಪರಿಶಿಷ್ಟ ಸಮುದಾಯ, ಪರಿಶಿಷ್ಟ ಪಂಗಡಗಳು ಮತ್ತು LGBTI ಜನರು ಸೇರಿದಂತೆ ಅಲ್ಪಸಂಖ್ಯಾತ ಗುಂಪುಗಳ ವಿರುದ್ಧದ ತಾರತಮ್ಯ ಆರೋಪ ಮತ್ತು ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿತು.
ತಾರತಮ್ಯವನ್ನು ನಿಷೇಧಿಸುವ ಸಮಗ್ರ ಕಾನೂನನ್ನು ಅಳವಡಿಸಿಕೊಳ್ಳುವಂತೆ, ಜನರಲ್ಲಿ ಅರಿವು ಮೂಡಿಸುವಂತೆ ಮತ್ತು ವೈವಿದ್ಯತ ಬಗ್ಗೆ ಗೌರವವನ್ನು ಉತ್ತೇಜಿಸಲು ನಾಗರಿಕ ಸೇವಕರು, ಕಾನೂನು ಜಾರಿ ಅಧಿಕಾರಿಗಳು, ನ್ಯಾಯಾಂಗ ಮತ್ತು ಸಮುದಾಯದ ನಾಯಕರಿಗೆ ತರಬೇತಿಯನ್ನು ನೀಡಬೇಕು ಎಂದು ತಿಳಿಸಿತು.
ದೇಶದ ಸಂವಿಧಾನವು ಎಲ್ಲಾ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಮತ್ತು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಕುರಿತ ಕಳವಳಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಭಾರತ ಪದೇ ಪದೇ ಹೇಳುತ್ತಿದೆ.ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳು) ಕಾಯಿದೆಯ ಕೆಲವು ನಿಬಂಧನೆಗಳು ಮತ್ತು ಭಯೋತ್ಪಾದನಾ ನಿಗ್ರಹ ಶಾಸನಗಳು ಒಡಂಬಡಿಕೆಗೆ ಅನುಗುಣವಾಗಿಲ್ಲ ಎಂದು ಸಮಿತಿಯು ಕಳವಳ ವ್ಯಕ್ತಪಡಿಸಿತು.
