ತುಮಕೂರು:
ತುಮಕೂರು ಜಿಲ್ಲಾ ರಿಗ್ ಮಾಲೀಕರು ಮತ್ತು ಕಂಟ್ರಾಕ್ಟರ್ ಅಸೋಸಿಯೇಷನ್ ವಿರುದ್ಧವಾಗಿ ಕೆಲವು ಅತೃಪ್ತ ಗುತ್ತಿಗೆದಾರರು ದುರುದ್ದೇಶದಿಂದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನೋಂದಣಿ ಆಗದೇ ಇರುವ ಸಂಘದ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ನೋಂದಣಿಗೂ ಅಡ್ಡಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ರಿಗ್ ಮಾಲೀಕರು ಮತ್ತು ಕಂಟ್ರಾಕ್ಟರ್ ಅಸೋಸಿಯೇಷನ್ನ ಮಾರಿಮುತ್ತು, ಬಿ.ಎಸ್.ಶಶಿಕಿರಣ್, ಮೋಹನ್ಕುಮಾರ್, ತಿರುಮಲ್ಲಯ್ಯ, ಬಾಲಸುಬ್ರಮಣಿಯನ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೋರ್ವೆಲ್ ಮಾಲೀಕರು ಮತ್ತು ಏಜೆಂಟರ್ಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದಲೇ ರಿಗ್ ಮಾಲೀಕರು ಮತ್ತು ಕಂಟ್ರಾಕ್ಟರ್ ಅಸೋಸಿಯೇಷನ್ ಅನ್ನು ನೋಂದಣಿ ಮಾಡಲು ನೀಡಿದ್ದು, ಶೇ.90ರಷ್ಟು ಏಜೆಂಟರುಗಳು ನಮ್ಮೊಂದಿಗೆ ಇದ್ದು, ಬೆರಳೆಣಿಕೆಯಷ್ಟು ಮಂದಿ ಮಾತ್ರ ನಮ್ಮ ಸಂಘವನ್ನು ವಿರೋಧಿಸುತ್ತಿದ್ದು, ನೋಂದಣಿ ಆಗುವುದಕ್ಕೆ ಮುಂಚೆ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ರೈತರು ಹಾಗೂ ಕೊಳವೆಬಾವಿ ಲಾರಿ ಮಾಲೀಕರು ನೇರವಾಗಿ ವ್ಯವಹಾರ ಮಾಡುವುದರಿಂದ ಏಜೆಂಟರಿಗೆ ಸಿಗುತ್ತಿದ್ದ ಹಣ ಎಲ್ಲಿ ಕಡಿತವಾಗಲಿದೆಯೋ ಎನ್ನುವ ಆತಂಕದಿಂದಾಗಿ ಈ ರೀತಿ ಅಪಪ್ರಚಾರ ಮಾಡುತ್ತಿದ್ದು, ಜಿಲ್ಲಾ ರಿಗ್ ಮಾಲೀಕರು ಹಾಗೂ ಕಂಟ್ರಾಕ್ಟರ್ ಅಸೋಸಿಯೇಷನ್ ರೈತರು ಮತ್ತು ಲಾರಿ ಮಾಲೀಕರೊಂದಿಗೆ ನೇರವಾದ ಸಂಬಂಧ ಇಟ್ಟುಕೊಂಡು, ರೈತರ ಮೇಲೆ ಹೊರೆ ಆಗುತ್ತಿದ್ದ ಹೆಚ್ಚುವರಿ ಹಣವನ್ನು ಕಡಿತ ಮಾಡಲು ಮುಂದಾಗಿರುವುದೇ ನಮ್ಮ ಸಂಘದ ವಿರುದ್ಧ ಅಪಪ್ರಚಾರ ಮಾಡಲು ಕಾರಣವಾಗಿದೆ ಎಂದು ಬಿ.ಎಸ್.ಶಶಿಕಿರಣ್ ಆರೋಪಿಸಿದ್ದಾರೆ.
ಬೋರ್ವೆಲ್ ಲಾರಿ ಮಾಲೀಕರು ಹಾಗೂ ಏಜೆಂಟರುಗಳು ಒಟ್ಟಿಗೆ ಇದ್ದಾಗ ಮಾತ್ರ ಕೆಲಸ ಮಾಡಲು ಆಗುತ್ತದೆ. ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಲಾರಿಗಳಿದ್ದು, ಜಿಲ್ಲಾ ರಿಗ್ ಮಾಲೀಕರು ಮತ್ತು ಕಂಟ್ರಾಕ್ಟರ್ ಅಸೋಸಿಯೇಷನ್ ಧ್ಯೇಯಗಳನ್ನು ಒಪ್ಪಿರುವ ಏಜೆಂಟರುಗಳು ರೈತರಿಗೆ ಆಗುತ್ತಿದ್ದ ಹೆಚ್ಚುವರಿ ಹೊರೆಯನ್ನು ಕಡಿತಗೊಳಿಸಲು ಒಪ್ಪಿದ್ದು, ಇದನ್ನು ಒಪ್ಪದೇ ಇರುವವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದು, ಡಿಗ್ಗಿಂಗ್ ದರವನ್ನಾಗಲಿ ಬೇರೆ ಯಾವುದೇ ಶುಲ್ಕವನ್ನು ಹೆಚ್ಚಿಸಲು ಮುಂದಾಗದೇ ಇದ್ದರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ, ಅಂತಹವರ ಮಾತಿಗೆ ಮನ್ನಣೆ ನೀಡದಂತೆ ಮೂಲಕ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/10/borewell.png)