ಸಮುದಾಯದ ಜನನ ಪ್ರಮಾಣ ಕುಸಿತದ ಬಗ್ಗೆ ಮೋಹನ್‌ ಭಾಗವತ್‌ ಕಳವಳ …!

ನಾಗ್ಪುರ

      ಜನಸಂಖ್ಯೆ ಕುಸಿತದ ಬಗ್ಗೆ ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಸಮುದಾಯದ ಜನಸಂಖ್ಯೆಯು ಶೇ 2.1 ಕ್ಕಿಂತ ಕಡಿಮೆಯಾದರೆ ಅಂತಹ ಸಮಾಜವು ಅಳಿವಿನಂಚಿಗೆ ಹೋಗುತ್ತದೆ. ಹಾಗಾಗಿ ನಾವು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬೇಕು. ಸಮಾಜದ ಉಳಿವಿಗೆ ಇದು ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಮೋಹನ್​ ಭಾಗವತ್​ ಅವರು ಈ ಹೇಳಿಕೆ ಸದ್ಯ ವೈರಲ್​ ಆಗಿದ್ದು, ಸಾಕಷ್ಟು ಪರ-ವಿರೋಧ ವ್ಯಕ್ತವಾಗುತ್ತಿದೆ.

   ಭಾನುವಾರ ನಾಗ್ಪುರದಲ್ಲಿ ನಡೆದ ‘ಕಥಲೆ ಕುಲ್ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಸಮಾಜದ ಜನಸಂಖ್ಯೆಯು (ಫಲವತ್ತತೆ ದರ) 2.1 ಕ್ಕಿಂತ ಕಡಿಮೆಯಾದರೆ, ಆ ಸಮಾಜವು ಭೂಮಿಯಿಂದ ಕಣ್ಮರೆಯಾಗುತ್ತದೆ ಎಂದು ಆಧುನಿಕ ಜನಸಂಖ್ಯಾ ವಿಜ್ಞಾನವೇ ಹೇಳುತ್ತದೆ. ಈಗಾಗಲೇ ಈ ರೀತಿಯಲ್ಲಿ ಅನೇಕ ಭಾಷೆಗಳು ಮತ್ತು ಸಮಾಜಗಳು ಅಸ್ತಿತ್ವವನ್ನು ಕಳೆದುಕೊಂಡಿವೆ. ಹಾಗಾಗಿ ಜನಸಂಖ್ಯೆಯು 2.1 ಕ್ಕಿಂತ ಕಡಿಮೆ ಇರಬಾರದು ಎಂದು ಹೇಳಿದ್ದಾರೆ. 

    ಜನಸಂಖ್ಯೆಯು 2.1 ಜನನ ಪ್ರಮಾಣಕ್ಕಿಂತ ಕಡಿಮೆ ಇರಬಾರದು. ಭಾರತದ ಜನಸಂಖ್ಯಾ ನೀತಿಯನ್ನು 1998 ಅಥವಾ 2002 ರಲ್ಲಿ ನಿರ್ಧರಿಸಲಾಯಿತು. ಯಾವುದೇ ಸಮಾಜದ ಜನಸಂಖ್ಯೆಯು 2.1 ಕ್ಕಿಂತ ಕಡಿಮೆಯಾಗಬಾರದು ಎಂದು ಅದರಲ್ಲಿ ಹೇಳಲಾಗಿದೆ. ಹಾಗಾಗಿ ಸಮಾಜವು ಉಳಿಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. 

   ಇನ್ನು ಅನೇಕ ಬಿಜೆಪಿ ನಾಯಕರು ಜನಸಂಖ್ಯಾ ನಿಯಂತ್ರಣದ ಬಗ್ಗೆ ಧ್ವನಿ ಎತ್ತಿರುವ ಸಮಯದಲ್ಲೇ ಮೋಹನ್ ಭಾಗವತ್ ಅವರು ಈ ಹೇಳಿಕೆ ನೀಡಿದ್ದು, ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಲವು ತಿಂಗಳ ಹಿಂದೆ ರಾಜಸ್ಥಾನದ ಬಿಜೆಪಿ ಶಾಸಕ ಬಾಲ್ಮುಕುಂಡಾಚಾರ್ಯ ಜನಸಂಖ್ಯಾ ನಿಯಂತ್ರಣ ಮಸೂದೆ ತರುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಇದೀಗ ಮೋಹನ್ ಭಾಗವತ್​ ಅವರು ಜನನ ಪ್ರಮಾಣ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

    ಸ್ವಾತಂತ್ರ್ಯದ ನಂತರ, 1950 ರಲ್ಲಿ ಭಾರತದಲ್ಲಿ ಜನನ ಪ್ರಮಾಣ ಶೇ 6.2 ಆಗಿತ್ತು. ಇದೀಗ ಅದು ಶೇ 2.0ಕ್ಕೆ ಇಳಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ 2050ರ ವೇಳೆಗೆ ಭಾರತದಲ್ಲಿ ಜನನ ಪ್ರಮಾಣ ದರ 1.3 ಕ್ಕೆ ಇಳಿಯಲಿದೆ.

Recent Articles

spot_img

Related Stories

Share via
Copy link