ಬೆಂಗಳೂರು:
ಉದ್ಯಮಿ ಮೋಹನ್ ದಾಸ್ ಪೈ ಅವರು ಇಲ್ಲಸಲ್ಲದ ವಿಚಾರಗಳನ್ನಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನವಾಗಲು ಮೋಹನ್ ದಾಸ್ ಪೈ ಕಣ್ಣಿಟ್ಟಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಕೇಂದ್ರದಲ್ಲಿ ಅವರಿಗೆ ಉನ್ನತ ಹುದ್ದೆ ಬೇಕಾಗಿದೆ. ಅದಕ್ಕೆ ಈ ರೀತಿ ರಾಜ್ಯ ಸರ್ಕಾರದ ಸಚಿವರ ವಿರುದ್ದ ಆರೋಪ ಮಾಡುತ್ತಿದ್ದಾರೆ. ಹಿಂದೆ ಇವರು ತಾನೇ ಬೇರೆ ಬೇರೆ ಹುದ್ದೆಯಲ್ಲಿ ಇದ್ದವರು. ಸರ್ಕಾರ ಬದಲಾವಣೆ ಆದ ಮೇಲೆ ಇವರ ವರಸೆ ಬದಲಾಗಿದೆ ಎಂದೂ ಪ್ರಿಯಾಂಕ್ ಟೀಕಿಸಿದರು.
ಫೆಬ್ರವರಿ 24 ರಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದ ಪ್ರಿಯಾಂಕ್ ಖರ್ಗೆ, ಭಾರತದ ಅತ್ಯಧಿಕ ಕಂಪನಿಗಳಲ್ಲಿ ಎರಡನೇ ಅತಿ ಹೆಚ್ಚು ಕಂಪನಿಗಳು ಬೆಂಗಳೂರಿನಲ್ಲಿವೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟಿ ನೀಡಿದ್ದ ಮೋಹನ್ ದಾಸ್ ಪೈ, ಸಚಿವ ಪ್ರಿಯಾಂಕ್ ಖರ್ಗೆ ಅವರೇ ನಮಗೆ ಇದೆಲ್ಲವೂ ತಿಳಿದಿದೆ. ಆದರೆ ನಮಗೆ ಹೇಳಿ – ನಮ್ಮ ಜೀವನವನ್ನು ಸುಧಾರಿಸಲು ನೀವು ನಮ್ಮ ಸಚಿವರಾಗಿ ಏನು ಮಾಡಿದ್ದೀರಿ? ಹೇಳಿ.
ಯಾವುದೇ ಗುಂಡಿಗಳು ಇಲ್ಲದ, ಉತ್ತಮ ಪಾದಚಾರಿ ಮಾರ್ಗದೊಂದಿಗೆ ನಗರ ಸ್ವಚ್ಛವಾಗಿದೆ ಎಂದು ಖಚಿತಪಡಿಸಿಲ್ಲ! ಇದು ರಾಕೆಟ್ ವಿಜ್ಞಾನವಲ್ಲ ಆದರೆ ನಿಯಮಿತ ನಿರ್ವಹಣೆ ಕೆಲಸ. ದಯವಿಟ್ಟು ನಮಗೆ ಕನಿಷ್ಠ ಸ್ವಚ್ಛವಾಗಿ ನಗರವನ್ನು ನೀಡುವಂತೆ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಮಾತನಾಡಿ! ಕೇಳಲು ಇದು ಮಿತಿ ಮೀರಿದೆಯೇ? ಕಳೆದ 2 ವರ್ಷಗಳಲ್ಲಿ ನಮ್ಮ ಜೀವನವು ಹೆಚ್ಚು ಶೋಚನೀಯವಾಗಿದೆ! ಎಂದು ಹೇಳಿದ್ದರು.
ಬುಧವಾರ ಖರ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿವರವಾದ ಪ್ರತಿಕ್ರಿಯೆ ನೀಡಿದ್ದು, “ಟಿವಿ ಮೋಹನ್ದಾಸ್ಪೈ ಅವರೇ, ಇದು ರಾಕೆಟ್ ವಿಜ್ಞಾನವಲ್ಲದಿದ್ದರೆ ನಿಮ್ಮ ಅಂದಿನ ಸರ್ಕಾರಕ್ಕೆ ಏಕೆ ಜ್ಞಾನೋದಯ ಮಾಡಲಿಲ್ಲ? ನಾವು 135 ಸ್ಥಾನಗಳನ್ನು ಪಡೆದ ನಂತರ ನಿಮ್ಮ ಸಂಕಟಗಳು ನೋವಿನಿಂದ ಕೂಡಿದೆ ಎಂದು ತೋರುತ್ತಿದೆ. ನಿಮ್ಮ ವಿಶ್ವಗುರು ನರೇಂದ್ರ ಮೋದಿ ಅವರು ಕರ್ನಾಟಕವನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವಾಗ ನೀವೇಕೆ ಮೌನವಹಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ
