2 ಸಚಿವ ಸ್ಥಾನಗಳಿಗೆ ಬಿರುಸಿನ ಪೈಪೋಟಿ : ದೆಹಲಿಗೆ ದೌಡಾಯಿಸಿದ ‘ಕೈ’ ಆಕಾಂಕ್ಷಿಗಳು :

ಬೆಂಗಳೂರು: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನ ಸೇರಿದಂತೆ ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಒಟ್ಟು 2 ಸ್ಥಾನಗಳನ್ನು ತುಂಬುವುದು ಕಾಂಗ್ರೆಸ್ ನಾಯಕರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಮೂರನೇ ಹಂತದ ಸಂಪುಟ ವಿಸ್ತರಣೆ ಬಿಕ್ಕಟ್ಟು ತಾರಕಕ್ಕೇರಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ದೆಹಲಿಯತ್ತ ಮುಖ ಮಾಡಿದ್ದಾರೆ.

ಮಹಿಳಾ ಪ್ರಾತಿನಿಧ್ಯ : ಸಚಿವ ನಾಗೇಂದ್ರ ಅವರ ಸ್ಥಾನಕ್ಕೆ ವಾಲ್ಮೀಕಿ ಸಮುದಾಯದವರಿಗೇ ಅವಕಾಶ ನೀಡಬೇಕೆಂಬ ತೀವ್ರ ಒತ್ತಡವಿದೆ. ಜತೆಗೆ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯೂ ಇರುವುದರಿಂದ, ಉಪಚುನಾವಣೆಯಲ್ಲಿ ಗೆದ್ದಿರುವ ವಾಲ್ಮೀಕಿ ಸಮುದಾಯದ ಅನ್ನಪೂರ್ಣ ತುಕರಾಂ ಅವರಿಗೆ ಮಣೆ ಹಾಕಿ ಎರಡೂ ಬೇಡಿಕೆಗಳನ್ನು ಸರಿದೂಗಿಸುವ ಚಿಂತನೆ ವರಿಷ್ಠರ ಮಟ್ಟದಲ್ಲಿ ನಡೆದಿದೆ. ಆದರೆ, ಮೊದಲ ಬಾರಿಗೆ ಆಯ್ಕೆಯಾಗಿರುವ ಅವರಿಗೆ ಮಂತ್ರಿಗಿರಿ ಒಲಿದುಬರುತ್ತಿರುವುದಕ್ಕೆ ಪಕ್ಷದೊಳಗೇ ವಿರೋಧ ವ್ಯಕ್ತವಾಗಿದ್ದು, ಅನುಭವಿ ಶಾಸಕರಿಗೆ ಅವಕಾಶ ನೀಡುವಂತೆ ಕೂಗು ಎದ್ದಿದೆ.

ಮತ್ತೊಂದೆಡೆ, ಖಾಲಿ ಇರುವ ಸ್ಥಾನದಲ್ಲಿ ಒಂದನ್ನು ಕುರುಬ ಸಮುದಾಯದ ಬಸವರಾಜ ನೀಲಣ್ಣ ಶಿವಣ್ಣನವರಿಗೆ ನೀಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.

ಹಿರಿಯ ಶಾಸಕರ ಅಸಮಾಧಾನದ ಬೇಗೆ : ಈ ಹಿಂದಿನ ವಿಸ್ತರಣೆ ವೇಳೆ ಅಸಮಾಧಾನಗೊಂಡಿದ್ದ ಹಿರಿಯ ಶಾಸಕ ಎಂ. ಕೃಷ್ಣಪ್ಪ ಅವರಿಗೆ ಈ ಬಾರಿ ಸ್ಥಾನ ನೀಡಲೇಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಒಕ್ಕಲಿಗ ಕೋಟಾದ ಹಾಲಿ ಸಚಿವರೊಬ್ಬರಿಂದ ರಾಜೀನಾಮೆ ಕೊಡಿಸಿ ಆ ಜಾಗಕ್ಕೆ ಕೃಷ್ಣಪ್ಪನವರನ್ನು ತರುವ ಲೆಕ್ಕಾಚಾರವಿದ್ದರೂ, ಹಾಲಿ ಸಚಿವರು ರಾಜೀನಾಮೆಗೆ ಹಿಂದೇಟು ಹಾಕುತ್ತಿರುವುದು ಪ್ರಕ್ರಿಯೆಯನ್ನು ಕಗ್ಗಂಟಾಗಿಸಿದೆ. ಇದೇ ವೇಳೆ, “ಹಾಲಿ ಇರುವ 3-4 ಸಚಿವರನ್ನು ಕೈಬಿಟ್ಟು ನಮ್ಮಂಥ ಹಿರಿಯರಿಗೆ ಅವಕಾಶ ಕೊಡಿ” ಎಂದು 8-10 ಶಾಸಕರು ಹೈಕಮಾಂಡ್‌ಗೆ ದುಂಬಾಲು ಬಿದ್ದಿದ್ದಾರೆ.

ಸೋಮವಾರ ದೆಹಲಿಯಲ್ಲಿ ನಿರ್ಣಾಯಕ ಸಭೆ

ಬಿಕ್ಕಟ್ಟು ಶಮನಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎರಡು ದಿನಗಳ ಹಿಂದೆಯಷ್ಟೇ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರೊಂದಿಗೆ ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಿದ್ದರು. ಸೋಮವಾರ ಮತ್ತೊಮ್ಮೆ ದೆಹಲಿಗೆ ಆಗಮಿಸಿ ಪಟ್ಟಿಯನ್ನು ಅಂತಿಮಗೊಳಿಸುವAತೆ ವರಿಷ್ಠರು ಸೂಚಿಸಿದ್ದಾರೆ. ಹೀಗಾಗಿ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೋಮವಾರ ದೆಹಲಿಗೆ ತೆರಳಲಿದ್ದಾರೆ. ಈ ಮಹತ್ವದ ಸಭೆಯಲ್ಲಿ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಹಾಗೂ ಯಾರನ್ನು ಕೈಬಿಡಬೇಕು ಎಂಬ ಗೊಂದಲಗಳಿಗೆ ತೆರೆಬೀಳಲಿದ್ದು, ಬಹುತೇಕ ಮುಂದಿನ ವಾರವೇ 3ನೇ ಹಂತದ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ದಟ್ಟವಾಗಿದೆ. ವರಿಷ್ಠರ ಸಭೆ ನಿಗದಿಯಾಗಿದ್ದೇ ತಡ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವು ಶಾಸಕರು ಇಂದು ಮತ್ತು ನಾಳೆ ದೆಹಲಿಯತ್ತ ದೌಡಾಯಿಸಲಿದ್ದಾರೆ.

Recent Articles

spot_img

Related Stories

Share via
Copy link