ಬೆಂಗಳೂರು:
ಬಿಜೆಪಿಯಲ್ಲಿ ರಾಜಹುಲಿ ಎಂದೇ ಖ್ಯಾತರಾದ ಶಿಕಾರಿವೀರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಹಾಗೂ ದೂರದ ಸಂಬಂಧಿಯೂ ಆದ ಎನ್.ಆರ್ ಸಂತೋಷ್ ಅವರಿಗೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಮಿಸ್ ಆದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿ ಅಥವಾ ಜೆಡಿಎಸ್ ನಿಂದ ಸ್ಪರ್ಧೆ ಮಾಡುವುದಾ ಅಂತ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು.
ಇದರ ನಡುವೆ ಇಂದು ಹಾಸನದ ಟಿಕೆಟ್ ಘೋಷಣೆ ಬೆನ್ನಲ್ಲೇ ಎನ್ಆರ್ ಸಂತೋಷ್ ಅವರೊಂದಿಗೆ ಪದ್ಮನಾಭನಗರದಲ್ಲಿರುವ ಎಚ್ಡಿ ದೇವೇಗೌಡರ ನಿವಾಸಕ್ಕೆ ರೇವಣ್ಣ ಆಗಮಿಸಿದ್ದರು. ಇದರೊಂದಿಗೆ ಸಂತೋಷ್ ಜೆಡಿಎಸ್ ಸೇರ್ಪಡೆಯಾಗುತ್ತಾರಾ ಎಂಬ ಕುತೂಹಲ ಎದುರಾಗಿದೆ.
ಅರಸೀಕೆರೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಎನ್ ಆರ್ ಸಂತೋಷ್ ಅವರಿಗೆ ಕೊನೆ ಘಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತ್ತು. ಆದ್ದರಿಂದ ಅವರು ಜೆಡಿಎಸ್ ಸೇರ್ಪಡೆಯಾಗುವ ಕಡೆ ಒಲವು ತೋರಿದ್ದರು. ಇದರ ನಡುವೆ ಇಂದು ಹಾಸನದ ಎಲ್ಲಾ ಕ್ಷೇತ್ರ ಗಳ ಅಭ್ಯರ್ಥಿಗಳ ಹೆಸರು ಬಿಡುಗಡೆ ಆಗಿತ್ತು. ಆದರೂ ಅರಸೀಕೆರೆ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದೆ ಬಾಕಿ ಉಳಿಸಿಕೊಳ್ಳಲಾಗಿತ್ತು. ಹಾಗಾಗಿ ದೇವೇಗೌಡರ ಜೊತೆ ಮಾತುಕತೆಗೆ ಸಂತೋಷ್ ಆಗಮಿಸಿದ್ದರು ಎನ್ನಲಾಗಿದೆ.
ಸುಮಾರು ಅರ್ಧಗಂಟೆ ಕಾಲ ದೇವೇಗೌಡರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು, ದೇವೇಗೌಡರೊಂದಿಗೆ ಚರ್ಚೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲು ರೇವಣ್ಣ ಸಮಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ನಾಳೆ ಅರಸೀಕೆರೆ ಅಭ್ಯರ್ಥಿಯಾಗಿ ಎನ್ ಆರ್ ಸಂತೋಷ್ ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬಂದಿದೆ. ಇದರ ನಡುವೆ ದೇವೇಗೌಡರನ್ನು ಭೇಟಿ ಮಾಡಲು ಬಂದ ಸಂದರ್ಭದಲ್ಲಿ ಎನ್ ಆರ್ ಸಂತೋಷ್ ಬೆಂಬಲಿಗರು ದೇವೇಗೌಡರ ಪರ ಘೋಷಣೆ ಕೂಗಿದ್ದಾರೆ.
ದೇವೇಗೌಡರ ಭೇಟಿ ಬಳಿಕ ಮಾತನಾಡಿದ ರೇವಣ್ಣ ಅವರು, ದೇವೇಗೌಡರು ಎರಡು ಗಂಟೆಗಳ ಕಾಲ ಚರ್ಚೆ ಮಾಡಿ ನಾಳೆ ಬರಲು ಹೇಳಿದ್ದಾರೆ. ಅರಸೀಕರೆ ಗೆಲ್ಲೋದು ಮುಖ್ಯ, ನಾಟಕಕ್ಕೋಸ್ಕರ ಆತ ಮಾಡಿದ. ರಾಜಕಾರಣದಲ್ಲಿ ಇಂಥದ್ದು ನೋಡಿಲ್ಲ. ರಾಗಿ ಕಳ್ಳ ಅಂದ ತಕ್ಷಣ ಆಣೆ ಮಾಡಿದ. ನಾನು ಸಾಕಿದೆ, ದ್ರೋಹ ಬಗೆದ. ದುಡ್ಡಿನ ಮದದಲ್ಲಿ ಮೆರೆಯುತ್ತಿದ್ದಾನೆ ಎಂದು ಪರೋಕ್ಷವಾಗಿ ಶಿವಲಿಂಗೇಗೌಡ ವಿರುದ್ಧ ಆಕ್ರೋಶ ಹೊರ ಹಾಕಿದರು.
ಅಲ್ಲದೆ, ಕಳ್ಳ ಕಳ್ಳ, ಅರಸೀಕರೆ ಲೂಟಿ ಬಿಚ್ತೀನಿ ಎಲ್ಲ. ಹೆಂಡತಿ ವಿಚಾರ ಹೇಳ್ಕೊಂಡ್ ಎಷ್ಟು ಮಾಡಿದ್ದಾನೆ ಗೊತ್ತಾ. ಆರು ತಿಂಗಳಿಂದ ಹೇಳುತ್ತಿದ್ದೀನಿ. ದೇವೇಗೌಡರ ತೀರ್ಮಾನವೇ ಅಂತಿಮ. ನನ್ನ ಹೆಂಡತಿ ಬೇಲೂರಿನಲ್ಲಿ ತ್ಯಾಗ ಮಾಡಿದ್ದರು. ನನ್ನ ಹೆಂಡತಿ ಸೀಟು ಕೇಳಿಲ್ಲ, ಮಾವನವರು ಮುಖ್ಯ ಅಂದಿದ್ದಳು. ಕುಮಾರಣ್ಣನಿಗೆ ನೋವಾಗಬಾರದು. ದೈವ ಇದ್ದಾನೆ, ಹಾಸನ ಇಡೀ ಜಿಲ್ಲೆ ಗೆಲ್ಲಿಸುವುದು ಮುಖ್ಯ, ದೇವೇಗೌಡರು ಹೇಳಿದ್ದೆ ಅಂತಿಮ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








