ಮುಂಬೈ:
ದೇಶದ ಯುವಜನತೆ ವಾರಕ್ಕೆ 70 ಗಂಟೆ ದುಡಿದು ತಮ್ಮ ವೃತ್ತಿಜೀವನದಲ್ಲಿ ಮುಂದೆ ಬರಬೇಕು, ಈ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂಬರ್ಥದಲ್ಲಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ. ಇದೀಗ ತಾವು ಹಿಂದೆ ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಬ್ಬ ವ್ಯಕ್ತಿಗೆ ಇಷ್ಟು ಹೊತ್ತು ಕೆಲಸ ಮಾಡಬೇಕೆಂದು ಬದ್ಧತೆಯನ್ನು ಒತ್ತಾಯಪೂರ್ವಕವಾಗಿ ಹೇರಬಾರದು ಎಂದು ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಕಿಲಾಚಂದ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ನಾರಾಯಣ ಮೂರ್ತಿ, “ನೀವು ಒಬ್ಬರಿಗೆ ಇದನ್ನು ಮಾಡಿ, ಇದನ್ನು ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ನಾರಾಯಣ ಮೂರ್ತಿಯವರು ಇನ್ಫೋಸಿಸ್ ನ ಆರಂಭಿಕ ದಿನಗಳಲ್ಲಿ ತಮ್ಮ ವೈಯಕ್ತಿಕ ಕೆಲಸದ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಾನು ಬೆಳಗ್ಗೆ 6:20 ಕ್ಕೆ ಕಚೇರಿಗೆ ಹೋಗಿ ರಾತ್ರಿ 8:30 ಕ್ಕೆ ಹೊರಡುತ್ತಿದ್ದೆ. ಸುಮಾರು 40 ವರ್ಷ ಹೀಗೆಯೇ ಮಾಡಿದ್ದೇನೆ. ಅದು ಸತ್ಯ. ಆದ್ದರಿಂದ ಯಾರೂ ಅದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ, ಹಾಗೆಂದು ಕೆಲಸ ಮಾಡುವ ಸಮಯ ನಮ್ಮನಮ್ಮ ವೈಯಕ್ತಿಕ ಆಯ್ಕೆ, ಅದನ್ನು ಯಾರೂ ನಿರ್ದೇಶಿಸಬಾರದು ಎಂದರು.
ಕೆಲಸದ ಸಮಯವು ವೈಯಕ್ತಿಕ ನಿರ್ಧಾರಗಳಾಗಿವೆ, ಸಾರ್ವಜನಿಕ ಚರ್ಚೆಗೆ ಸಂಬಂಧಿಸಿದ ವಿಷಯಗಳಲ್ಲ. ಇವು ಚರ್ಚಿಸಬೇಕಾದ ವಿಷಯಗಳಲ್ಲ. ಇವು ಆತ್ಮಾವಲೋಕನ ಮಾಡಿಕೊಳ್ಳಬಹುದಾದ, ಗ್ರಹಿಸಬಹುದಾದ ಮತ್ತು ಕೆಲವು ತೀರ್ಮಾನಕ್ಕೆ ಬರಬಹುದಾದ ಮತ್ತು ಅವರು ಬಯಸಿದ್ದನ್ನು ಮಾಡಬಹುದಾದ ವಿಷಯಗಳಾಗಿವೆ ಎಂದು ಅವರು ಹೇಳಿದರು, ಕೆಲಸ-ವೈಯಕ್ತಿಕ ಜೀವನದ ಸಮತೋಲನಕ್ಕೆ ಹೆಚ್ಚು ಆತ್ಮಾವಲೋಕನ ಅಗತ್ಯ ಎಂದರು.
ವಾರಕ್ಕೆ 70 ಗಂಟೆಗಳ ಕೆಲಸದ ಕುರಿತು ಮೂರ್ತಿಯವರ ಹೇಳಿಕೆಗಳು ಕಾರ್ಪೊರೇಟ್ ಸಂಸ್ಕೃತಿಯ ಬಗ್ಗೆ ವಿಶಾಲವಾದ ಚರ್ಚೆಯನ್ನು ಹುಟ್ಟುಹಾಕಿದವು, ಹಲವಾರು ಉದ್ಯಮ ನಾಯಕರು ಪ್ರತಿಕ್ರಿಯಿಸಿದ್ದಾರೆ. ಲಾರ್ಸೆನ್ & ಟೂಬ್ರೊ (ಎಲ್ & ಟಿ) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ವಾರಕ್ಕೆ 90 ಗಂಟೆ ದುಡಿಯಬೇಕೆಂದು ಹೇಳಿದರು. ನಿಮ್ಮನ್ನು ಭಾನುವಾರ ಕೆಲಸ ಮಾಡಲು ಹೇಳಲು ಸಾಧ್ಯವಾಗುತ್ತಿಲ್ಲವಲ್ಲಾ ಎಂದು ವಿಷಾದವಾಗುತ್ತಿದೆ ಎಂದು ಸಹ ಹೇಳಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾದವು
ಮತ್ತೊಂದೆಡೆ, ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಕೆಲಸ-ಜೀವನ ಸಮತೋಲನದಲ್ಲಿ ವೈಯಕ್ತಿಕ ಆಯ್ಕೆಯ ಮಹತ್ವವನ್ನು ಎತ್ತಿ ತೋರಿಸಿದರು. ನಿಮ್ಮ ಕೆಲಸ-ಜೀವನ ಸಮತೋಲನವನ್ನು ನನ್ನ ಮೇಲೆ ಹೇರಬಾರದು ಅಥವಾ ನಾನು ಕೂಡ ಹೇರಬಾರದು ಎಂದು ಹೇಳಿದ್ದರು. ವೃತ್ತಿಪರ ಬದ್ಧತೆಗಳಿಗೆ ಹೊಂದಿಕೊಳ್ಳುವ ವಿಧಾನವನ್ನು ಅವರು ಉತ್ತೇಜಿಸಿದರು.
ಈ ಹೇಳಿಕೆ ಸಾಕಷ್ಟು ಚರ್ಚೆ ವಾದ-ವಿವಾದಗಳನ್ನು ಹುಟ್ಟುಹಾಕಿತು. ಬೆಳವಣಿಗೆ ಮತ್ತು ಯಶಸ್ಸಿಗೆ ತೀವ್ರವಾದ ಸಮರ್ಪಣೆ ಅಗತ್ಯ ಎಂದು ಕೆಲವರು ವಾದಿಸಿದರೆ, ಇತರರು ಕೆಲಸದ ಬದ್ಧತೆಗಳೊಂದಿಗೆ ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವುದರಲ್ಲಿ ಯಶಸ್ಸು ಕಂಡುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಕೆಲ ಉದ್ಯೋಗಿಗಳು ಹೆಚ್ಚುತ್ತಿರುವ ಕೆಲಸದ ಒತ್ತಡಗಳ ಬಗ್ಗೆ ತಮ್ಮ ಹತಾಶೆ ಮತ್ತು ಕಳವಳಗಳನ್ನು ವ್ಯಕ್ತಪಡಿಸುತ್ತಾರೆ.