ಬೆಂಗಳೂರು
ವಿಶ್ವ ಪರಂಪರಿಕ ಪಟ್ಟಿಯಲ್ಲಿರುವ ದೇಶದ ಪ್ರವಾಸಿ ತಾಣಗಳ ಪ್ರವೇಶ ಶುಲ್ಕವನ್ನ ಕೇಂದ್ರ ಸರ್ಕಾರ ಹೆಚ್ಚಿಸಿದ್ದು, ಇದರ ಬಿಸಿ ಇದೀಗ ರಾಜ್ಯದ ಸುಪ್ರಸಿದ್ಧ ಹಂಪಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಕಳೆದೆರಡು ವರುಷಗಳ ಹಿಂದೆ ಪ್ರವೇಶ ಶುಲ್ಕವನ್ನು ದುಪ್ಪಟ್ಟುಗೊಳಿಸಿದ್ದ ಪುರಾತತ್ವ ಇಲಾಖೆ ಇದೀಗ ಮತ್ತೊಮ್ಮೆ ಪ್ರವೇಶ ದರವನ್ನು ಶೇ 25 ರಷ್ಟು ಹೆಚ್ಚಳ ಮಾಡಿದೆ.
ವಿಶ್ವವಿಖ್ಯಾತ ಹಂಪಿಯ ವಿಜಯ ವಿಠ್ಠಲ ದೇವಸ್ಥಾನ, ಕಲ್ಲಿನತೇರು, ಸಂಗೀತ ಮಂಟಪ ಸೇರಿದಂತೆ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಇನ್ನು ಮುಂದೆ ದುಬಾರಿ ಪ್ರವೇಶ ದರ ತೆತ್ತಬೇಕಾಗಿದೆ. ಅದರಲ್ಲೂ ಬಯಲು ಮ್ಯೂಸಿಯಂ ಎಂದು ಹೆಸರು ವಾಸಿಯಾಗಿರುವ ಹಂಪಿಯ ಯುನೆಸ್ಕೋ ಪಟ್ಟಿಯಲ್ಲಿರುವ ಪ್ರಮುಖ ಸ್ಮಾರಕಗಳ ಪ್ರವೇಶ ಶುಲ್ಕವನ್ನು ಭಾರತೀಯರು 10 ರೂಪಾಯಿ ಹೆಚ್ಚಿಗೆ ನೀಡಬೇಕು. ವಿದೇಶಿ ಪ್ರವಾಸಿಗರು ನೂರು ರೂ ಹೆಚ್ಚು ಪಾವತಿಸಬೇಕು.
ಈ ಹಿಂದೆ ಯುನೆಸ್ಕೋ ಪಟ್ಟಿಯಲ್ಲಿರುವ ಭಾರತೀಯ ಸ್ಮಾರಕಗಳ ವೀಕ್ಷಣೆಗೆ ದೇಶಿಯ ಪ್ರವಾಸಿಗರು ತಲಾ 30 ರೂಪಾಯಿ ಟಿಕೆಟ್ ಪಡೆಯಬೇಕಿತ್ತು. ಆದರೆ ಈಗ 40 ರೂಪಾಯಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ವಿದೇಶಿ ಪ್ರವಾಸಿಗರು 500 ರೂಪಾಯಿ ಪ್ರವೇಶ ಶುಲ್ಕವನ್ನ ಭರಿಸಿ ಸ್ಮಾರಕ ವೀಕ್ಷಣೆ ಮಾಡಬೇಕಿತ್ತು. ಆದರೀಗ 600 ನೂರು ರೂಪಾಯಿ ಹಣವನ್ನು ಭರಿಸಬೇಕಿದೆ.
ಪುರಾತತ್ವ ಇಲಾಖೆಯ ಬಿ ಕೆಟಗರಿಯಲ್ಲಿ ಬರುವ ಬಳ್ಳಾರಿ ಜಿಲ್ಲೆಯ ಏಕಶಿಲಾ ಬೆಟ್ಟ ಬಳ್ಳಾರಿ ಕೋಟೆ ಪ್ರವೇಶ ಶುಲ್ಕದಲ್ಲಿಯೂ ಹೆಚ್ಚಳವಾಗಿದೆ. ಪ್ರವೇಶ ದರ 15 ರೂ.ನಿಂದ 25ಕ್ಕೆ, ವಿದೇಶಿಗ ಪ್ರವಾಸಿಗರಿಗೆ 200 ರೂ.ನಿಂದ 300 ರೂ.ಗೆ ಹೆಚ್ಚಿಸಿದೆ. ಚಿತ್ರೀಕರಣಕ್ಕೆ 50 ಸಾವಿರ ಶುಲ್ಕ, 10 ಸಾವಿರ ಭದ್ರತಾ ಠೇವಣಿ ಇಡಬೇಕಾಗಿದೆ.
ಇನ್ನು ಹಂಪಿ ಸ್ಮಾರಕದ ಬಳಿ ಚಿತ್ರೀಕರಣಕ್ಕೆ ದಿನವೊಂದಕ್ಕೆ ಒಂದು ಲಕ್ಷ ಪಾವತಿಸಬೇಕು. ಜೊತೆಗೆ ಭದ್ರತಾ ಠೇವಣಿಯಾಗಿ 50 ಸಾವಿರ ಇಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/1200px-Hampi_virupaksha_temple.gif)