ಕುತೂಹಲ ಮೂಡಿಸಿದ ಹೆಚ್.ಡಿ.ಡಿ – ಡಿ.ಕೆ.ಸುರೇಶ್ ಭೇಟಿ

ನವದೆಹಲಿ

    ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಆದೇಶ ಹೊರಬೀಳಲಿರುವ ಹಿನ್ನಲೆಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ನವದೆಹಲಿಯಲ್ಲಿಂದು ಸಂಸದ ಡಿ.ಕೆ.ಸುರೇಶ್ ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದರು.

   ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಕುರಿತ ಆದೇಶ ಹೊರಬೀಳುವ ವಿಚಾರದಲ್ಲಿ ಹೆಚ್.ಡಿ.ದೇವೇಗೌಡ ಅವರೊಂದಿಗೆ ಕಾನೂನು ಸಮರ ಕುರಿತು ಚರ್ಚಿಸಿದರು ಎನ್ನಲಾಗಿದೆ.ಭೇಟಿ ಬಳಿಕ ಹೆಚ್.ಡಿ.ದೇವೇಗೌಡ ಮಾತನಾಡಿ, ತಾವು ಪವಿತ್ರ ತೀರ್ಥ ಕ್ಷೇತ್ರವೊಂದರಲ್ಲಿ ಡಿ.ಕೆ.ಶಿವಕುಮಾರ್ ಗೆ ಒಳಿತಾಗಲೆಂದು ಪೂಜೆ ಸಲ್ಲಿಸಿ ಪ್ರಸಾದ ತಂದಿರುವುದಾಗಿ ಹೇಳಿದರು.
ದೇವರ ದಯೆಯಿಂದ ಡಿ.ಕೆ.ಶಿವಕುಮಾರ್ ಗೆ ಜಾಮೀನು ದೊರೆತು ಅವರು ಬಿಡುಗಡೆಯಾಗುವ ವಿಶ್ವಾಸವನ್ನು ದೇವೇಗೌಡ ವ್ಯಕ್ತಪಡಿಸಿದರು.

   ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ಹೊಸದೇನಲ್ಲ. ಕಳೆದ ಐದು ವರ್ಷದಿಂದ ಬಿಜೆಪಿ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದನ್ನು ನಾನು ಹೇಳುವ ಅಗತ್ಯವಿಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂಬುದನ್ನು ಅಧಿಕಾರದಲ್ಲಿರುವವರು ಮರೆಯಬಾರದು.

    ಬಿಜೆಪಿಯನ್ನು ವಿರೋಧಿಸುವವರ ವಿರುದ್ದ ನಿರಂತರ ಸೇಡಿನ ರಾಜಕಾರಣ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಿಹಾರ್ ಜೈಲಿನಲ್ಲಿರುವ ಶಿವಕುಮಾರ್ ಅವರನ್ನು ಭೇಟಿಯಾಗುವ ಉದ್ದೇಶದಿಂದಲೇ ದೆಹಲಿಗೆ ಆಗಮಿಸಿದ್ದೇನೆ. ಆದರೆ ಎರಡು ದಿನ ಮೊದಲೇ ಭೇಟಿಗೆ ಅನುಮತಿ ಪಡೆಯಬೇಕೆಂದು ಜೈಲು ಅಧಿಕಾರಿಗಳು ಹೇಳಿದ್ದರಿಂದ ಶಿವಕುಮಾರ್ ಭೇಟಿ ಸಾಧ್ಯವಾಗಲಿಲ್ಲ ಎಂದು‌ ಬೇಸರ ವ್ಯಕ್ತಪಡಿಸಿದರು.

     ಡಿ.ಕೆ. ಸುರೇಶ್ ಹೇಳಿಕೆ ಮಾತನಾಡಿ , ಹೆಚ್.ಡಿ. ದೇವೇಗೌಡ ಹಾಗೂ ರೇವಣ್ಣ ಸಹೋದರ ಶಿವಕುಮಾರ್ ಭೇಟಿಯಾಗಲು ಬಂದಿದ್ದರು. ಆದರೆ ಜೈಲು ಅಧಿಕಾರಿಗಳು ಭೇಟಿಗೆ ಕಾಲವಕಾಶ ನೀಡದ ಕಾರಣ ಅದು ಸಾಧ್ಯವಾಗಲಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಸಹ ತಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಇಂದು ಜಾಮೀನು ಅರ್ಜಿ ತೀರ್ಪು ಇದ್ದು ಸಹೋದರ ಬಿಡುಗಡೆಯಾಗುವ ವಿಶ್ವಾಸವಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap