ಜಿ ಎಸ್ ಟಿ ಜಾರಿಯಿಂದಲೆ ದೇಶದ ಆರ್ಥಿಕತೆ ಕುಸಿತವಾಗಿದೆ : ರಾಹುಲ್ ಗಾಂಧಿ

ನವದೆಹಲಿ
    ವಿಶ್ವದ ಐದು ಶ್ರೇಷ್ಠ ಆರ್ಥಿಕತೆಯಲ್ಲಿ ಭಾರತದ ಆರ್ಥಿಕತೆಯೂ ಒಂದಾಗಿತ್ತು. ಏಷ್ಯಾದ ಬಲಿಷ್ಟ ಆರ್ಥಿಕತೆಗಳಲ್ಲೊಂದಾಗಿತ್ತು. ಆದರೆ, ಇದೀಗ ಭಾರತದ ಜಿಡಿಪಿ ಸಾರ್ವಕಾಲಿಕ ಕುಸಿತ ಕಂಡಿದೆ. ಶೇ.-24ರಷ್ಟು ಋಣಾತ್ಮಕವಾಗಿ ಪಾತಾಳಕ್ಕೆ ಕುಸಿದಿದೆ ಎಂದು ಇತ್ತೀಚೆಗೆ ವರದಿ ಮಾಡಲಾಗಿತ್ತು.
 
    ಈ ವರದಿಗೆ ಅರ್ಥಶಾಸ್ತ್ರಜ್ಞರು ಅಕ್ಷರಶಃ ಹೌಹಾರಿದ್ದರು. ಇದರ ಬೆನ್ನಿಗೆ ವಿಡಿಯೋ ಮೂಲಕ ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ದ ಕಿಡಿಕಾರಿರುವ ರಾಹುಲ್‌ ಗಾಂಧಿ, “ದೋಷಪೂರಿತ ಜಿಎಸ್‌ಟಿ ಅನುಷ್ಠಾನವು ಇಡೀ ದೇಶದ ಆರ್ಥಿಕತೆಯನ್ನು ನಾಶಪಡಿಸಿದೆ. ಯಾವುದೇ ಆರ್ಥಿಕತೆಯ ಬೆನ್ನೆಲುಬಾದ ಅಸಂಘಟಿತ ವಲಯ ಜಿಎಸ್‌ಟಿಯಿಂದಾಗಿ ದೊಡ್ಡ ಹೊಡೆತ ತಿಂದಿದ್ದು ನಷ್ಟ ಅನುಭವಿಸಿದೆ. ದೇಶದ ಆರ್ಥಿಕ ಕುಸಿತಕ್ಕೆ ಇದು ಪ್ರಮುಖ ಕಾರಣ” ಎಂದು ಆರೋಪಿಸಿದ್ದಾರೆ.

   ದೇಶದ ಆರ್ಥಿಕ ಕುಸಿತದ ಕುರಿತು ವಿಡಿಯೋ ಮಾಡಿ ತಮ್ಮ ಖಾಸಗಿ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, “ಯುಪಿಎ ಸರ್ಕಾರದ ಸುಲಭ ತೆರಿಗೆ ವಿಧಿಸುವ ಕಲ್ಪನೆಯಾದ ಜಿಎಸ್‌ಟಿಯನ್ನು ಬಿಜೆಪಿ ಸರ್ಕಾರ ಸಂಕೀರ್ಣ ಮತ್ತು ಕಷ್ಟಕರವನ್ನಾಗಿ ಮಾಡಿದೆ. ಎನ್‌ಡಿಎ ಸರ್ಕಾರವು ಜಾರಿಗೆ ತಂದ ಜಿಎಸ್‌ಟಿ ವಿಭಿನ್ನವಾಗಿದೆ. ಯಾಕೆಂದರೆ ನಾಲ್ಕು ಹಂತದ ತೆರಿಗೆಗಳು ಶೇ.28 ರಷ್ಟಿದೆ. ಇದು ತುಂಬಾ ಸಂಕೀರ್ಣವಾಗಿದೆ ಮತ್ತು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ” ಎಂದು ಆರೋಪಿಸಿದ್ದಾರೆ.

   “ದೇಶದಲ್ಲಿ ತೆರಿಗೆ ದರಗಳ ನಾಲ್ಕು ಹಂತಗಳಲ್ಲಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಸಂಪನ್ಮೂಲಗಳನ್ನು ಹೊಂದಿರುವವರು ಇದನ್ನು ಅನುಸರಿಸಬಹುದು, ಆದರೆ ಸಣ್ಣ ಮತ್ತು ಅಲ್ಪ ವ್ಯವಹಾರಗಳು ಹೊಂದಿರುವವರು ಇದರಿಂದ ತೊಂದರೆ ಅನುಭವಿಸುತ್ತಾರೆ. ಕೇಂದ್ರ ಸರ್ಕಾರವು ಭಾರತದ ದೊಡ್ಡ 15 ರಿಂದ 20 ಕೈಗಾರಿಕೋದ್ಯಮಿಗಳಿಗೆ ಲಾಭ ಆಗುತಂತೆ ಮಾಡಲು ಈ ತೆರಿಗೆ ಪದ್ದತಿಯನ್ನು ಮಾಡಿದೆ” ಎಂದು ಅವರು ಆರೋಪಿಸಿದ್ದಾರೆ.

    “ಜಿಎಸ್‌ಟಿ ಸಂಪೂರ್ಣ ವೈಫಲ್ಯವಾಗಿದೆ, ಅದು ಯಶಸ್ವಿಯಾಗುವುದಿಲ್ಲ. ಇದು ಬಡವರ ಮೇಲೆ ಮತ್ತು ಸಣ್ಣ ಮತ್ತು ಮಧ್ಯಮ ವ್ಯವಹಾರಗಳ ಮೇಲಿನ ಆಕ್ರಮಣವಾಗಿದೆ. ಜಿಎಸ್‌ಟಿ ತೆರಿಗೆ ವ್ಯವಸ್ಥೆಯಲ್ಲ, ಇದು ಭಾರತದ ಬಡವರ ಮೇಲಿನ ಆಕ್ರಮಣ. ಇದು ಒಂದು ಸಣ್ಣ ಅಂಗಡಿಯವರು, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು, ರೈತರು ಮತ್ತು ಕಾರ್ಮಿಕರ ಮೇಲೆ ದಾಳಿ” ಎಂದು ಅವರು ತೀವ್ರ ದಾಳಿ ನಡೆಸಿದ್ದಾರೆ.

    ಈ ದಾಳಿಯನ್ನು ಗುರುತಿಸಿ ಮತ್ತು ಅದರ ವಿರುದ್ಧ ಒಟ್ಟಾಗಿ ನಿಲ್ಲಬೇಕು ಎಂದು ರಾಹುಲ್ ಗಾಂಧಿ ಕರೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಜಿಎಸ್‌ಟಿಯ ಫಲಿತಾಂಶವೇನು?ಎಂದು ಕೇಳಿರುವ ಅವರು, ಇಂದು ಭಾರತ ಸರ್ಕಾರಕ್ಕೆ ಜಿಎಸ್‌ಟಿ ಪರಿಹಾರದ ಹಣವನ್ನು ರಾಜ್ಯಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ನೌಕರರಿಗೆ ಹಣವನ್ನು ನೀಡಲು ರಾಜ್ಯಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

    ಜಿಎಸ್‌ಟಿ ಸಂಗ್ರಹ ಕುಸಿತದ ಬಗ್ಗೆ ಆಗಸ್ಟ್ 27 ರಂದು ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೊರೊನಾ ದೇವರ ಕಾರ್ಯವಾಗಿದ್ದು ಇದರಿಂದಾಗಿ ಜಿಎಸ್‌ಟಿ ಸಂಗ್ರಹ ಕುಸಿದಿದೆ ಎಂದು ಅಸಹಾಯಕತೆ ಪ್ರದರ್ಶಿಸಿದ್ದರು.ರಾಹುಲ್ ಗಾಂಧಿ ಕಳೆದ ಬುಧವಾರ ಪ್ರಸಾರ ಮಾಡಿದ್ದ ವಿಡಿಯೋದಲ್ಲಿ ನೋಟ್‌ಬ್ಯಾನ್ ವಿಷಯವನ್ನು ಮುಂದಿಟ್ಟು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದರು. ನೋಟ್‌ಬ್ಯಾನ್ ಭಾರತದ ಬಡವರು, ರೈತರು, ಕಾರ್ಮಿಕರು ಮತ್ತು ಸಣ್ಣ ಅಂಗಡಿಯವರ ಮೇಲಿನ ದಾಳಿ ಎಂದು ಆರೋಪಿಸಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link