ಸೆ.30 ರೊಳಗೆ ಕರ್ತಾರ್ ಪುರ ಹೆದ್ದಾರಿ ಕಾಮಗಾರಿ ಪೂರ್ಣ..!

ನವದೆಹಲಿ

    ಗುರ್ದಾಸ್ ಪುರ- ಅಮೃತಸರದ ಹೆದ್ದಾರಿ ಮೂಲಕ ಪಾಕಿಸ್ತಾನದ ಡೇರಾ ಬಾಬ ನಾನಕ್ ಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳ್ಳಲಿದೆ ಎಂದು ಗೃಹ ಸಚಿವಾಲಯ ಭಾನುವಾರ ತಿಳಿಸಿದೆ.

   ಡೇರಾ ಬಾಬಾ ನಾಯಕ್ -ಕರ್ತಾರ್ ಪುರ ಹೆದ್ದಾರಿಯ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಕಾಮಗಾರಿ ಕ್ಷಿಪ್ರ ಗತಿಯಲ್ಲಿ ಸಾಗುತ್ತಿದೆ. 4.19 ಕಿಮೀ ಉದ್ದದ ಹೆದ್ದಾರಿಯನ್ನು 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

   ಕೇಂದ್ರ ಸರ್ಕಾರ 2018ರ ನವೆಂಬರ್ 22ರಂದು ಕರ್ತಾರ್ ಪುರ ಕಾರಿಡಾರ್ ಯೋಜನೆಯ ಅಭಿವೃದ್ಧಿಗೆ ಅನುಮೋದನೆ ನೀಡಿತ್ತು. 2018ರ ನವೆಂಬರ್ 26ರಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅದರ ಶಂಕುಸ್ಥಾಪನೆ ನೆರವೇರಿಸಿದ್ದರು.
ಜನವರಿ 14ರಿಂದ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡು ಮೇ 20ಕ್ಕೆ ಪೂರ್ಣಗೊಂಡಿತ್ತು.

   ಯೋಜನೆಗೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗೆ ಮೂರು ಸುತ್ತಿನ ತಾಂತ್ರಿಕ ಮಾತುಕತೆ ನಡೆದಿದ್ದು, ಹಲವು ವಿಷಯಗಳ ಕುರಿತು ಚರ್ಚೆಯಾಗಿದೆ. ಈಗಾಗಲೇ ಭಾರತದ ರಾವಿ ನದಿಯ ಅಂತಾರಾಷ್ಟ್ರೀಯ ಸೇತುವೆಯ ಮಾದರಿಯಲ್ಲಿಯೇ ಪಾಕಿಸ್ತಾನ ದ ಬುಧಿ ರಾವಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಪಾಕಿಸ್ತಾನದ ಅಧಿಕಾರಿಗಳು ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

  ಭಾನುವಾರ ನಾಲ್ಕನೇ ಸುತ್ತಿನ ಸಭೆ ನಡೆದಿದೆ. ಭಾರತೀಯ ನಿಯೋಗ ಕಾರಿಡಾರ್ ಮಾರ್ಗದಲ್ಲಿ ನೆರೆ ಹಾವಳಿಯ ಕುರಿತು ಆತಂಕ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ನೆರೆ ರಾಷ್ಟ್ರಕ್ಕೆ ಸೂಚಿಸಿದೆ. ಭಾರತದ ಮಾದರಿಯಲ್ಲೇ ಪಾಕಿಸ್ತಾನ ಕೂಡ ಸೇತುವೆ ನಿರ್ಮಿಸಿದಲ್ಲಿ, ಯಾತ್ರಿಕರು ನೆರೆ ಸಮಸ್ಯೆಗೆ ಗುರಿಯಾಗುವುದನ್ನು ತಪ್ಪಿಸುವುದರ ಜೊತೆಗೆ, ವರ್ಷಪೂರ್ತಿ ತಡೆರಹಿತ ಯಾತ್ರೆಗೆ ಅವಕಾಶ ಕಲ್ಪಿಸಲಿದೆ ಎಂದು ಸಲಹೆ ನೀಡಿದೆ.

   ಪಾಕಿಸ್ತಾನ ಕೂಡ ರಾವಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಒಪ್ಪಿಗೆ ಸೂಚಿಸಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಗುರುನಾನಕ್ ದೇವ್ ಜಿ ಅವರ 550ನೇ ಜನ್ಮಶತಮಾನೋತ್ಸವದ ಅಂಗವಾಗಿ 2019ರ ನವೆಂಬರ್ ಒಳಗೆ ಕಾರಿಡಾರ್ ಪೂರ್ಣಗೊಳಿಸುವ ಪ್ರಸ್ತಾವನೆಯನ್ನು ಭಾರತ ಮುಂದಿಟ್ಟಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link