ಜೈಪುರ್:
ಮದುವೆಯಾದ ಆರು ತಿಂಗಳ ನಂತರ ಆಕೆ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪಾಲಕರು ಅದಾಗಲೇ ನಾಪತ್ತೆ ಪ್ರಕರಣ ದಾಖಲಿಸಿದ್ದರಿಂದ ಪೊಲೀಸರು ಆಕೆಯನ್ನು ಶಿಖಾ ಎಂದು ಗುರುತಿಸಿದರು. ಪತಿ ಪಂಕಜ್ ಬಾತ್ರಾ ಕೊಲೆಗಾರ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಗಂಡನನ್ನು ನಂಬಿ ಅವನೊಂದಿಗೆ ಹೊರಟಿದ್ದಕ್ಕೆ ಶಿಖಾ ಬರ್ಬರ ಹತ್ಯೆಯಾಗಿದ್ದಾಳೆ. ಈ ಘಟನೆ ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ನಡೆದಿದ್ದು, ಕಂಪ್ಲೀಟ್ ವಿವರ ಇಲ್ಲಿದೆ.
ಶಿಖಾ ಮತ್ತು ಪಂಕಜ್ ಇಬ್ಬರೂ ಬರೋಡಾ ಪ್ರಾದೇಶಿಕ ರಾಜಸ್ಥಾನ ಗ್ರಾಮೀಣ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಆರಂಭವಾದ ಪರಿಚಯ ಪ್ರೀತಿಗೆ ತಿರುಗಿತು. ಕಳೆದ ವರ್ಷ ಡಿಸೆಂಬರ್ 4 ರಂದು ಗೆಳೆಯ ಪಂಕಜ್ ಬಾತ್ರಾನನ್ನು ಶಿಖಾ ವಿವಾಹವಾದರು. ಇಷ್ಟಪಟ್ಟವನನ್ನೇ ಮದುವೆಯಾದ ಖುಷಿಯಲ್ಲಿ ಶಿಖಾ ಮುಳುಗಿದ್ದರು. ಆದರೆ, ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ.
ಮದುವೆಯಾದ 3 ತಿಂಗಳಾದ ಬಳಿಕ ಇಬ್ಬರ ನಡುವೆ ಜಗಳ ಶುರುವಾಯಿತು. ಕೆಲ ದಿನಗಳ ಹಿಂದೆ ಪಂಕಜ್ ಅವರನ್ನು ಇನ್ನೊಂದು ಶಾಖೆಗೆ ವರ್ಗಾಯಿಸಲಾಗಿತ್ತು. ಅಂದಿನಿಂದ ಇಬ್ಬರ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಹೀಗಾಗಿ ಶಿಖಾ ತನ್ನ ಹುಟ್ಟೂರಿಗೆ ಹೋದಳು. ಆದರೆ, ಇದೇ ತಿಂಗಳ 16ರಂದು ಪತಿ ಕರೆ ಮಾಡಿ ಸಮೀಪದ ಪಾರ್ಕ್ನಲ್ಲಿ ಇದ್ದೇನೆ, ನಿನ್ನೊಂದಿಗೆ ಮಾತನಾಡಬೇಕು ಬಾ ಎಂದು ಹೇಳಿ ಕರೆಸಿಕೊಂಡಿದ್ದ. ಹೀಗಾಗಿ ರಾತ್ರಿ 9 ಗಂಟೆಗೆ ಶಿಖಾ ಮನೆಯಿಂದ ಹೊರಟವಳು, ವಾಪಸ್ ಬರಲಿಲ್ಲ.
ಮಗಳು ಫೋನ್ ತೆಗೆಯದ ಕಾರಣ ಪಾಲಕರು ಕೂಡಲೇ ಪೊಲೀಸರಿಗೆ ದೂರು ನೀಡಿದರು. ಅಳಿಯ ಪಂಕಜ್ ಮೇಲೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆತನ ಫೋನ್ ಜಾಡನ್ನು ಪತ್ತೆ ಮಾಡಿದಾಗ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಅಲ್ಲದೇ ಶಿಖಾ ಅವರ ಫೋನ್ ಚೆಕ್ ಮಾಡಿದಾಗ ಲೊಕೇಶನ್ ತೋರಿಸಿದೆ. ಅಲ್ಲಿಗೆ ಹೋಗಿ ನೋಡಿದಾಗ ರಸ್ತೆ ಬದಿಯಲ್ಲಿ ಆಕೆ ಶವವಾಗಿ ಪತ್ತೆಯಾದಳು.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಲೆಮರೆಸಿಕೊಂಡಿದ್ದ ಶಿಖಾ ಪತಿ ಪಂಕಜ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆಕೆಯೊಂದಿಗೆ ಜಗಳವಾಡುವುದನ್ನು ಸಹಿಸದ ಪಂಕಜ್, ಪತ್ನಿಯನ್ನು ಕೊಲ್ಲಲು ಬಯಸಿದ್ದ. ಹೀಗಾಗಿ ಆಕೆಯನ್ನು ಪಾರ್ಕ್ ಕರೆದು, ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಾರಿನಲ್ಲೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಹೊರಗೆಸೆದು ಓಡಿ ಹೋಗಿದ್ದ. ಸದ್ಯ ತನಿಖೆ ಮುಂದುವರಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ