ಬೆಂಗಳೂರು:
ಕಳೆದ ಕೆಲ ದಿನಗಳ ಹಿಂದೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ಟಿಕೆಟ್ ಖರೀದಿಸಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಆರಂಭಿಸಿರುವ ಕ್ಯೂ ಆರ್ ಕೋಡ್ ಆಧಾರಿತ ಡಿಜಿಟಲ್ ಪಾವತಿಯು ಟಿಕೆಟ್ ಕೌಂಟರ್ಗಳಲ್ಲಿ ಉಂಟಾಗುತ್ತಿದ್ದ ಚಿಲ್ಲರೆ ಕಿರಿಕಿರಿಗೆ ನಿಧಾನವಾಗಿ ಬ್ರೇಕ್ ಹಾಕುತ್ತಿದೆ.
ಹೆಚ್ಚಿನ ನಿಲ್ದಾಣಗಳಲ್ಲಿ ನಿತ್ಯ ರೈಲಿನ ಹವಾನಿಯಂತ್ರಣ ರಹಿತ ಸ್ಲೀಪರ್, ಹವಾನಿಯಂತ್ರಿತ ಸ್ಲೀಪರ್ ಹಾಗೂ ಐಷಾರಾಮಿ ಕೋಚ್ಗಳಲ್ಲಿ ಸಂಚರಿಸುವ ಪ್ರಯಾಣಿಕರು ಆನ್ಲೈನ್ ಟಿಕೆಟ್ಗಳನ್ನು ಕಾಯ್ದಿರಿಸಿ, ಡಿಜಿಟಲ್ ಮೂಲಕ ಹಣ ಪಾವತಿಸಲು ಅವಕಾಶವಿದೆ. ಸಾಮಾನ್ಯ ಸಾಮಾನ್ಯ ಬೋಗಿಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೂ ಅನ್ವಯಿಸುವಂತೆ ಬೆಂಗಳೂರು ರೈಲ್ವೆ ವಿಭಾಗವು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಯುಪಿಐ ಸೇವೆ ಒದಗಿಸಿದ್ದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ.
ಈಗ ನಿತ್ಯ ಸರಾಸರಿ 200ಕ್ಕೂ ಹೆಚ್ಚು ಪ್ರಯಾಣಿಕರು ಕೆಎಸ್ಆರ್ ನಿಲ್ದಾಣದ ಕೌಂಟರ್ನಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸುತ್ತಿದ್ದಾರೆ. ಪ್ರಯಾಣಿಕರು ಹೋಗಬೇಕಾದ ಸ್ಥಳದ ಹೆಸರು ಹೇಳಿದ ತಕ್ಷಣ ಕೌಂಟರ್ನಲ್ಲಿ ಟಿಕೆಟ್ ಕೊಡಲಾಗುತ್ತದೆ. ನಂತರ ಅಲ್ಲಿ ಅಳವಡಿಸಲಾದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ವಿವಿಧ ಡಿಜಿಟಲ್ ಪಾವತಿ ವ್ಯವಸ್ಥೆ ಮೂಲಕ ಹಣ ಪಾವತಿಸಬಹುದಾಗಿದೆ. ಈ ಸೇವೆಯಿಂದ ಟಿಕೆಟ್ ಕೌಂಟರ್ನಲ್ಲಿ ಉಂಟಾಗುತ್ತಿದ್ದ ಕಿರಿಕಿರಿ ಕಡಿಮೆಯಾಗಿದ್ದು, ಪ್ರಯಾಣಿಕರು ನೆಮ್ಮದಿಯಿಂದ ಪ್ರಯಾಣಿಸಲು ಅನುವು ಮಾಡಿದೆ.
ದೇಶದಲ್ಲಿ ಪ್ರಥಮ ಬಾರಿಗೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ಕೆಎಸ್ಆರ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಕ್ಯೂ ಆರ್ ಕೋಡ್ ಆಧಾರಿತ ಯುಪಿಐ ಮೂಲಕ ಹಣ ಪಾವತಿಸಿ, ಟಿಕೆಟ್ ಖರೀದಿಸುವ ಸೇವೆ ಆರಂಭಿಸಿದೆ. ಕೆಎಸ್ಆರ್ ನಿಲ್ದಾಣದಲ್ಲಿ ಎರಡು, ದಂಡು ರೈಲು ನಿಲ್ದಾಣ (ಕಂಟೋನ್ಮೆಂಟ್) ದಲ್ಲಿ ಒಂದು ಡಿಜಿಟಲ್ ಹಣ ಪಾವತಿಯ ಕೌಂಟರ್ಗಳನ್ನು ತೆರೆಯಲಾಗಿದೆ
”ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್ ಖರೀದಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಎಲ್ಲ ರೈಲು ನಿಲ್ದಾಣಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ,” ಎಂದು ಬೆಂಗಳೂರು ವಿಭಾಗದ ರೈಲ್ವೆ ಅಧಿಕಾರಿಗಳು ತಿಳಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
![](https://prajapragathi.com/wp-content/uploads/2023/12/train-12.gif)