ಚಿಕ್ಕಬಳ್ಳಾಪುರ :
ಸೆ.೨೨ರಿಂದ ರಾಜ್ಯದ ಉದ್ದಗಲಕ್ಕೂ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-೨೦೨೫ರ ವೇಳೆಯಲ್ಲಿ ಒಕ್ಕಲಿಗ ಸಮು ದಾಯ ಜಾಗೃತರಾಗಿ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಕರಾರುವಕ್ಕಾಗಿ ಮಾಹಿತಿ ನೀಡಬೇಕು. ಜಾತಿ ಕಾಲಂನಲ್ಲಿ ತಪ್ಪದೆ ಒಕ್ಕಲಿಗ ಎಂದೇ ಬರೆಸಿ,ಉಪಜಾತಿಗಳನ್ನು ಬರೆಸಿ ಗೊಂದಲಕ್ಕೆ ಅವಕಾಶ ನೀಡಬೇಡಿ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಮುದಾಯದ ಮುಖಂಡರಿಗೆ ಕರೆ ನೀಡಿದರು.
ನಗರ ಹೊರವಲಯ ಎಸ್ಜೆಸಿಐಟಿ ಕ್ಯಾಂಪಸ್ ಬಿಜಿಎಸ್ ಸಭಾಂಗಣದಲ್ಲಿ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಏರ್ಪಡಿಸಿದ್ದ ಜನಾಂಗದ ಜಾತಿಗಣತಿ ಮತ್ತು ಸಾಮಾಜಿಕ-ಆರ್ಥಿಕ ಸಮೀಕ್ಷೆ ಕುರಿತು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಪ್ರತಿ ೧೦ ವರ್ಷಕ್ಕೊಮ್ಮೆ ಜಾತಿ ಗಣತಿ ಆಗಬೇಕು ಎಂದು ನಿಯಮವಿದ್ದರೂ ಕಾಲಕಾಲಕ್ಕೆ ಮಾಡುವಲ್ಲಿ ಆಡಳಿತ ಪಕ್ಷಗಳು ವಿಫಲವಾಗಿವೆ. ಆದರೆ ರಾಜ್ಯ ಸರಕಾರ ೨೦೧೩-೧೪ರಲ್ಲಿ ನಡೆಸಿದ್ದ ಕಾಂತರಾಜ್ ಆಯೋಗದ ವರದಿ ಸರಿಯಾಗಿ ನಡೆದಿಲ್ಲ ಎಂಬುದನ್ನು ಮನಗಂಡಿರುವ ಸರಕಾರ ಬಹಳ ವಿವೇಚನೆಯಿಂದ ಮರುಸಮೀಕ್ಷೆಗೆ ಅವಕಾಶ ನೀಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ರಾಜ್ಯ ಒಕ್ಕಲಿಗರ ಸಂಘವು ನಮ್ಮ ಸಮುದಾಯದ ಅಸ್ಮಿತೆಯ ಸಂಕೇತವಾಗಿದೆ. ಆಧ್ಯಾತ್ಮಿಕ, ಸಾಂಸ್ಕೃತಿಕ ಬಳುವಳಿಗೆ ಮಠ ಮಾನ್ಯಗಳು ಶ್ರೀರಕ್ಷೆಯಾಗಿದ್ದರೆ, ಸಮುದಾಯಕ್ಕೆ ಅನ್ಯಾಯವಾದಾಗ ಪ್ರಶ್ನಿಸಲು, ಸೂಕ್ತ ಹೋರಾಟ ರೂಪಿಸಲು ಸಂಘವಿದೆ.ನಾವು ಸಂಘಟಿತರಾದಾಗ ಮಾತ್ರವೇ ಸಂವಿಧಾನ ಬದ್ದ ಹಕ್ಕುಗಳನ್ನು ಪಡೆಯಲು ಸಾಧ್ಯವಿದೆ ಎಂದರು.
ಇಲ್ಲಿ ನಾವು ನೀವೆಲ್ಲಾ ಸೇರಿರುವುದು ಸಂಭ್ರಮದ ಕಾರಣಕ್ಕಾಗಿ ಅಲ್ಲ. ಬದಲಿಗೆ ಸಮುದಾಯದ ಜಾತಿ ಗಣತಿ ಬಗ್ಗೆ ಅರಿವು ಪಡೆಯಲು ಇಲ್ಲಿ ಸೇರಿದ್ದೇವೆ. ಆದ್ದರಿಂದ ನಮ್ಮ ಸಂಖ್ಯೆ ಮತ್ತು ಆರ್ಥಿಕ ಶೈಕ್ಷಣಿಕ ಸ್ಥಿತಿಗತಿಗಳನ್ನು ಕರಾರುವಾಕ್ಕಾಗಿ ದಾಖಲಿಸುವುದು ಹೇಗೆ? ಈವೇಳೆ ಎದುರಾಗುವ ಗೊ೦ದಲಗಳನ್ನು ಪರಿಹರಿಸಿಕೊಳ್ಳುವುದು ಹೇಗೆ?, ಯಾವ ಕಾಲಂನಲ್ಲಿ ಏನು ಬರೆಸಬೇಕು? ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ನಾವೆಲ್ಲಾ ಸೇರಿದ್ದೇವೆ ಎಂದರು.
ಸೆ.೨೨ರಿಂದ ನಿಮ್ಮ ಮನೆಗೆ ಸಮೀಕ್ಷೆ ಮಾಡಲು ಗಣತಿದಾರರು ಬರಲಿದ್ದಾರೆ. 1935ರಲ್ಲಿ ಜಾತಿ ಗಣತಿ ಆಗಿದೆ.ಅದು ಬಿಟ್ಟರೆ ಈಗ ಮಾತ್ರ ಆಗುತ್ತಿದೆ. ಮುಮದೆ ಯಾವಾಗ ಆಗುತ್ತದೆಯೋ ಗೊತ್ತಿಲ್ಲ. ಕಾಂತರಾಜು ಆಯೋಗದ ವರದಿಯಲ್ಲಿ ತಿಳಿಸಿರುವಂತೆ ಒಕ್ಕಲಿಗರ ಸಂಕ್ಯೆ ೬೧ ಲಕ್ಷ ಅಲ್ಲ,ಇದನ್ನು ಮೀರಿದೆ.ನಮ್ಮ ಅನುಮಾನ ನಿಜವಾಗಬೇಕಾದರೆ ನಾವೆಲ್ಲಾ ಖಚಿತ ಮಾಹಿತಿ ನೀಡುವುದು ಅಗತ್ಯ ಎಂದರು.
ನಾವೆಲ್ಲಾ ನಮ್ಮ ನಮ್ಮ ಸಮುದಾಯದ ಹೆಸರಿನಲ್ಲಿ ಮೀಸಲಾತಿ ಪಡೆದುಕೊಂಡಿದ್ದೇವೆ. ಆ ಮೂಲಕ ಸಾಕಷ್ಟು ಬೆಳವಣಿಗೆ ಕಂಡಿದ್ದೇವೆ.ಹೀಗಾಗಿ ಸಮುದಾಯದ ರಕ್ಷಣೆ ನಮ್ಮ ಹಕ್ಕಾಗಿದೆ. ಸಮೀಕ್ಷೆ ವೇಳೆ ಸರಿಯಾದ ನೀವು ಸರಿಯಾದ ಜನಸಂಖ್ಯೆ ನಮೂದಿಸಿ.ಪ್ರತಿಷ್ಟೆಯ ಕಾರ್ಯಕ್ರಮ ಇದಲ್ಲ.ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ನಾವು ಖುದ್ದು ಹಾಜರಾಗಿ ಸರಿಯಾದ ಮಾಹಿತಿ ನೀಡಬೇಕು.ಇದಕ್ಕಾಗಿ ೧೫ ದಿನಗಳ ಕಾಲ ಎಚ್ಚರಿಕೆ ಅಗತ್ಯ ಎಂದರು. ಪ್ರತಿ ಗ್ರಾಮದಲ್ಲಿ ಯುವಕರ ಪಡೆ ಈ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಮೀಕ್ಷೆಯಲ್ಲಿ ಕೇಳುವ ಮಾಹಿತಿ ಮನೆ ಮನೆಗೆ ಸಂಬಂಧಿಸಿದಂತೆ ಸತ್ಯದ ಮಾಹಿತಿ ಕೊಡಬೇಕು. ಕುಟುಂಬದ ಅನಸೂಚಿ ಸರಿಯಾಗಿ ನೀಡಬೇಕು.ಪದವಿ ಪೂರ್ಣಗೊಳ್ಳದಿದ್ದರೆ ಪಿಯುಸಿ ಎಂದೇ ಬರೆಸಿ, ಪ್ರತಿಷ್ಟೆಗಾಗಿ ಪದವಿ ಅಪೂರ್ಣವಾಗಿದ್ದರೂ ಪದವಿ ಪೂರ್ಣವಾಗಿದೆ ಎಂದು ಬರೆಸಬೇಡಿ. ಭೂಮಿ ಮಾಹಿತಿ ಕೇಳಿದಾಗ ಒಟ್ಟು ಭೂಮಿ ಬರೆಸದೆ ವಿಭಾಗ ಆಗಿದ್ದರೆ, ನಿಮ್ಮ ಹೆಸರಿನಲ್ಲಿರುವ ಭೂಮಿ ಪಹಣಿಯಲ್ಲಿ ಸಮೂದಾಗಿರುವಂತೆ ಅಷ್ಟನ್ನೇ ಬರೆಸಿ, ವಾಸ್ತವ ಸಂಗತಿಯನ್ನೇ ಬರೆಸಿ. ಸಂಬಳ ಸರಿಯಾಗಿ ಬರೆಯುವಾಗ ಎಚ್ಚರ.ಸರಕಾರಿ ಶಾಲೆಯಲ್ಲಿ ಓದುತ್ತಿದ್ದರೆ ಅದೇ ಬರೆಸಿ. ಬೋರ್ವೆಲ್ ೪ ಇವೆ ಎಂಬ ಹುಂಬತನ ಬೇಡ.ನೀರು ಸರಿಯಾಗಿ ಬರುತ್ತಿದ್ದರೆ ಅದನ್ನು ಮಾತ್ರ ಬರೆಸಿ ನೀರು ಬರದೇ ಇದ್ದರೆ ದಾಖಲಿಸುವುದು ಬೇಡ. ಇದಕ್ಕಾಗಿ ಯುವಕರನ್ನು ತರಬೇತಿಗೊಳಿಸಿ ಪ್ರತಿ ಊರಿನಲ್ಲೂ ಇಡುವ ಕೆಲಸವನ್ನು ಸಂಘವು ಮಾಡಬೇಕು ಎಂದು ಸಮುದಾಯದ ಮುಖಂಡರಿಗೆ ತಾಕೀತು ಮಾಡಿದರು.
ಅಹಿಂಸಾ ಹೋರಾಟದ ಮೂಲಕ ಬಡ್ತಿ ಮೀಸಲಾತಿ ಬಗ್ಗೆ ಹೋರಾಟ ಮಾಡಿ ಸಮುದಾಯಕ್ಕೆ ನ್ಯಾಯಕೊಡಿಸಿರುವ ಎಂ.ನಾಗರಾಜ್ ಸಮುದಾಯಕ್ಕೆ ಜಾಗೃತಿ ಮೂಡಿಸುತ್ತಾ ಮಾತನಾಡಿ ಗಣತಿ ವೇಳೆಯಲ್ಲಿ ನಮ್ಮ ಜವಾಬ್ದಾರಿ ಏನು ಎಂಬ ಬಗ್ಗೆ ಪ್ರತಿ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಿ ಸಮುದಾಯವನ್ನು ಎಚ್ಚರಗೊಳಿಸುವ ಕೆಲಸ ಮಾಡುತ್ತಿದ್ದೇವೆ.ಅದರಂತೆ ಚಿಕ್ಕಬಳ್ಳಾಪುರದಲ್ಲಿ ಸೋಮವಾರ ನಡೆಸುತ್ತಿದ್ದೇವೆ.
2014ರಲ್ಲಿ ಕಾಂತರಾಜು ಆಯೋಗದ ಮನೆಮನೆಗೆ ತೆರಳಿ ಗಣತಿ ಮಾಡಿಲ್ಲ ಎಂಬ ಕಾರಣಕ್ಕಾಗಿ ಜಾತಿ ಜನಗಣತಿ ವರದಿಯ ಗೊಂದಲ ನಿವಾರಣೆಗಾಗಿ ಈಗ ಸಮೀಕ್ಷೆ ನಡೆದಿದೆ ಎಂದರು.
ನಮ್ಮ ಜನಸಂಖ್ಯೆ ಕಾಂತರಾಜು ಆಯೋಗ ತಿಳಿಸಿರುವಂತೆ ೬೧ ಲಕ್ಷ ಅಷ್ಟೇ ಅಲ್ಲ .ಇದನ್ನು ಮೀರಿ ಇದೆ ಎಂಬ ಕಾರಣಕ್ಕೆ ಈಗ ಹೊಸದಾಗಿ ಗಣತಿ ಇದ್ದಾರೆ. ೨೦ದಿನ ಜನಗಣತಿ ನಡೆಯಲಿದೆ.ಖಚಿತ ಅಂಕಿ ಸಂಖ್ಯೆ ಪಡೆದುಕೊಳ್ಳಬಹುದು.ಹಿಂದುಳಿದ ವರ್ಗದ ಮೀಸಲಾತಿ ಪಡೆಯಲು ಅಂಕಿ ಅಂಶಗಳು ಸರಿಯಾಗಿ ತಿಳಿಸಿ ಎಂದು ಎಚ್ಚರಿಸಿದರು.ನಾವು ಮುಂದುವರೆದ ಜಾತಿ ಆದರೆ ಮೀಸಲಾತಿ ಕಳೆದುಕೊಳ್ಳುವ ಅಪಾಯವೂ ಇದೆ ಎಂದು ಎಚ್ಚರಿಸಿದರು.
ಕುಟುಂಬದ ಮುಖ್ಯಸ್ಥರ ಮಾಹಿತಿ ಸರಿಯಾಗಿ ನೀಡಿ.ಆಧಾರ್ ಚೀಟಿಯಲ್ಲಿರುವಂತೆ ತಪ್ಪದೆ ಮಾಹಿತಿ ನೀಡಿ. ಎಲೆಕ್ಷನ್ ಕಾರ್ಡ್ ಕಡ್ಡಾಯ ಏನೂ ಅಲ್ಲ.ಧರ್ಮದ ಬಗ್ಗೆ ಹಿಂದೂ ಎಂದೇ ಬರೆಸಿ.ಜಾತಿ ಕಾಲಂನಲ್ಲಿ ೨೦ ಜಾತಿ ಇದೆ.ಇದಕ್ಕೂ ಮೀರಿ ೧೧೫ ಜಾತಿ ಪಾಂಡು ಕುಮಾರ್ ಪುಸ್ತಕದಲ್ಲಿದೆ.ಆದರೆ ನಾವು ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ಮಾತ್ರ ಬರೆಸಿ ಉಪಜಾತಿ ನಿಮ್ಮ ಇಷ್ಟ.ಮಾತೃಭಾಷೆ ಕನ್ನಡ ಎಂದು ಬರೆಸಿ. ದೈಹಿಕ ಊನ ಇದ್ದರೆ, ಅಂಗವಿಕಲರಾಗಿದ್ದರೇ ಅದೇ ಬರೆಸಿ ಯುಡಿಐಡಿ ದಾಖಲಿಸಿ ಯಾವುದನ್ನು ಮುಚ್ಚಿಡಬಾರದು ಎಂದು ಸಲಹೆ ನೀಡಿದರು.
ವೈವಾಹಿಕ ಸ್ಥಾನ ಮಾನ ಬರೆಸುವುದು ಕಡ್ಡಾಯ. ಅನ್ಯಜಾತಿಗೆ ಸೇರಿದ್ದರೆ ಸಂಕೋಚ ಬೇಡ ಏನಿದೆಯೋ ಹಾಗೆ ಬರೆಸಿ.ವಯಸ್ಸು ಮತ್ತು ಓದಿದ ಶಾಲೆ ಮಾಹಿತಿ ನೀಡುವಾಗ ಆದಷ್ಟು ಸರ್ಕಾರಿ ಶಾಲೆ ಎಂದು ಬರೆಸುವುದು ಸೂಕ್ತ. ಇಲ್ಲದಿದ್ದಲ್ಲಿ ಮೀಸಲಾತಿ ಕಳೆದುಕೊಳ್ಳುವ ಅಪಾಯವೂ ಇದೆ.ಕನಿಷ್ಠ ವಿದ್ಯಾರ್ಹತೆ, ಗರಿಷ್ಠ ವಿದ್ಯಾರ್ಹತೆ ದಾಖಲಿಸಿ.ಹುಂಬರಾಗಿ ಮಾಹಿತಿ ನೀಡಿದರೆ ಸೌಲಭ್ಯ ತಪ್ಪಲಿದೆ.ಶಾಲೆ ಬಿಟ್ಟ ಕಾರಣ ಸರಿಯಾಗಿ ದಾಖಲಿಸಿ.ಸರ್ಕಾರಿ ಸೌಲಭ್ಯಗಳನ್ನು ಪಡೆದಿದ್ದರೆ ಹೇಳಿ.ರಿಸರ್ವೇಶನ್ ಕ್ಲೈಮ್ ದಾಖಲಿಸಿ.ಹಾಸ್ಟೆಲ್ ಪಡೆದಿದ್ದರೆ, ವಿದ್ಯಾರ್ಥಿ ವೇತನ ಪಡೆದಿದ್ಧರೆ, ಕೋಆಪರೇಟಿವ್ ಸಾಲ ಪಡೆದಿದ್ದರೆ ತಪ್ಪದೆ ದಾಖಲಿಸಿ.ನಿರುದ್ಯೋಗದ ಮಾಹಿತಿ ದಾಖಲಿಸಿ. ಉದ್ಯೋಗದ ಕಾಲಂನಲ್ಲಿ ಕೃಷಿಕ ಎಂದು ದಾಖಲಿಸಿ. ಕುಲಕಸುಬು -ಕೃಷಿ, ಪಶುಸಂಗೋಪನೆ ಅಷ್ಟೇ ಹೇಳಿ.ವಾರ್ಷಿಕ ಆದಾಯ ೮ ಲಕ್ಷಕ್ಕಿಂತ ಹೆಚ್ಚಿದ್ದರೆ ಹಿಂದುಳಿದ ವರ್ಗದ ಮೀಸಲಾಯಿಂದ ಹೊರಗುಳಿಯಬೇಕಾಗುತ್ತದೆ ಎಂದು ಹೇಳಿದರು.
ಈ ವೇಳೆ ಶಾಖಾಮಠದ ಶ್ರೀ ಮಂಗಳನಾಥಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ನಿರ್ದೇಶಕ ಯಲುವಹಳ್ಳಿ ರಮೇಶ್, ಡಾ.ರಮೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ,ಅಹಿಂಸಾ ನಾಗರಾಜ್ ಮತ್ತಿತರರು ಇದ್ದರು.








