ನವದೆಹಲಿ
ಪಾಕಿಸ್ತಾನದ ಬಹಾವಲ್ಪುರದಲ್ಲಿ ಜೈಶ್, ಲಷ್ಕರ್ ಭಯೋತ್ಪಾದಕರು ಸಭೆ ನಡೆಸಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಏಪ್ರಿಲ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಜನರ ಸಾವಿಗೆ ಕಾರಣವಾದ ಲಷ್ಕರ್-ಎ-ತೈಬಾ ಮತ್ತು ನವೆಂಬರ್ನಲ್ಲಿ ದೆಹಲಿಯ ಕೆಂಪುಕೋಟೆ ಬಳಿ 15 ಜನರ ಸಾವಿಗೆ ಕಾರಣವಾದ ಜೈಶ್-ಎ-ಮೊಹಮ್ಮದ್ ಎಂಬ ಎರಡು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳ ಉಗ್ರರ ಸಭೆ ಇದಾಗಿದ್ದು, ಫೋಟೊ ವೈರಲ್ ಆಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ಆಪರೇಷನ್ ಸಿಂದೂರ್ ಮೂಲಕ ನೀಡಿದ ಸಶಸ್ತ್ರ ಪ್ರತಿಕ್ರಿಯೆ ವೇಳೆ ದಾಳಿಗೊಳಗಾದ ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಪ್ರಧಾನ ಕಚೇರಿಯಲ್ಲಿ ಈ ಸಭೆ ನಡೆಯಿತು. ಎಲ್ಇಟಿ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಜೈಶ್ ಕಮಾಂಡರ್ಗಳೊಂದಿಗೆ ಕಾಣಿಸಿಕೊಂಡಿದ್ದಾನೆ.
ಪಾಕಿಸ್ತಾನ ಅತ್ಯಂತ ಮಾರಕ ಭಯೋತ್ಪಾದಕ ಸಂಘಟನೆ ಎನಿಸಿಕೊಂಡಿರುವ ಎಲ್ಇಟಿ ಮತ್ತು ಜೆಇಎಂ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಗುಪ್ತಚರ ಇಲಾಖೆ ನೀಡಿರುವ ಎಚ್ಚರಿಕೆಗೆ ಈ ಫೋಟೊ ಸಾಕ್ಷಿ ಎನಿಸಿಕೊಂಡಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲಕೋಟ್ನಲ್ಲಿ ಭಯೋತ್ಪಾದಕ ಉಡಾವಣಾ ಪ್ಯಾಡ್ಗಳನ್ನು ಪುನರ್ನಿರ್ಮಿಸಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಇದು ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ಪಡೆಗಳು ಗುರಿಯಾಗಿಸಿಕೊಂಡ ಮತ್ತೊಂದು ಭಯೋತ್ಪಾದಕ ತಾಣ.
ದೆಹಲಿಯ ಕೆಂಪು ಕೋಟೆಯ ಕಾರು ಬಾಂಬ್ ದಾಳಿಯ ನಂತರ ಜೈಶ್-ಎ-ಮೊಹಮ್ಮದ್ ಹೊಸ ದಾಳಿ ನಡೆಸಲು ಮತ್ತೊಂದು ಫಿದಾಯೀನ್ ಅಥವಾ ಆತ್ಮಹತ್ಯಾ ದಾಳಿ ತಂಡವನ್ನು ಸಿದ್ಧಪಡಿಸುತ್ತಿದೆ. ಇದಕ್ಕಾಗಿ ಹಣವನ್ನು ಸಂಗ್ರಹಿಸುತ್ತಿದೆ ಎಂದು ವರದಿಯಾಗಿತ್ತು.
ಕೆಂಪು ಕೋಟೆ ಸ್ಫೋಟದ ತನಿಖೆಯ ಸಮಯದಲ್ಲಿ ಪತ್ತೆಯಾಗಿರುವ ಸುಳಿವುಗಳು ಐತಿಹಾಸಿಕ ಕಟ್ಟಡದ ಬಳಿ ಹುಂಡೈ i20 ಕಾರಿಗೆ ತುಂಬಿದ ಅಮೋನಿಯಂ ನೈಟ್ರೇಟ್ ಇಂಧನ ತೈಲವನ್ನು ಸ್ಫೋಟಿಸಿರುವ ಘಟನೆಯತ್ತ ಬೆರಳು ತೋರಿಸಿದೆ. SadaPay ಎಂಬ ಪಾಕ್ ಅಪ್ಲಿಕೇಶನ್ ಸೇರಿದಂತೆ ಡಿಜಿಟಲ್ ವಿಧಾನಗಳ ಮೂಲಕ ನಿಧಿಸಂಗ್ರಹಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಾಸ್ತವವಾಗಿ ಕೆಂಪು ಕೋಟೆಯ ಕಾರ್ ಬಾಂಬ್ ದಾಳಿಗೆ ಕೆಲವೇ ದಿನಗಳ ಮೊದಲು ಗುಪ್ತಚರ ವರದಿಗಳು ಜಮ್ಮು-ಕಾಶ್ಮೀರವನ್ನು ಗುರಿಯಾಗಿಸಿಕೊಂಡು ಪಾಕ್ ಬೆಂಬಲಿತ ಭಯೋತ್ಪಾದಕ ಚಟುವಟಿಕೆಯಲ್ಲಿ ಆತಂಕಕಾರಿ ಮಟ್ಟಗಳು ಹೆಚ್ಚಾಗಿರುವುದನ್ನು ಬಹಿರಂಗಪಡಿಸಿದ್ದವು. ಆ ವರದಿಗಳು ಪಾಕ್ ಬೆಂಬಲದೊಂದಿಗೆ ಎಲ್ಇಟಿ ಮತ್ತು ಜೆಇಎಂ ಸಂಘಟಿತ ದಾಳಿಗಳ ಹೊಸ ಅಲೆಯಲ್ಲಿ ಸಜ್ಜುಗೊಳ್ಳುತ್ತಿರಬಹುದು ಎಂದು ಸೂಚಿಸಿದವು.
ವರದಿಯ ಪ್ರಕಾರ, ಭಯೋತ್ಪಾದಕ ಗುಂಪುಗಳು ಸೆಪ್ಟೆಂಬರ್ನಿಂದ ಒಳನುಸುಳುವಿಕೆ, ಸಂಚು ಮತ್ತು ಗಡಿಯಾಚೆಗಿನ ಲಾಜಿಸ್ಟಿಕ್ಸ್ ಅನ್ನು ಹೆಚ್ಚಿಸಿವೆ. ಜತೆಗೆ ಪಾಕಿಸ್ತಾನದ ವಿಶೇಷ ಸೇವಾ ಗುಂಪು ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಕಾರ್ಯಕರ್ತರ ಸಹಾಯದಿಂದ ಹಲವು LeT ಮತ್ತು JeM ಘಟಕಗಳು ಕಾಶ್ಮೀರವನ್ನು ಪ್ರವೇಶಿಸಿವೆ ಎನ್ನಲಾಗಿದೆ.ಆಪರೇಷನ್ ಸಿಂದೂರ್ ಸಮಯದಲ್ಲಿ ಭಿಂಬರ್-ಬರ್ನಾಲಾದಲ್ಲಿನ ಭಯೋತ್ಪಾದಕ ತಾಣವು ನಾಶವಾದ ನಂತರ ಮರ್ಕಜ್ ಎಲ್ಇಟಿಯ ಆತ್ಮಹತ್ಯಾ ಬಾಂಬರ್ ಘಟಕದ ಹೊಸ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.








