ಪ್ಯಾಲೆಸ್ತೀನ್‌ ಪರ ಪ್ರತಿಭಟನೆ: ಅಮೆರಿಕಾದಿಂದ ಭಾರತೀಯ ವಿದ್ಯಾರ್ಥಿನಿ ಗಡಿಪಾರು

ವಾಷಿಂಗ್ಟನ್‌:

    ಪ್ಯಾಲೆಸ್ತೀನ್‌ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ವಿದ್ಯಾರ್ಥಿ ವೀಸಾವನ್ನು ರದ್ದುಪಡಿಸಿದ ಕೆಲವೇ ದಿನಗಳ ನಂತರ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯನ್ನು ದೇಶದಿಂದ ಗಡಿಪಾರು ಮಾಡಲಾಗಿದೆ  ಎಂದು ತಿಳಿದು ಬಂದಿದೆ. ಅಮೆರಿಕದ ಗೃಹ ಭದ್ರತಾ ಇಲಾಖೆಯ ಹೇಳಿಕೆಯ ಪ್ರಕಾರ ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದ” ಕಾರಣಕ್ಕಾಗಿ ರಂಜನಿ ಶ್ರೀನಿವಾಸನ್ ಅವರ ವೀಸಾವನ್ನು ಮಾರ್ಚ್ 5 ರಂದು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ರಂಜನಿ ಶ್ರೀನಿವಾಸನ್ ಭಯೋತ್ಪಾದಕ ಸಂಘಟನೆಯಾದ ಹಮಾಸ್ ಅನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಮಾರ್ಚ್ 5, 2025 ರಂದು, ವಿದೇಶಾಂಗ ಇಲಾಖೆ ಅವರ ವೀಸಾವನ್ನು ರದ್ದುಗೊಳಿಸಿತು.

    ಮಾರ್ಚ್ 11 ರಂದು ಸ್ವಯಂ ಗಡೀಪಾರು ಮಾಡಲು ಕಸ್ಟಮ್ಸ್ ಮತ್ತು ಗಡಿ ರಕ್ಷಣೆ ಏಜೆನ್ಸಿ ಅಪ್ಲಿಕೇಶನ್ ಅನ್ನು ಬಳಸುವ ವೀಡಿಯೊ ತುಣುಕನ್ನು ಗೃಹ ಭದ್ರತಾ ಇಲಾಖೆ ಪಡೆದುಕೊಂಡಿದೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಹೋಮ್ಲ್ಯಾಂಡ್ ಸೆಕ್ಯುರಿಟಿ ಸೆಕ್ರೆಟರಿ ಕ್ರಿಸ್ಟಿ ನೋಮ್ ಅವರು ವಿಮಾನ ನಿಲ್ದಾಣದಲ್ಲಿ ರಂಜನಿ ಶ್ರೀನಿವಾಸನ್ ವೀಡಿಯೊವನ್ನು ಪೋಸ್ಟ್ ಮಾಡಿದ್ದು, “ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುವ ಯಾರಾದರೂ ದೇಶದಲ್ಲಿರಬಾರದು” ಎಂದು ಹೇಳಿದ್ದಾರೆ. 

   ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸಲು ಮತ್ತು ಅಧ್ಯಯನ ಮಾಡಲು ವೀಸಾ ನೀಡಲಾಗುತ್ತಿರುವುದು ಒಂದು ಸೌಭಾಗ್ಯ. ನೀವು ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುವಾಗ, ಆ ಸವಲತ್ತನ್ನು ರದ್ದುಗೊಳಿಸಬೇಕು ಮತ್ತು ನೀವು ಈ ದೇಶದಲ್ಲಿ ಇರಬಾರದು ಎಂದು ಅವರು ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

   ರಂಜನಿ ಶ್ರೀನಿವಾಸನ್‌ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿನಿಯಾಗಿದ್ದರು.ಕೊಲಂಬಿಯಾದ ಗ್ರಾಜುಯೇಟ್ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಪ್ಲಾನಿಂಗ್ ಮತ್ತು ಪ್ರಿಸರ್ವೇಶನ್‌ನಲ್ಲಿ ಸಂಶೋಧನೆ ನಡೆಸುತ್ತಿದ್ದರು. ಅಹಮದಾಬಾದ್‌ನ ಸಿಇಪಿಟಿ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಹಾರ್ವರ್ಡ್‌ನಿಂದ ಫುಲ್‌ಬ್ರೈಟ್ ನೆಹರು ಮತ್ತು ಇನ್‌ಲ್ಯಾಕ್ಸ್ ವಿದ್ಯಾರ್ಥಿವೇತನಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. 

   ಕಳೆದ ವರ್ಷ ಪ್ಯಾಲೆಸ್ಟೀನಿಯನ್ ಪರ ಪ್ರತಿಭಟನೆಗಳ ಸಂದರ್ಭದಲ್ಲಿ ಕ್ಯಾಂಪಸ್ ಕಟ್ಟಡವನ್ನು ವಶಪಡಿಸಿಕೊಂಡ ಕೆಲವು ವಿದ್ಯಾರ್ಥಿಗಳನ್ನು ಕೊಲಂಬಿಯಾ ವಿಶ್ವವಿದ್ಯಾಲಯವು  ಗುರುವಾರ ಅಮಾನತುಗೊಳಿಸಿದೆ ಎಂದು ತಿಳಿದು ಬಂದಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪದವಿ ಪಡೆದ ವಿದ್ಯಾರ್ಥಿಗಳ ಡಿಪ್ಲೊಮಾಗಳನ್ನು ಸಹ ಸಂಸ್ಥೆ ರದ್ದುಗೊಳಿಸಿದೆ. 2024 ರಲ್ಲಿ ಗಾಜಾದಲ್ಲಿ ನಡೆಯುತ್ತಿದ್ದ ಯುದ್ಧವನ್ನು ಪ್ರತಿಭಟಿಸಲು ಕಾಲೇಜಿನ ಹ್ಯಾಮಿಲ್ಟನ್ ಹಾಲ್ ಅನ್ನು ಆಕ್ರಮಿಸಿಕೊಂಡ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಂಗ ಮಂಡಳಿಯು ಆದೇಶಿಸಿದೆ ಎಂದು ವಿಶ್ವವಿದ್ಯಾಲಯವು ಇಮೇಲ್‌ನಲ್ಲಿ ತಿಳಿಸಿತ್ತು.