ಪಾರ್ಕಿಂಗ್ ವಿಚಾರ : ವಿಜ್ಞಾನಿಯನ್ನು ಹೊಡೆದು ಕೊಂದ ದುರುಳರು!

ಚಂಡೀಗಢ:

     ಮೊಹಾಲಿಯ ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ (ಐಐಎಸ್ಇಆರ್) ನಲ್ಲಿ ಕೆಲಸ ಮಾಡುತ್ತಿದ್ದ 39 ವರ್ಷದ ವಿಜ್ಞಾನಿಯೊಬ್ಬರು ಸೆಕ್ಟರ್ 67 ರಲ್ಲಿರುವ ತಮ್ಮ ಬಾಡಿಗೆ ಮನೆಯ ಬಳಿ ಪಾರ್ಕಿಂಗ್ ವಿಚಾರಕ್ಕೆ ನೆರೆಹೊರೆಯವರಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ. ವಿಜ್ಞಾನಿ ಡಾ.ಅಭಿಷೇಕ್ ಸ್ವರ್ಣಕರ್ ಮಂಗಳವಾರ(ಮಾರ್ಚ್‌ 11) ರಾತ್ರಿ ನೆರೆಮನೆಯ ಮಾಂಟಿಯೊಂದಿಗೆ ಪಾರ್ಕಿಂಗ್ ವಿಚಾರಕ್ಕೆ ವಾಗ್ವಾದ ನಡೆಸಿದ್ದಾರೆ. ಆ ವೇಳೆ ನೆರೆಮನೆಯಾತ .ಅಭಿಷೇಕ್ ಅನ್ನು ನೆಲಕ್ಕೆ ತಳ್ಳಿ ಒದ್ದಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video)ಆಗಿದೆ.

   ಮೂಲತಃ ಜಾರ್ಖಂಡ್‍ನ ಧನ್ಬಾದ್‍ನವರಾದ ಡಾ.ಸ್ವರ್ಣಕರ್ ಖ್ಯಾತ ವಿಜ್ಞಾನಿಯಾಗಿದ್ದು, ಕಾರ್ಯವು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಸುದ್ದಿಯಾಗಿತ್ತು. ಸ್ವಿಟ್ಜರ್ಲೆಂಡ್‍ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಇತ್ತೀಚೆಗೆ ಭಾರತಕ್ಕೆ ಮರಳಿದ್ದರು ಮತ್ತು ಐಐಎಸ್ಇಆರ್‌ಗೆ ಪ್ರೊಜೆಕ್ಟ್ ವಿಜ್ಞಾನಿಯಾಗಿ ಸೇರಿದ್ದರು. ಅದೂ ಅಲ್ಲದೇ, ಡಾ.ಅಭಿಷೇಕ್ ಇತ್ತೀಚೆಗೆ ಮೂತ್ರಪಿಂಡ ಕಸಿಗೆ ಒಳಗಾಗಿದ್ದರು ಮತ್ತು ಅವರ ಸಹೋದರಿ ತನ್ನ ಮೂತ್ರಪಿಂಡಗಳಲ್ಲಿ ಒಂದನ್ನು ಅವರಿಗೆ ದಾನ ಮಾಡಿದ್ದರು. ಹಾಗಾಗಿ ಅವರು ಡಯಾಲಿಸಿಸ್‌ನಲ್ಲಿದ್ದರು. ಹಲ್ಲೆಯಲ್ಲಿ ಅಭಿಷೇಕ್‌ಗೆ ಗಂಭೀರವಾಗಿ ಪೆಟ್ಟು ಬಿದ್ದ ಕಾರಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

   ಡಾ.ಸ್ವರ್ಣಕರ್ ಅವರು ಮೊಹಾಲಿಯ ಸೆಕ್ಟರ್ 67 ರಲ್ಲಿ ತಮ್ಮ ಹೆತ್ತವರೊಂದಿಗೆ ವಾಸಿಸುತ್ತಿದ್ದರು. ಅಂದು ನಡೆದ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ವಿಡಿಯೊದಲ್ಲಿ ಮಾಂಟಿ ಬೈಕಿನ ಬಳಿ ನಿಂತಿರುವುದು ಸೆರೆಯಾಗಿದೆ. ನಂತರ ಅಭಿಷೇಕ್ ಅವನ ಬೈಕ್‍ನ ಬಳಿ ಬಂದು ಅದನ್ನು ತೆಗೆಯಲು ಬಂದಾಗ ಅವರ ನಡುವೆ ವಾಗ್ವಾದ ನಡೆದಿದೆ. ಆ ವೇಳೆ ಮಾಂಟಿ ಡಾ. ಸ್ವರ್ಣಕರ್ ಅನ್ನು ನೆಲಕ್ಕೆ ತಳ್ಳಿ ಹೊಡೆಯಲು ಶುರುಮಾಡಿದ್ದಾನೆ.

   ಈ ಘಟನೆಗೆ ಸಂಬಂಧಿಸಿದಂತೆ ವಿಜ್ಞಾನಿಯ ಕುಟುಂಬವು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಈ ಬಗ್ಗೆ ಕೊಲೆಯ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮವನ್ನು ಕೈಗೊಳ್ಳಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಆರೋಪಿ ಮಾಂಟಿ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

   ಪಾರ್ಕಿಂಗ್ ವಿಚಾರಕ್ಕೆ ನೆರೆಹೊರೆಯವರು ಜಗಳವಾಡುವುದು ಇದೇ ಮೊದಲಲ್ಲ. ಈ ಹಿಂದೆ, ದೆಹಲಿ ಮತ್ತು ಇತರ ಪ್ರಮುಖ ನಗರಗಳಲ್ಲಿ ಪಾರ್ಕಿಂಗ್ ಸ್ಥಳಗಳಿಗಾಗಿ ನೆರೆಹೊರೆಯವರು ಜಗಳವಾಡುವ ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. 

   ಕ್ಷುಲಕ ಕಾರಣಕ್ಕೆ ಗಲಾಟೆ ಆಗಿ ಕೊಲೆಯಲ್ಲಿ ಅಂತ್ಯ ಕಂಡ ಸಾಕಷ್ಟು ಪ್ರಕರಣಗಳು ಇತ್ತೀಚೆಗೆ ನಡೆದಿವೆ. ಹಣದ ವಿಚಾರಕ್ಕೆ ಗಲಾಟೆ ಹಾಕಿ ಒಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಾರಪಲ್ಲಿ ಗೇಟ್ ಬಳಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಬೆಂಗಳೂರು ಬೆಳಂದೂರು ಮೂಲದ ಆನಂದ್ (36 ವರ್ಷ) ಎಂದು ಗುರುತಿಸಲಾಗಿದೆ.

Recent Articles

spot_img

Related Stories

Share via
Copy link