ಪಾವಗಡ :
ಡಿಸೆಂಬರ್ ಅಂತ್ಯದ ವೇಳೆಗೆ 550 ಕೋಟಿ ವೆಚ್ಚದ ತಾಲ್ಲೂಕಿನ 35 ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಂಡು 6 ಟಿಎಂಸಿ ನೀರು ಕೆರೆಗಳಿಗೆ ಹರಿಯಲಿದೆ ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭದ್ರಾಮೇಲ್ದಂಡೆ ಯೋಜನೆಯ ಇಂಜಿನಿಯರ್ಗಳ ಸಭೆ ನಡೆಸಿ ಮಾತನಾಡಿದರು. ಪಾವಗಡ ತಾಲ್ಲೂಕು ಹಾಗೂ ಚಳ್ಳಕೆರೆ ತಾಲ್ಲೂಕಿನ ಗಡಿ ಪ್ರದೇಶವಾದ ಕ್ಯಾದಿಕುಂಟೆ ಗ್ರಾಮದ ಬಳಿ ಬೃಹತ್ ಟ್ಯಾಂಕ್ ನಿರ್ಮಾಣ ಕಾರ್ಯ ಶರವೇಗದಲ್ಲಿ ನಡೆಯುತ್ತಿದೆ. ತಾಲ್ಲೂಕಿನ ಶೈಲಾಪುರ ಕೆರೆಯಿಂದ ಕೋಟಗುಡ್ಡ ಮಾರ್ಗವಾಗಿ ಪೋತಗಾನ ಹಳ್ಳಿ ಮಾರ್ಗದಲ್ಲೆ ಜಾಲೋಡು ಹಾಗೂ ಭೀಮನ ಕುಂಟೆ, ನಾಗಲಾಪುರ ಕೆರೆಗಳಿಗೂ ನೀರು ಸಾಗಿಸುವ ಮಾರ್ಗಗಳ ಬಗ್ಗೆ ಸಭೆಯಲ್ಲಿ ಎಂಜಿನಿಯರ್ಗಳ ಜೊತೆ ಸಮಾಲೋಚನೆ ನಡೆಸಿ, ವರ್ಷದ ಅಂತ್ಯಕ್ಕೆ ಚಳ್ಳಕೆರೆ, ಪಾವಗಡಕ್ಕೆ ನೀರು ಹರಿಸುವ ಕೆಲಸ ಆಗಲೆಬೇಕೆಂದರು.
ಸಭೆಯಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಯೋಜನೆಯಲ್ಲಿ ಆಯಾ ತಾಲ್ಲೂಕಿಗೆ ಹಂಚಿಕೆಯಾದ ನೀರನ್ನು ಆಯಾ ತಾಲ್ಲೂಕುಗಳಿಗೇ ಹಂಚಿಕೆ ಮಾಡಬೇಕು. ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ತಾವು ವಿಷಯ ಮಂಡಿಸಿ ಸಭೆಯ ಗಮನ ಸೆಳೆದಿದ್ದೇವೆ. ಚಳ್ಳಕೆರೆ ಮತ್ತು ಪಾವಗಡಕ್ಕೆ ಪೂರ್ಣ ಪ್ರಮಾಣದ ನೀರು ಹರಿಯಲಿದೆ. ಇದಕ್ಕೆ ನಾನು ಮತ್ತು ವೆಂಕಟರವಣಪ್ಪರವರು ಲಿಖಿತವಾಗಿ ಪತ್ರ ನೀಡಲಿದ್ದೇವೆ. ಗಡಿ ಭಾಗದ ತಾಲ್ಲೂಕುಗಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರವಹಿಸಿ ಕಾರ್ಯ ನಿರ್ವಹಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಯಥಾವತ್ತು ನೀರು ಹರಿಯದಿದ್ದಲ್ಲಿ ಈ ಎರಡು ತಾಲ್ಲೂಕುಗಳಿಗೆ ನಷ್ಟವಾಗಿ ಯೋಜನೆ ಜಾರಿಯಾದರೂ ಯಾವುದೇ ಪ್ರಯೋಜನ ಇಲ್ಲದಂತಾಗುತ್ತದೆ ಎಂದರು.
ಯೋಜನೆ ಪೂರ್ಣಗೊಳಿಸಲು ವೆಂಕಟರವಣಪ್ಪ ಹಾಗೂ ನಾನು ಯಾವುದೇ ಸಮಯದಲ್ಲಾದರು ನೀರು ಹರಿಸಲಿಕ್ಕೆ ಕೈ ಜೋಡಿಸಲಿದ್ದೇವೆ. ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಿ ವರ್ಷದ ಆಂತ್ಯಕ್ಕೆ ಚಳ್ಳಕೆರೆ ಹಾಗೂ ಪಾವಗಡದ ಜನತೆಗೆ ಶಾಸಕರಾಗಿ ನಾವು ನೀಡಿರುವ ಭರವಸೆ ಈಡೇರಿಸುವ ಕೆಲಸವಾಗಬೇಕೆಂದರು.
ಸಭೆಯಲ್ಲಿ ಅಪ್ಪರ್ ಭದ್ರಾ ಎಂಜಿನಿಯರ್ಗಳಾದ ರಾಘವನ್, ಮಧುಗಿರಿ ಇಇ ಶಿವಪ್ರಸಾದ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
