ವರ್ಷದ ಬೆಳೆ ನಷ್ಟದ ಆಧಾರದ ಮೇಲೆ ಪರಿಹಾರ ಕೊಡಲು ಆಗ್ರಹ

ಕೂಡ್ಲಿಗಿ:

     ಆಯಾ ವರ್ಷದ ಬೆಳೆ ನಷ್ಟವನ್ನು ಲೆಕ್ಕ ಹಾಕಿ, ನಷ್ಟದ ಆಧಾರದ ಮೇಲೆ ಫಸಲ್ ಬೀಮಾ ಯೋಜನೆಯಲ್ಲಿ ವಿಮೆಯನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ರೇವಣ್ಣ ಹೇಳಿದರು. ಗುರುವಾರ ತಾಲ್ಲೂಕು ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

     ಹಿಂದಿನ ಸಾಲಿನ ಇಳುವರಿಯನ್ನು ಪರಿಗಣಿಸದೆ, ಪ್ರಸಕ್ತ ಸಾಲಿನ ಬೆಳೆ ಇಳುವರಿಯನ್ನು ಮಾತ್ರ ಪರಿಗಣಿಸಿ ಬೆಳೆ ವಿಮೆ ನೀಡಬೇಕು. ಕಳೆದ ವರ್ಷ ಸಾಕಷ್ಟು ಬೆಳೆ ನಷ್ಟವಾಗಿದ್ದರೂ, ರೈತರು ಕಟ್ಟಿದ್ದ ವಿಮೆಗೆ ಒಂದು ರೂಪಾಯಿಯೂ ಪರಿಹಾರ ಬಂದಿಲ್ಲ. ಅದ್ದರಿಂದ ಈಗಿರುವ ವಿಮೆ ನೀತಿಯನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವೆಂಕಟೇಶ್ ನಾಯ್ಕ್ ಮಾತನಾಡಿ, ತಾಲ್ಲೂಕಿನಲ್ಲಿ ಈ ವರ್ಷ ಮಳೆ ಇಲ್ಲದೆ ಬರ ಬಿದ್ದಿದೆ. ಆದರೆ ರೈತರು ಕಟ್ಟಿದ ವಿಮೆಯ ಹಣವೂ ಸಹ ಮರಳಿ ಬರುತ್ತಿಲ್ಲ. ಇದರಿಂದ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ಏನು? ಫಲ ಎಂದರು.

     ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆಇಬಿ ಬಸವರಾಜ, ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ, ಸದಸ್ಯ ಚಿನ್ನಾಪ್ರಪ್ಪ, ಡಿ. ಕೊಟೇಶ, ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ರಾಘವೇಂದ್ರ, ಕೃಷಿಕ ಸಮಾಜದ ಅಧ್ಯಕ್ಷ ಓ. ತಿಪ್ಪೇರುದ್ರಪ್ಪ, ರೈತ ಮುಖಂಡರಾದ ದೇವರಮನೆ ಮಹೇಶ, ನಾಗರಾಜ, ಭರ್ಮಣ್ಣ, ಬಾಷಾ ಸಾಬ್, ಕೊಟೇಶಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ವಿ. ಪ್ರಕಾಶ, ರೇಷ್ಮೇ ಇಲಾಖೆಯ ಸುದೀರ್, ಪಶು ಸಂಗೋಪನೆ ಇಲಾಖೆಯ ಡಾ. ವಿನೋದ್ ಕುಮಾರ್, ತೋಟಗಾರಿಕೆಯ ನೀಲಪ್ಪ ಇದ್ದರು.

      ನಂತರ ಹಡಗಲಿ ಕೃಷಿ ವಿಸ್ತಾರಣಾ ವಿಜ್ಞಾನಿಗಳಾದ ಡಾ. ಹನುಮಂತಪ್ಪ ಶ್ರೀ ಹರಿ, ಡಾ. ಚಂದ್ರ ನಾಯ್ಕ್, ಡಾ. ದಾಸನಹಳ್ಳಿ ಹನುಮಂತಪ್ಪ ಅವರು ವಿವಿಧ ಬೆಳೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ರೈತರು ಅಭಿಯಾನದಲ್ಲಿ ಭಾಗಿಯಾಗಿದ್ದರು. ಸರ್ಕಾರದಿಂದ ರಿಯಾಯಿತಿ ದರದಲ್ಲಿ ನೀಡುವ ಅಧುನಿಕ ಕೃಷಿ ಉಪಕರಣಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

                          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link