ಹೊಸಪೇಟೆ:
ಹಂಪಿಯ ಆನೆಗೊಂದಿಯಲ್ಲಿ ಕಳೆದೊಂದು ವಾರದಿಂದ ಫೋಟೋ ಕ್ಲಿಕ್ಕಿಸಲು ಹಾಗೂ ವಿಡಿಯೋ ತೆಗೆದುಕೊಳ್ಳಲು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ)ಯ ಕೆಲ ಅಧಿಕಾರಿಗಳು ನಿರ್ಬಂಧ ಹೇರುತ್ತಿದ್ದಾರೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.ಸ್ಮಾರಕದ ಸುತ್ತಮುತ್ತಲಿನ ಹಸಿರು ಹೊದಿಕೆ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು, ಇಲ್ಲಿ ಫೋಟೋ ತೆಗೆದುಕೊಳ್ಳಲು ಅಧಿಕಾರಿಗಳು ಬಿಡುತ್ತಿಲ್ಲ. ಇದರಿಂದ ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಹಂಪಿಗೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರಆನೆಗೊಂದಿಯ ಆವರಣದಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಎಎಸ್ಐ ಸಿಬ್ಬಂದಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ.ಯಾವುದೇ ಸ್ಮಾರಕವನ್ನು ಸ್ಪರ್ಶಿಸುವುದು ಅಥವಾ ಹಾನಿ ಮಾಡುವುದು ಎಎಸ್ಐ ನಿಯಮಗಳು ಮತ್ತು ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂಬುದು ನಮಗೂ ತಿಳಿದಿದೆ, ಆದರೆ ಫೋಟೋಗಳನ್ನು ಕ್ಲಿಕ್ ಮಾಡದಂತೆ ನಮ್ಮ ಮೇಲೆ ನಿರ್ಬಂಧ ಹೇರುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ಎಎಸ್ಐ ಸಂರಕ್ಷಿತ ಪಾರಂಪರಿಕ ತಾಣಗಳಾದ ಪಟ್ಟದಕಲ್ಲು, ಬಾದಾಮಿಯಲ್ಲಿ ಯಾವೊಬ್ಬ ಅಧಿಕಾರಿಗಳು ಏನನ್ನೂ ಹೇಳುತ್ತಿಲ್ಲ. ಹಂಪಿಯಲ್ಲಿ ಮಾತ್ರ ಪ್ರವಾಸಿಗರಿಗೆ ಸಹಕಾರ ನೀಡುತ್ತಿಲ್ಲ. ಪ್ರವಾಸಿಗರಾದ ನಮಗೆ ಹಂಪಿಯ ಮೌಲ್ಯ ಮತ್ತು ಅದರ ಪರಂಪರೆ ಬಗ್ಗೆ ತಿಳಿದಿದೆ. ವಿಐಪಿಗಳು ಮತ್ತು ಜನಸಾಮಾನ್ಯರಿಗೆ ಇಲ್ಲಿ ಪ್ರತ್ಯೇಕ ನಿಯಮಗಳ ಹೇರಲಾಗುತ್ತಿದೆ. ನಾವು ಫೋಟೋಗಳನ್ನು ಕ್ಲಿಕ್ ಮಾಡಿದರೆ ನಮ್ಮ ವಿರುದ್ಧ ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ. ಪ್ರವಾಸಿಗರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವಂತೆ ಸಿಬ್ಬಂದಿಗಳಿಗ ಅಧಿಕಾರಿಗಳು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಿರಿಯ ಎಎಸ್ಐ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಆನೆಗುಂದಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಅನುಮತಿ ನೀಡದಿರುವ ಕುರಿತು ಪರಿಶೀಲನೆ ನಡೆಸಲಾಗುವುದು. ನಿಯಮಗಳ ಪ್ರಕಾರ, ಪ್ರವಾಸಿಗರಿಂದ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಗೆ ಯಾವುದೇ ನಿರ್ಬಂಧವಿಲ್ಲ. ಯಾವುದೇ ಸ್ಮಾರಕಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಥಳದಲ್ಲಿ ಡ್ಪೋಣ್ ಬಳಕೆಗೆ ASI ಅನುಮತಿ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ
