ಅಕಾಲಿಕ ಮಳೆ : ಕೈ ಕೊಡುವುದೇ ರಾಗಿ ಬೆಳೆ…?

ತುರುವೇಕೆರೆ:

ಮಳೆಯಿಂದ ರಾಗಿ ಬೆಳೆ ನೆಲಕ್ಕೆ ಬಿದ್ದಿರುವುದು

ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿಯಲ್ಲಿ ಅನ್ನದಾತ

   ತಿಂಗಳಿನಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಪ ಸ್ವಲ್ಪ ಕಟಾವಿಗೆ ಬಂದಿದ್ದ ರಾಗಿ ಬೆಳೆ ನೆಲ ಕಚ್ಚಿದ್ದು, ಮುಂದೆ ಹೇಗೆಂಬ ಚಿಂತೆ ತಾಲ್ಲೂಕಿನ ರೈತರಲ್ಲಿ ಕಾಡುತ್ತಿದೆ.
ಪ್ರಾರಂಭದಿಂದಲೂ ಹಿಂಗಾರು ಹಾಗೂ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ತಾಲೂಕಿನಲ್ಲಿ ನೂರಾರು ಹೆಕ್ಟೇರ್ ರಾಗಿ ಬೆಳೆ ಬಿತ್ತಲಾಗಿತ್ತು. ಈ ಬಾರಿ ಉತ್ತಮ ಬೆಳೆಯಾಗಲಿದೆ ಎಂದು ರೈತರು ಸಂತಸ ಪಡುತ್ತಿದ್ದರು. ಈಗಾಗಲೇ ತಾಲ್ಲೂಕಿನ ಕೆಲ ಭಾಗಗಳಲ್ಲಿ ಬೆಳೆ ಚೆನ್ನಾಗಿ ಬಂದು ನಿಂತಿದೆ. ಬೇಗ ಬಿತ್ತನೆ ಮಾಡಿದ್ದ ಕೆಲವು ರೈತರ ರಾಗಿ ಬೆಳೆ ಕೊಯ್ಲಿಗೆ ಬಂದಿದ್ದು, ಈ ಬಾರಿಯಾದರೂ ಬೆಳೆ ಕೈ ಸೇರುತ್ತಿದಲ್ಲ ಎಂಬ ಆಸೆ ಹೊತ್ತ ರೈತರಿಗೆ ಇದೀಗ ತಿಂಗಳಿಂದ ಎಡೆ ಬಿಡದೆ ಸುರಿದ ಮಳೆಯಿಂದ ಹುಲುಸಾಗಿ ಬೆಳೆದಿದ್ದ ರಾಗಿ ಪೈರು ನೆಲ ಕಚ್ಚುತ್ತಿದ್ದು, ರೈತರಲ್ಲಿ ನಿರಾಸೆ ಮೂಡಿಸಿದೆ.

 

 

ಮಳೆಯಿಂದ ಮನೆ ಗೋಡೆ ಕುಸಿದಿರುವುದು 

ಮಣ್ಣು ಪಾಲಾಗುತ್ತಿರುವ ಬೆಳೆ : ರಾಗಿ ತೆನೆಗಳು ಮಳೆಯಿಂದ ನೆನೆದು ತೆನೆಯ ಭಾರ ತಡೆಯಲಾಗದೆ ಹೊಲದಲ್ಲಿ ಬೀಳಲಿದ್ದು, ಹೆಚ್ಚು ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಕೆಲವು ರೈತರ ರಾಗಿ ಬೆಳೆ ಮಳೆಗೆ ಸಿಲುಕಿ ನೆಲಕ್ಕೆ ಬಾಗಿದ್ದು, ಮೊಳಕೆ ಒಡೆಯಲು ಆರಂಭಿಸಿದೆ. ಮಳೆಯಲ್ಲಿ ತೊಯ್ದ ರಾಗಿಹುಲ್ಲು ಹಾಳಾಗಿದ್ದು, ದನಕರುಗಳಿಗೂ ಸಹ ಮೇವು ಸಿಗುವುದು ದುಸ್ತರವಾಗಿದೆ. ಇದೇ ರೀತಿ ಮಳೆ ಮಂದುವರೆದರೆ ರಾಗಿ ಮೊಳಕೆಯೊಡಲಾರಂಭಿಸಿ ಬೆಳೆ ಮಣ್ಣು ಪಾಲಾಗುತ್ತದೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ರೈತನಿಗೆ ವರುಷ, ಮಳೆಗೆ ನಿಮಿಷ

ತೋಟದ ಬೆಳೆಗಳಿಗೆ ಸಮೃದ್ಧ ಮಳೆ : ಇತ್ತೀಚೆಗೆ ಸುರಿದ ಮಳೆ ಹಾಗೂ ಹೇಮಾವತಿ ನೀರಿನಿಂದಾಗಿ ತಾಲ್ಲೂಕಿನ ಕೆರೆ ಕಟ್ಟೆಗಳು ತುಂಬಿದ್ದು, ಅಡಕೆ, ಬಾಳೆ ಹಾಗೂ ತೆಂಗಿನ ತೋಟಗಳಿಗೆ ಅನುಕೂಲವಾಗಿದೆ. ಆದರೇ ತೆಂಗು, ಅಡಕೆ ತೋಟಗಳಲ್ಲಿ ಮಂಡಿಯುದ್ದ ನೀರು ಹರಿಯುತ್ತಿದ್ದು, ತೆಂಗು, ಅಡಕೆಕಾಯಿ ಕೀಳಲಾಗದೆ ಒಣಗಿ ಬಿದ್ದ ತೆಂಗಿನಕಾಯಿಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ಒಟ್ಟಿನಲ್ಲಿ ಈ ಬಾರಿ ಅತಿ ಹೆಚ್ಚು ಮಳೆಯಿಂದ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಅಭಾವ ತಗ್ಗಿದೆ. ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ವಾಣಿಜ್ಯ ಬೆಳೆಗಳಾದ ಅಡಕೆ, ತೆಂಗು, ಬಾಳೆಗಿಡಗಳಿಗೆ ಹೆಚ್ಚು ಅನುಕೂಲವಾಗಿದ್ದು, ಸದ್ಯಕ್ಕೆ ರೈತನಿಗೆ ಸ್ವಲ್ಪ ಮಟ್ಟಿನ ದುಗುಡ ಕಡಿಮೆಯಾಗಿದ್ದರೂ ರಾಗಿ ಬೆಳೆ ಕೈ ಕೊಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ

.

ಮಳೆಯಿಂದ ರಾಗಿ ಬೆಳೆ ನೆಲಕಚ್ಚಿ, ಮೊಳಕೆ ಬಂದಿರುವುದು.

ರೈತರಲ್ಲಿ ಆತಂಕ :

ಸದ್ಯ ಮಳೆ ನಿಂತರೆ, ರಾಗಿ ಬೆಳೆ ರೈತರ ಕೈ ಸೇರುವುದರಲ್ಲಿ ಅನುಮಾನವಿಲ್ಲ. ಆದರೇ ಮಳೆ ಹೀಗೆಯೆ ಮುಂದುವರಿದರೆ ಸುಮಾರು ಹಣ ಖರ್ಚು ಮಾಡಿ ಉತ್ತು-ಬಿತ್ತಿ ಬೆಳೆದ ಬೆಳೆ ಕೈಗೆ ಬಾರದೆ ದನ-ಕರುಗಳಿಗೆ ಮೇವು ಸಹ ಸಿಗದಂತಾಗಿ ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ಎಲ್ಲಿ ಸಿಲುಕಿಸುವುದೊ ಎಂಬ ಭಯ ರೈತರಲ್ಲಿ ಕಾಡಲಾರಂಭಿಸಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಸಿಲುಕಿ ನಲುಗುತ್ತಿರುವ ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗಳು ಕೊನೆ ಕ್ಷಣದಲ್ಲಿ ಕೈಗೆ ಬಾರದಿದ್ದರೆ ಮುಂದೆ ಕುಟುಂಬ ನಿರ್ವಹಣೆ ಮಾಡುವುದಾದರೂ ಹೇಗೆ? ಎಂಬ ಚಿಂತೆಯಲ್ಲಿ ತೊಡಗಿದ್ದಾನೆ.

ತಿಂಗಳಿಂದಲೂ ಸುರಿಯುತ್ತಿರುವ ಸತತ ಮಳೆಯಿಂದಾಗಿ ರೈತರ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಮುಂದೆಯೂ ಇದೇ ರೀತಿ ಮಳೆ ಮುಂದುವರಿದಲ್ಲಿ ಕೊಯ್ಲಿಗೆ ಬಂದಿರುವ ರಾಗಿ ಬೆಳೆ ಸಂಪೂರ್ಣ ನೆಲ ಕಚ್ಚಲಿದೆ. ಅಕಾಲಿಕ ಮಳೆಯಿಂದಾಗಿ ಅಲ್ಪ-ಸ್ವಲ್ಪ ಬಂದಿದ್ದ ರಾಗಿ ಬೆಳೆ ಕೈ ಕೊಟ್ಟಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
-ಅರಳೀಕೆರೆ ಶಿವಲಿಂಗಪ್ಪ, ರೈತ

ಮಳೆಯಿಂದ ಮನೆಗೋಡೆ ಕುಸಿತ:

ಸತತ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನಲ್ಲಿ ಹಲವಾರು ಮನೆಗಳು ಕುಸಿದಿವೆ. ತಾಲೂಕಿನ ಡೊಂಕಿಹಳ್ಳಿಯಲ್ಲಿ ಹೆಂಚಿನ ಮನೆಯ ಗೋಡೆ ಶನಿವಾರ ಬೆಳಗ್ಗೆ ಕುಸಿದು ಬಿದ್ದಿದೆ. ಇದೇ ವೇಳೆ ಮನೆಯ ಪಕ್ಕ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮೇಲೆ ಗೋಡೆ ಬಿದ್ದ ಪರಿಣಾಮ ಟ್ರ್ಯಾಕ್ಟರ್ ಜಖಂಗೊಂಡಿದೆ. ತಾಲ್ಲೂಕಿನ ಇತರೆಡೆಯೂ ಮನೆಗಳು ಕುಸಿದು ಅಪಾರ ನಷ್ಟವಾಗಿವೆ ಎಂದು ತಿಳಿದು ಬಂದಿದೆ. ಅದೃಷ್ಠವಶಾತ್ ತಾಲ್ಲೂಕಿನಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ನೆಮ್ಮದಿಯ ಸಂಗತಿಯಾಗಿದೆ.

  -ಮಲ್ಲಿಕಾರ್ಜುನ ದುಂಡ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

Recent Articles

spot_img

Related Stories

Share via
Copy link