ತುರುವೇಕೆರೆ :
ರೈತ ವಿರೋಧಿ ಕಾಯ್ದೆಗಳ ವಿರುದ್ದ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಬೆಂಬಲ ನೀಡಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಿಐಟಿಯು, ಕಟ್ಟಡ ಕಾರ್ಮಿಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಗುರುವಾರ ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ ಬಳಿ ರಸ್ತೆ ತಡೆ ನೆಡೆಸಿ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ಕೇಂದ್ರ ಸರ್ಕಾರ ಹೋರಾಟ ಮಾಡುತ್ತಿರುವ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಪೊಲೀಸರು, ಸೈನಿಕರನ್ನು ಬಳಸಿ ರೈತರ ಮೇಲೆ ಲಾಟಿ ಚಾರ್ಜ್, ಜಲ ಪಿರಂಗಿ ಪ್ರಯೋಗಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿ ಜನ ವಿರೋಧಿ ಆಡಳಿತ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಹಿಟ್ಲರ್ ಆಡಳಿತ ನಡಸುತ್ತಿದ್ದಾರೆ ಎಂದು ಆರೋಪಿಸಿದರು.
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳಿಗೆ ತಿದ್ದುಪಡಿ ತರುವ ಉದ್ದೇಶವಾದರೂ ಏನು. ಈ ಕೇಂದ್ರ ಸರ್ಕಾರ ಕೇವಲ ಕಾರ್ಪೊರೇಟ್, ಎಂ.ಎನ್.ಸಿ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದ್ದು ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಪ್ರಧಾನ ಮಂತ್ರಿಯಾಗಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಮಾರಕ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಕೆಲವು ಗಂಟೆಗಳು ರಸ್ತೆ ಪಕ್ಕದಲ್ಲಿ ಪ್ರತಿಭಟನೆ ನಡೆಸಿದ ರೈತ ಸಂಘದ ಕಾರ್ಯಕರ್ತರು ನಂತರ ರಸ್ತೆ ಮಧ್ಯ ಕುಳಿತು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸಂಘದ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಸ್ಥಳದಲ್ಲಿದ್ದ ಸಿಪಿಐ ನವೀನ್ ಹಾಗೂ ಎಸ್.ಐ ಪ್ರೀತಂ ರಸ್ತೆ ತಡೆ ಕೈಬಿಡುವಂತೆ ಮನವಿ ಮಾಡಿದರೂ ಜಗ್ಗದ ಪ್ರತಿಭಟನಕಾರರು ಸರ್ಕಾರ, ಪೊಲೀಸ್ ಇಲಾಖೆ ನಮ್ಮನ್ನು ಆರೆಸ್ಟ್ ಮಾಡಿ ನಿಮ್ಮ ಕಾನೂನು ಕ್ರಮ ಕೈಗೊಳ್ಳಿ ಇಲ್ಲವೇ ತಹಸೀಲ್ದಾರ್ ಅವರನ್ನು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ತಹಶೀಲ್ದಾರ್ ನಯಿಂಉನ್ನಿಸಾ ಆಗಮಿಸಿ ಮನವಿ ಸ್ವೀಕರಿಸುವ ಮೂಲಕ ರಸ್ತೆ ತಡೆಯನ್ನು ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ತಾಳಕೆರೆ ನಾಗೇಂದ್ರ, ಉಪಾಧ್ಯಕ್ಷರು ಗಂಗಾಧರಯ್ಯ, ಮಂಡಿ ಮಲ್ಲಪ್ಪ, ಸಿಐಟಿಯು ಸತೀಶ್, ಕಟ್ಟಡ ಕಾರ್ಮಿಕರ ಸಂಘದ ಅದ್ಯಕ್ಷ ಮಂಜುನಾಥ್, ರೈತ ಸಂಘದ ಮುಖಂಡರಾದ ಹಳೇಸಂಪಿಗೆ ಕೀರ್ತಿ, ವಿಶ್ವರಾದ್ಯ, ದ್ಯಾಮೇಗೌಡ, ಅನಿಲ್, ಬಸ್ತಿಹಳ್ಳಿ ರಾಜಣ್ಣ ಸೇರಿದಂತೆ ರೈತರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
