ಹುಳಿಯಾರು:
ನಕಲಿ ದಾಖಲೆ ಸೃಷ್ಠಿ | ಸದಸ್ಯರ ಹಕ್ಕು ಚ್ಯುತಿ | ಪೋರ್ಜರಿ ಸಹಿ ಆರೋಪ
ಹುಳಿಯಾರು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಅವರನ್ನು ಅಮಾನತ್ತು ಮಾಡುವಂತೆ ಪಪಂ ಅಧ್ಯಕ್ಷ, ಉಪಾಧ್ಯಕ್ಷೆ ಹಾಗೂ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದ ಘಟನೆ ಬುಧವಾರ ಪಪಂ ಪಂಚಾಯ್ತಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಹುಳಿಯಾರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ 2 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಚುನಾಯಿತ ಸದಸ್ಯರ ಸಾಮಾನ್ಯ ಸಭೆಯನ್ನು ಅಧ್ಯಕ್ಷ ಕೆ.ಎಂ.ಎಲ್.ಕಿರಣ್ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕರೆಯಲಾಗಿತ್ತು. ಸಭೆಯ ಆರಂಭದಿಂದ ಕೊನೆಯವರೆಗೂ ಉಡಾಫೆ ಉತ್ತರ ಕೊಡುವ,
ಕರ್ತವ್ಯ ಲೋಪ ಎಸಗಿರುವ, ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ವಿಫಲರಾಗಿರುವ ಮುಖ್ಯಾಧಿಕಾರಿಯನ್ನು ಅಮಾನತ್ತು ಮಾಡುವಂತೆ ಸಭೆಯಲ್ಲಿ ನಿರ್ಣಯಿಸಿ ಮೇಲಧಿಕಾರಿಗಳಿಗೆ ರವಾನಿಸುವಂತೆ ಸಭೆ ಒಕ್ಕೊರಲಿನಿಂದ ಒತ್ತಾಯಿಸಿತು. ಬಹುಮುಖ್ಯವಾಗಿ ಅಧ್ಯಕ್ಷ ಕಿರಣ್ಕುಮಾರ್ ಅವರೇ ಮುಖ್ಯಾಧಿಕಾರಿ ವಿರುದ್ಧ ಆರೋಪ ಮಾಡಿದರಲ್ಲದೆ ಅನೇಕ ಬಾರಿ ಏರಿದ ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಸಹ ನಡೆಯಿತು.
ಬಿಲ್ ಪತ್ತೆಗಾಗಿ ಹೈಡ್ರಾಮಾ :
ಸಭೆಯ ಆರಂಭದಲ್ಲೆ ಅಕ್ಟೋಬರ್ ಮಾಹೆಯ ಜಮೆ-ಖರ್ಚು ಅಂಗೀಕರಿಸುವ ವಿಚಾರದಲ್ಲಿ ಯಗಚಿ ಟ್ರೇಡರ್ಸ್ನ 18,260 ರೂ. ಬಿಲ್ ಯಾವ ಉದ್ದೇಶಕ್ಕೆ ವೆಚ್ಚ ಮಾಡಲಾಗಿದೆ ಎಂದು ಸದಸ್ಯ ಜಹೀರ್ಸಾಬ್ ಹಾಗೂ ದಸ್ತುಗಿರಿಸಾಬ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ಮುಖ್ಯಾಧಿಕಾರಿಯಾದಿಯಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಸಿಬ್ಬಂದಿ ವರ್ಗದವರೆಲ್ಲರೂ ತಡವರಿಸಿದರು.
ಯಾರೊಬ್ಬರೂ ಸರಿಯಾದ ಮಾಹಿತಿ ನೀಡದಿದ್ದಾಗ ಬಿಲ್ ತರಿಸಿದರೆ ಗೊತ್ತಾಗುತ್ತದೆಂದು ಬಿಲ್ ತರಲು ಅಧ್ಯಕ್ಷರು ಸೂಚಿಸಿದರು. ಆಗ ಅಚ್ಚರಿ ಎನ್ನುವಂತೆ ಮೊದಲು ಬಿಲ್ ಕಲೆಕ್ಟರ್ ಹೋದರು, 10-15 ನಿಮಿಷಗಳಾದರೂ ಅವರು ಬಾರದಿದ್ದಾಗ ಪರಿಸರ ಅಧಿಕಾರಿ ಹೋದರು, ನಂತರ ಎಂಜಿನಿಯರ್, ಕೊನೆಗೆ ಮುಖ್ಯಾಧಿಕಾರಿಯೂ ಹೋದರು.
ಹೀಗೆ ಸಭೆಯಲ್ಲಿದ್ದ ಪಪಂ ಸಿಬ್ಬಂದಿಗಳೆಲ್ಲ ಹೋದರೂ ಬಿಲ್ ಪ್ರತಿ ಮಾತ್ರ ತರಲಿಲ್ಲ. ಹೀಗೆ ಒಂದೂವರೆ ಗಂಟೆ ಬಿಲ್ ಹುಡುಕಲು ಸಮಯ ವ್ಯರ್ಥ ಮಾಡಿದರು.
ಲೆಕ್ಕಪತ್ರ ತನಿಖೆಗೆ ನಡಾವಳಿ :
ಅಂತಿಮವಾಗಿ ಅಧ್ಯಕ್ಷರು, ಸದಸ್ಯರು ಏರಿದ ಧ್ವನಿಯಲ್ಲಿ ಬೇಗ ಬರುವಂತೆ ಗಲಾಟೆ ಮಾಡಲಾಗಿ ಮುಖ್ಯಾಧಿಕಾರಿ ಸಭೆಗೆ ಓಡೋಡಿ ಬಂದು, ಇದೊಂದು ಬಿಲ್ ಪ್ರತಿ ಮಿಸ್ ಆಗಿದೆ. ಸಮಯಾವಕಾಶ ಕೊಟ್ಟರೆ ಹುಡುಕಿ ಕೊಡುತ್ತೇನೆ ಎಂದರಲ್ಲದೆ ನಾವೇನು ದುಡ್ಡನ್ನು ಮನೆಗೆ ತೆಗೆದುಕೊಂಡು ಹೋಗಿಲ್ಲ. ನ್ಯಾಯಯುತವಾಗಿ ಖರ್ಚು ಮಾಡಿದ್ದೇನೆ ಎಂದರು.
ಇದರಿಂದ ಸದಸ್ಯರು ಆಕ್ರೋಶಗೊಂಡು ಈ ರೀತಿಯ ಉಡಾಫೆ ಉತ್ತರ ಕೊಡುವ ಹಾಗೂ ಒಂದೂವರೆ ಗಂಟೆ ಸಭೆಯಿಂದ ಹೊರಹೋಗಿ ಸದಸ್ಯರ ಸಮಯ ವ್ಯರ್ಥ ಮಾಡಿದ್ದೇಕೆ? ಅಲ್ಲದೆ ನಕಲಿ ಬಿಲ್ ಸೃಷ್ಠಿಗೆ ಈಗ ಸಮಯ ಕೇಳುತ್ತಿದ್ದು, ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸದ ಮುಖ್ಯಾಧಿಕಾರಿಯನ್ನು ಅಮಾನತ್ತು ಮಾಡುವಂತೆಯೂ ಹಾಗೂ ಕಳೆದ 2-3 ವರ್ಷಗಳ ಲೆಕ್ಕಪತ್ರ ತನಿಖೆ ಮಾಡುವಂತೆಯೂ ಪಟ್ಟು ಹಿಡಿದು ಸಭಾ ನಡಾವಳಿ ಬರೆಸಿದರು.
ಮಳಿಗೆಗಳಿಗೆ ಇಷ್ಟು ಕಡಿಮೆ ಬಾಡಿಗೆಯೇ…? :
ನವೆಂಬರ್ ಮಾಹೆಯ ಜಮೆ-ಖರ್ಚು ಮಂಡಿಸುವಾಗ ಪಂಚಾಯ್ತಿ ಮಳಿಗೆಗಳ ಬಾಡಿಗೆ ಬಾಯ್ತು 10 ಸಾವಿರ ರೂ. ಜಮೆಯಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಯಾಗಿ ಸದಸ್ಯ ಎಸ್ಆರ್ಎಸ್ ದಯಾನಂದ್ ಅವರು ಅಕ್ಟೋಬರ್ ಮಾಹೆಯಲ್ಲಿ 1 ರೂಪಾಯಿ ಬಾಡಿಗೆ ಬಂದಿಲ್ಲ. ನವೆಂಬರ್ ಮಾಹೆಯಲ್ಲಿ 10 ಸಾವಿರ ರೂ. ಬಂದಿದೆ.
ಪಂಚಾಯ್ತಿಯ 52 ವಾಣಿಜ್ಯ ಮಳಿಗೆಗಳಿದ್ದು, ಇಷ್ಟು ಕಡಿಮೆ ಬಾಡಿಕೆ ಏಕೆ ಕಟ್ಟಿಸಿಕೊಳ್ಳುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಇದಕ್ಕೆ ಸಿಬ್ಬಂದಿ ಪ್ರದೀಪ್ ಅವರು ಪ್ರತಕ್ರಿಯಿಸಿ ಬಾಡಿಗೆದಾರರೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಮಾಡುತ್ತಿದ್ದು, ಒಬ್ಬೊಬ್ಬರು 3 ಸಾವಿರ ರೂಪಾಯಿಯಂತೆ ಬಾಡಿಗೆ ಹಣ ಕಟ್ಟುತ್ತಿದ್ದು ಬಾಕಿ ಉಳಿಸದಂತೆ ಅಡ್ವಾನ್ಸ್ ಬಾಡಿಗೆ ಹಾಕುತ್ತಿದ್ದಾರೆ ಎಂದು ಉತ್ತರಿಸಿದರು.
ಇದಕ್ಕೆ ಪಪಂ ಸದಸ್ಯ ಸಿದ್ದಿಕ್ ಹಾಗೂ ಜಬೇರ್ ಅವರು ಗ್ರಾಪಂ ಇದ್ದಾಗ 1 ಸಾವಿರ ರೂ. ಬಾಡಿಗೆ ಕಟ್ಟುತ್ತಿದ್ದರು. ಈಗ ಯಾವ ಮಾನದಂಡದಲ್ಲಿ 3 ಸಾವಿರ ರೂ. ಬಾಡಿಗೆ ಕಟ್ಟಿಸಿಕೊಳ್ಳುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಸದಸ್ಯರ ಸಮಾಧಾನಕ್ಕೆ ಮುಖ್ಯಾಧಿಕಾರಿ ಸರ್ಕಸ್ :
ಮಳಿಗೆಗಳ ಹರಾಜು ವಿಚಾರ ನ್ಯಾಯಾಲಯದಲ್ಲಿದ್ದು, ಯಾವ ಆದೇಶದ ಮೇರೆಗೆ ಬಾಡಿಗೆ ಕಟ್ಟಿಸಿಕೊಳ್ಳುತ್ತಿದ್ದೀರಿ ಎಂದು ಅಧ್ಯಕ್ಷ ಕೆ.ಎಂ.ಎಲ್ ಕಿರಣ್ ಸಹ ಪ್ರಶ್ನೆ ಎತ್ತಿದರು. ಇದಕ್ಕೆ ಅನೇಕ ಸದಸ್ಯರು ಧ್ವನಿಗೂಡಿಸಿದರು. ಇದಕ್ಕೆ ಮುಖ್ಯಾಧಿಕಾರಿ ಪ್ರತಕ್ರಿಯಿಸಿ ನಾವು ಹೇಳಿಲ್ಲ ಅವರೇ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಕಟ್ಟುತ್ತಿದ್ದಾರೆ.
ಅಲ್ಲದೆ ಸ್ವಯಂ ಘೋಷಿತ ತೆರಿಗೆ ಪಾವತಿಗೆ ಅವಕಾಶವಿದ್ದು, ಮನೆ ಕಂದಾಯ ಹಾಗೂ ನೀರಿನ ಕಂದಾಯವನ್ನು ಹೇಗೆ ಮನೆ ಮಾಲೀಕರೇ ಸ್ವಯಂ ಘೋಷಣೆ ಮಾಡಿ ಕಟ್ಟಿಕೊಂಡಂತೆ ಬಾಡಿಗೆಯನ್ನೂ ಸಹ ಕಟ್ಟುತ್ತಿದ್ದಾರೆ ಎಂದು ಸಭೆಗೆ ಲ್ಯಾಪ್ಟಾಪ್ ತರಿಸಿ ಆನ್ಲೈನ್ನಲ್ಲಿ ಗ್ರಾಹಕರು ನೇರವಾಗಿ ಹಣ ಪಾವತಿ ಮಾಡುವ ಪ್ರಕ್ರಿಯೆ ತೋರಿಸಿದರು.
ಇದರಿಂದ ಸಮಾಧಾನ ಆಗದ ಸದಸ್ಯರು ನೀವೇ ಹೇಳಿ, ಈಗ ಬಾಡಿಗೆ ಹೆಚ್ಚು ಮಾಡಿ ಹಣ ಕಟ್ಟಿಸಿಕೊಂಡು ಸದಸ್ಯರ ಹಕ್ಕಿಗೆ ಚ್ಯುತಿ ತಂದಿದ್ದೀರಿ. ಹಾಗಾಗಿ ಮುಖ್ಯಾಧಿಕಾರಿಯನ್ನು ಅಮಾನತ್ತು ಮಾಡುವುದು ಸೂಕ್ತ ಎಂದು ಸದಸ್ಯರು ಅನುಮೋದಿಸಿದರು.
ಪೋರ್ಜರಿ ಸಹಿ ಮಾಡಿ ಹಲವು ಖಾತೆ :
ಸದಸ್ಯೆ ರತ್ನಮ್ಮ ಅವರು ಮಾತನಾಡಿ, ಜಿಲ್ಲಾಧಿಕಾರಿ ಅನುಮೋದನೆ ಇಲ್ಲದ ನಿವೇಶನವನ್ನು ಖಾತೆ ಮಾಡುವುದಿಲ್ಲ ಎನ್ನುವವರು 2018-19 ನೇ ಸಾಲಿನಲ್ಲಿ ರಂಗಯ್ಯ ಎಂಬುವವರ ಖಾತೆ ಮಾಡಿಕೊಟ್ಟಿದ್ದಾರೆ ಎಂದು ದಾಖಲೆ ಸಹಿತ ಸಭೆಯ ಗಮನಕ್ಕೆ ತಂದರು.
ಇದಕ್ಕೆ ಅನೇಕ ಸದಸ್ಯರು ಪ್ರತಿಕ್ರಿಯಿಸಿ, ಮದ್ಯವರ್ತಿಗಳ ಮೂಲಕ ಹಣ ಪಡೆದು ಖಾತೆ ಮಾಡಿಕೊಡುತ್ತಿದ್ದು ಸದಸ್ಯರು ಕೇಳಿದರೆ ಕಾನೂನುಪಾಠ ಮಾಡುತ್ತಾರೆ ಎಂದು ನೇರವಾಗಿ ಆರೋಪಿಸಿದರು. ಇದಕ್ಕೆ 2015-16 ನೇ ಸಾಲಿನಲ್ಲಿ ಖಾತೆಯಾಗಿದ್ದು, ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಮುಖ್ಯಾಧಿಕಾರಿ ಪ್ರತ್ಯುತ್ತರ ನೀಡಿದರು.
ಆಗ ಅಧ್ಯಕ್ಷರು 2015 ರ ಸಾಲಿನಲ್ಲಿದ್ದ ಪಿಡಿಓ ಸಿದ್ಧರಾಮಯ್ಯ ಅವರನ್ನು ಸಭೆಗೆ ಕರೆದು ಸಮಜಾಯಿಷಿ ಕೇಳಿದರು. ಆಗ ಸಿದ್ಧರಾಮಯ್ಯ ಅವರು ಪಂಚಾಯ್ತಿಯಲ್ಲಿ ನನ್ನ ಸಹಿಯನ್ನು ಪೋರ್ಜರಿ ಮಾಡಿ 60 ಹೆಚ್ಚು ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಸ್ಪೋಟಕ ಮಾಹಿತಿ ನೀಡಿದಾಗ ಸಭೆಯಲ್ಲಿ ಅಲ್ಲೋಲ ಕಲ್ಲೊಲವಾಯಿತು.
ಅಲ್ಲಿಯವರೆಗೂ ಸಭೆಯಲ್ಲಿಯೇ ಇದ್ದ ಬಿಲ್ ಕಲೆಕ್ಟರ್ಗಳಿಬ್ಬರೂ ಈ ವಿಷಯ ಬೆಳಕಿಗೆ ಬಂದ ನಂತರ ತಮ್ಮ ಪೋನ್ ಸ್ವಿಚ್ ಆಫ್ ಮಾಡಿ ಸಭೆಯಿಂದ ಮೆಲ್ಲನೆ ಕಾಲ್ಕಿತ್ತು ನಾಪತ್ತೆಯಾಗಿದ್ದರು.
ಫೆ. 15 ಕ್ಕೆ ಸಭೆ ಮುಂದೂಡಿಕೆ :
ಮುಖ್ಯಾಧಿಕಾರಿ ಮಂಜುನಾಥ್ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮರ್ಪಕ ಉತ್ತರ ನೀಡಲು ಅಧ್ಯಕ್ಷ ಕಿರಣ್ಕುಮಾರ್ ಆಗ್ರಹಿಸಿದರಾದರೂ ಸಹ ಗೋಜಲು ಬಗೆಹರಿಯಲಿಲ್ಲ. ಇದರಿಂದ ಬೇಸತ್ತ ಅಧ್ಯಕ್ಷರು ಸಭೆಯನ್ನು ಮಂಗಳವಾರಕ್ಕೆ ಮುಂದೂಡಿದರು. ನನಗೆ ಅವಮಾನ ಮಾಡಲೆಂದೇ ಇಂತಹ ವರ್ತನೆ ತೋರುತ್ತಿದೀರಾ?
ಎಂದು ರೊಚ್ಚಿಗೆದ್ದ ಅಧ್ಯಕ್ಷರು ಮಂಗಳವಾರದ ಸಭೆಗೆ ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಅಲ್ಲಿಯ ತನಕ ನೀವು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ನಾನೇ ಖುದ್ದಾಗಿ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಸಮರ್ಪಕ ಮಾಹಿತಿ ನೀಡುವುದಾಗಿ ಸದಸ್ಯರುಗಳಿಗೆ ಭರವಸೆ ನೀಡಿ ಸಭೆಯನ್ನು ಫೆ. 15 ಕ್ಕೆ ಮುಂದೂಡಿದರು.
ಕ್ರಿಮಿನಲ್ ಕೇಸ್ ದಾಖಲಿಸಲು ಆಗ್ರಹ :
ಈ ರೀತಿ ಪೋರ್ಜರಿ ಸಹಿ ಮಾಡಿ ನಕಲಿ ಖಾತೆ ಮಾಡಿರುವವ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯಾಧಿಕಾರಿಯನ್ನು ಸದಸ್ಯರಾದ ಹೇಮಂತ್, ಗೀತಾಬಾಬು, ಪ್ರಶ್ನಿಸಿದರು. ಅಲ್ಲದೆ ಇದರ ಹಿಂದೆ ನಿಮ್ಮ ಕೈವಾಡವಿದ್ದು, ಲಕ್ಷಾಂತರ ರೂ. ಕೊಟ್ಟವರಿಗೆ ಹಿಂದಿನ ಪಿಡಿಓ ಸಹಿಯನ್ನು ಪೋರ್ಜರಿ ಮಾಡಿ ಖಾತೆ ಮಾಡಿಕೊಟ್ಟಿದ್ದಿರಿ ಎಂದು ಗಂಭೀರ ಆರೋಪ ಮಾಡಿ ಎಂಆರ್ ಬುಕ್ ತನ್ನಿ ಎಂದು ಪಟ್ಟು ಹಿಡಿದರು.
ಆದರೆ 2015-16 ನೇ ಸಾಲಿನ ಎಂಆರ್ ಬುಕ್ ಪಿಡಿಓ ನಮಗೆ ಹಸ್ತಾಂತರಿಸಿಲ್ಲ ಅಲ್ಲದೆ ಪೋರ್ಜರಿ ಮಾಡಿರುವ ಆರೋಪ ಮಾಡುತ್ತಿರುವವರು ಕೇಸು ದಾಖಲಿಸಬೇಕು, ನಾನಂತು ಪೋರ್ಜರಿ ಸಹಿ ಮಾಡಿಲ್ಲ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಇದಕ್ಕೆ ಸದಸ್ಯ ರಾಜುಬಡಗಿ ಪ್ರತಕ್ರಿಯಿಸಿ, ಕಚೇರಿ ದಾಖಲೆಗಳನ್ನು ಕಳೆದಿರುವವ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಎಂದು ಒತ್ತಾಯಿಸಿದರು. ಒಟ್ಟಾರೇ ಸಭೆಯ ಸದಸ್ಯರೆಲ್ಲರೂ ಮುಖ್ಯಾಧಿಕಾರಿ ಅಮಾನತ್ತು ಆಗಲೇಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/02/9HULIYAR2.jpg)