ಚೈನ್ನೈ:
ಭಾರತ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಗೌರವಾರ್ಥವಾಗಿ ಚೆನ್ನೈ ನಗರದ ರಸ್ತೆಯೊಂದಕ್ಕೆ ಅವರ ಹೆಸರಿಡಲು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಸಜ್ಜಾಗಿದೆ. ಐಪಿಎಲ್ ಮುಕ್ತಾಯಕ್ಕೂ ಮುನ್ನ ರಸ್ತೆಯ ಮರುನಾಮಕರಣವನ್ನು ಅಧಿಕೃತಪಡಿಸಲಾಗುವುದು ಎಂದು ವರದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಚೆನ್ನೈಯಲ್ಲಿ ಐಪಿಎಲ್ ಪಂದ್ಯ ನಡೆಯುವ ಸಂದರ್ಭಗಳಲ್ಲಿ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. 10 ವರ್ಷ ಬಳಿಕ ಆರ್.ಅಶ್ವಿನ್, ಸಿಎಸ್ಕೆಗೆ ಮರಳಿದ್ದಾರೆ. ಈ ಬಾರಿಯ ಆವೃತ್ತಿ ಅವರಿಗೆ ಕೊನೆಯದ್ದು ಎಂದು ಹೇಳಲಾಗಿದೆ. ಅಶ್ವಿನ್ ಕಳೆದ ವರ್ಷಾಂತ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು.
ಅಶ್ವಿನ್ ಅವರ ತವರಾದ ಮಾಂಬಲಂನಲ್ಲಿರುವ ರಾಮಕೃಷ್ಣಪುರಂ ಮೊದಲನೇ ಬೀದಿಗೆ ಮರುನಾಮಕರಣ ಮಾಡಲು ಜಿಸಿಸಿ ನಿರ್ಧರಿಸಿದೆ. ಅಶ್ವಿನ್ ಒಡೆತನದ ಕೇರಂ ಬಾಲ್ ಈವೆಂಟ್ ಮತ್ತು ಮಾರ್ಕೆಂಟಿಂಗ್ ಕಂಪನಿ ಪ್ರೈವೆಟ್ ಲಿಮಿಟೆಡ್, ನಗರದ ಆರ್ಯಗೌಡ ಅಥವಾ ರಾಮಕೃಷ್ಣಪುರಂ ರಸ್ತೆಗೆ ಮರುನಾಮಕರಣ ಮಾಡುವಂತೆ ಜಿಸಿಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. 2025ರ ಬಜೆಟ್ಗಾಗಿ ಮೇಯರ್ ಆರ್. ಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲೂ ‘ರವಿಚಂದ್ರನ್ ಅಶ್ವಿನ್ ಬೀದಿ’ ಎಂದು ಮರುನಾಮಕರಣಕ್ಕೆ ಮಾಡಲಾದ ಪ್ರಸ್ತಾವನೆಗೆ ಸಮ್ಮತಿ ದೊರೆತಿದೆ.
ಕೇರಂ ಬಾಲ್ ತಜ್ಞ ಎಂದೇ ಕರೆಯಲಾಗುವ ಅಶ್ವಿನ್ ಅವರು ಕಳೆದ ವರ್ಷ ಡಿಸೆಂಬರ್ನಲ್ಲಿ ಬ್ರಿಸ್ಬೇನ್ನಲ್ಲಿ ನಡೆದಿದ್ದ ಆಸೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ಈ ಹಠಾತ್ ಘೋಷಣೆ ಹಲವರಲ್ಲಿ ಆಘಾತ, ಇನ್ನೂ ಕೆಲವರಲ್ಲಿ ಅಚ್ಚರಿ ಮೂಡಿಸಿತ್ತು. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ 2ನೇ ಅತೀ ಹೆಚ್ಚು ವಿಕೆಟ್ ಉರುಳಿಸಿದ ಸಾಧನೆ ಅಶ್ವಿನ್ (537) ಹೆಸರಿನಲ್ಲಿದೆ. ದಾಖಲೆ ಅನಿಲ್ ಕುಂಬ್ಳೆ ಹೆಸರಲ್ಲಿದೆ (619). ವಿಶ್ವದ ಬೌಲಿಂಗ್ ಸಾಧಕರ ಯಾದಿಯಲ್ಲಿ ಅಶ್ವಿನ್ಗೆ 7ನೇ ಸ್ಥಾನ.
