ಬೆಂಗಳೂರು:
18 ಬಿಜೆಪಿ ಶಾಸಕರ ಅಮಾನತು ಹಿಂಪಡೆಯಲು ಸೂಚನೆ ನೀಡಬೇಕೆಂದು ರಾಜ್ಯಪಾಲರಿಗೆ ರಾಜ್ಯ ಬಿಜೆಪಿ ನಾಯಕರು ಮನವಿ ಸಲ್ಲಿಸಿದ ಬೆನ್ನಲ್ಲೇ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಥ್ ಅವರು, ಪ್ರಕರಣವನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ. ಖಾದರ್ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಮಂಗಳವಾರ ರಾಜ್ಯ ರಾಜ್ಯಪಾಲರನ್ನು ಭೇಟಿ ಯಾದ ಬಿಜೆಪಿ ನಿಯೋಗ ಅಮಾನತು ಹಿಂಪಡೆಯಲು ಕ್ರಮವಹಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಮನವಿ ಸಲ್ಲಿಸಿದ 24 ಗಂಟೆ ಕಳೆಯುವುದರೊಳಗೆ ರಾಜ್ಯಪಾಲರು ಸಿಎಂ ಹಾಗೂ ಸ್ಪೀಕರ್ಗೆ ಪತ್ರ ಬರೆದಿದ್ದಾರೆ.
ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳನ್ನು ಎತ್ತಿ ಹಿಡಿದು, ಜನಪ್ರತಿನಿಧಿಗಳಾಗಿ ಜವಾಬ್ದಾರಿ ನಿರ್ವಹಿಸಲು ಅನುವು ಮಾಡಿಕೊಡಿ ಎನ್ನುವ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕರು ನಿಯೋಗ ನನ್ನನ್ನು ಭೇಟಿ ಮಾಡಿ ವಿವರವಾದ ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭೆಯ 18 ಸದಸ್ಯರ ಅಮಾನತು ಆದೇಶ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಪ್ರತಿಪಕ್ಷಕ್ಕೆ ಸೇರಿದ 18 ಶಾಸಕರ ಮೇಲೆ ಹೇರಿರುವ ಅಮಾನತು ಆದೇಶವನ್ನು ಪುನರ್ ಪರಿಶೀಲಿಸುವಂತೆ ಸರ್ಕಾರ ಹಾಗೂ ಸ್ಪೀಕರ್ ನಿಯೋಗ ಈಗಾಗಲೇ ಮನವಿ ಮಾಡಿದೆ. ಈ ಎಲ್ಲ ದೃಷ್ಟಿಕೋನದಿಂದ, ಪ್ರಜಾ ಪ್ರಭುತ್ವದ ಮೂಲಭೂತ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಜನರ ಪ್ರತಿನಿಧಿಗಳಾಗಿ ಅವರ ಜವಾಬ್ದಾರಿ ನಿರ್ವಹಿಸಲು ಅನುವಾಗುವಂತೆ ಅಮಾನತು ಹಿಂಪಡೆಯಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯಪಾಲರ ಈ ಪತ್ರದ ಮೂಲಕ ಮತ್ತೊಮ್ಮೆ ಅಧಿಕಾರದ ಚರ್ಚೆ ಮುನ್ನಲೆಗೆ ಬಂದಿದೆ. ಸಂವಿಧಾನದಲ್ಲಿ ಸದನದೊಳಗಿನ ಘಟನೆ ಅಥವಾ ತೀರ್ಮಾನಗಳಿಗೆ ವಿಧಾನಸಭಾಧ್ಯಕ್ಷರಿಗೆ ಪರಮಾಧಿಕಾರವಿದೆ. ಸದನದ ಸುಗಮ ಕಾರ್ಯಕಲಾಪ, ನಿಯಮಗಳ ಪಾಲನೆ ಜತೆಗೆ ನಿರ್ದೇಶನ ಅಥವಾ ರೂಲಿಂಗ್ ಸ್ಪೀಕರ್ ಪರಾಮಾಧಿಕಾರವಾಗಿದ್ದು, ಇದಕ್ಕೆ ರಾಜ್ಯಪಾಲರು ಹಸ್ತಕ್ಷೇಪ ಮಾಡಬಹುದೇ ಎನ್ನುವ ಪ್ರಶ್ನೆಯಿದೆ. ಇತ್ತೀಚಿಗೆ ಸುಪ್ರೀಂ ಕೋರ್ಟ್ ನೀಡಿರುವ ಸರಕಾರದ ಕೆಲಸದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ತೀರ್ಪನ್ನು ಮುಂದಿಟ್ಟುಕೊಂಡು ರಾಜ್ಯಪಾಲರಿಗೆ ಪ್ರತ್ಯುತ್ತರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
