ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟ : ಬಹಿರಂಗವಾಯ್ತು ಐಸಿಸ್ ತರಬೇತಿಯ ವಿವರ

ಬೆಂಗಳೂರು

    ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ತನಿಖೆ ನಡೆಸಿ ರಾಷ್ಟ್ರೀಯ ತನಿಖಾ ದಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ದೋಷಾರೋಪ ಪಟ್ಟಯಿಂದ ಮತ್ತೊಂದು ಸ್ಪೋಟಕ‌ ವಿಚಾರ ಬಯಲಾಗಿದೆ. ಸ್ಪೋಟ ಪ್ರಕರಣದಲ್ಲಿ ಒಟ್ಟು ಆರು ಜನರ ಕೈವಾಡವಿದ್ದು, ಇವರು ಐಸಿಸ್​ ಜೊತೆ ನಂಟು ಹೊಂದಿದ್ದಾರೆ ಎಂದು ತಿಳಿದುಬಂದಿತ್ತು. ಇದೀಗ, ಬಾಂಬ್​ ಸ್ಪೋಟಗೊಳಿಸಲು ಯಾರಿಗೆಲ್ಲ ತರಬೇತಿ ನೀಡಲಾಗಿತ್ತು, ಎಷ್ಟು ದಿನಗಳ ಕಾಲ ತರಬೇತಿ ನೀಡಲಾಗಿತ್ತು ಎಂಬ ವಿಚಾರ ತಿಳಿದಿದೆ.

   ಪ್ರಕರಣದ ಆರೋಪಿಗಳಾದ ಅಬ್ದುಲ್ ಮತೀನ್ ತಾಹ, ಮುಸಾವೀರ್ ಹುಸೇನ್, ಶಾರಿಕ್, ಅರಾಫತ್ ಅಲಿ, ಮಾಜ್ ಮುನೀರ್ ಹಾಗೂ ಮುಜಾಮಿಲ್ ಷರೀಫ್ ಐಸಿಸ್​ ಜೊತೆ ನಂಟು ಇಟ್ಟುಕೊಂಡಿದ್ದರು. ಈ ಆರು ಜನ ಉಗ್ರರ ಪೈಕಿ ನಾಲ್ವರಿಗೆ ಐಸಿಸ್ ಬಾಂಬ್ ತಯಾರಿಕೆಯ ತರಬೇತಿ ನೀಡಿದೆ. ಅಬ್ದುಲ್ ಮತೀನ್ ತಾಹ, ಮುಸಾವೀರ್, ಶಾರಿಕ್ ಹಾಗೂ‌ ಮಾಜ್ ಮುನೀರ್ ಬಾಂಬ್ ತಯಾರಿಸುವ ತರಬೇತಿ ಪಡೆದಿದ್ದಾರೆ. ಆನ್​ಲೈನ್ ಮೂಲಕ ಐಸಿಸ್​ನಿಂದ ತರಬೇತಿ ಪಡೆದಿದ್ದಾರೆ. ಕೇವಲ ಒಂದು ವಾರದಲ್ಲೇ ಸಂಪೂರ್ಣ ತರಬೇತಿ ಪಡೆದಿದ್ದಾರೆ.

  ಬಾಂಬ್​ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಆನ್​ಲೈನ್ ಮೂಲಕ ಖರೀದಿಸಿ, ಒಂದು ವಾರದಲ್ಲಿ ಬಾಂಬ್ ತಯಾರಿಸಿದ್ದರು. ಮಂಗಳೂರು ಕುಕ್ಕರ್ ಬಾಂಬ್, ಬಿಜೆಪಿ ಕಚೇರಿ ಬಳಿ ಇಟ್ಟಿದ್ದ ಬಾಂಬ್, ರಾಮೇಶ್ವರಂ ಕೆಫೆಯಲ್ಲಿ ಇಟ್ಟಿದ್ದ ಬಾಂಬ್​ಗಳನ್ನು ಕೇವಲ ಒಂದು ವಾರದಲ್ಲಿ ತಯಾರಾಸಿದ್ದರು ಎಂದು ದೋಷಾರೋಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

   ಬಾಂಬ್​ ಎಲ್ಲಿ ಇಡಬೇಕು ಅಂತ ಫ್ಲಾನ್ ಫೈನಲ್ ಆದ ಮೇಲೆ, ಬಾಂಬ್ ತಯಾರಿಕೆಗೆ ಮುಂದಾಗುತ್ತಿದ್ದರು. ಈ ನಾಲ್ವರು ತಯಾರು ಮಾಡುವ ಬಾಂಬ್​​ಗಳಿಗೆ 90 ನಿಮಿಷಗಳ ಟ್ರೈಮರ್ ಇಡುತ್ತಿದ್ದರು. ಮಂಗಳೂರು, ಬಿಜೆಪಿ ಕಚೇರಿ ಹಾಗೂ ರಾಮೇಶ್ವರಂ ಕೆಫೆ ಈ‌ ಮೂರು ಕಡೆಗಳಲ್ಲಿ 90 ನಿಮಿಷ ಸೆಟ್ ಮಾಡಿದ್ದರು. ಆದರೆ, ಎರಡು ಕಡೆ ಇಟ್ಟಿದ್ದ ಬಾಂಬ್​ ಫೇಲ್ ಆಗಿದ್ದು, ರಾಮೇಶ್ವರಂ ಕೆಫೆ ಮಾತ್ರ ಸಕ್ಸಸ್ ಆಗಿತ್ತು. ಈ ಎಲ್ಲ ಅಂಶಗಳು ದೋಷಾರೋಪ ಪಟ್ಟಿಯಲ್ಲಿ ಎನ್ಐಎ ಉಲ್ಲೇಖ ಮಾಡಿದೆ.