ಯಲಬುರ್ಗಾ
ಸರ್ಕಾರದಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಹಣವೇ ಇಲ್ಲದಂತಾಗಿದೆ. ಗ್ಯಾರಂಟಿಗಳೇ ಎಲ್ಲವನ್ನು ಮುಚ್ಚಿ ಬಿಟ್ಟಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಗುರುವಾರ ನೀಡಿರುವ ಹೇಳಿಕೆಯೊಂದು ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಕೆರೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ರೈತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ರಾಜ್ಯದ ಬೆಳವಣಿಗೆಯ ಮೇಲೆ ಪರಿಣಾಮ ಬೀರಿವೆ ಎಂದು ಹೇಳಿದರು.
ಹಣಕಾಸಿನ ಕೊರತೆಯಿಂದ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ನಾನು ಕೆರೆ ತುಂಬಿಸುವ ಯೋಜನೆಗೆ ಬರೋಬ್ಬರಿ 970 ಕೋಟಿ ರೂ. ಅನುದಾನ ತಂದಿದ್ದೇನೆ. ಆದರೆ, ಕಾಮಗಾರಿಗೆ ಅಗತ್ಯ ಭೂಮಿ ನೀಡಲು ಯಾರೂ ಮುಂದೆ ಬರುತ್ತಿಲ್ಲ. ರಾಜ್ಯದ ಯಾವುದೇ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ತುಂಬಾ ಕ್ಷೇತ್ರದ ಶಾಸಕರು ಅಭಿವೃದ್ಧಿಗೆ ಅನುದಾನ ಕೇಳುತ್ತಿದ್ದಾರೆ. ಆದರೆ, ಸಿಎಂ ಯಾರಿಗೂ ಅನುದಾನ ನೀಡಿಲ್ಲ ಎಂದು ಹೇಳಿದರು.
ನಮ್ಮ ಕ್ಷೇತ್ರಕ್ಕೆ ಮಾತ್ರ ಹಣ ಬಂದಿದೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ತುಂಬಾ ಕಷ್ಟ ಆಗುತ್ತಿದೆ. ಸಿಎಂ ನನ್ನನ್ನು ತಮ್ಮ ಆರ್ಥಿಕ ಸಲಹೆಗಾರನಾಗಿ ಮಾಡಿಕೊಂಡಿದ್ದಾರೆ. ದಿನನಿತ್ಯ ಅವರ ಜೊತೆಯಲ್ಲೇ ಇರುವುದರಿಂದ ನನ್ನ ಕ್ಷೇತ್ರಕ್ಕೆ ಮಾತ್ರ ಹಣ ಬಂದಿದೆ. ರಾಜ್ಯದಲ್ಲಿ ಇದು ಒಂದೇ ಕೆಲಸ ಆಗುತ್ತಿದೆ. ಹಣಕಾಸಿನ ಆಂತರಿಕ ವಿಚಾರ, ನನಗೆ ಮಾತ್ರ ಗೊತ್ತಿದೆ. ಇದನ್ನು ಕ್ಷೇತ್ರದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ, ಆದರೆ, ಸರ್ಕಾರದ ಬಳಿ ಹಣವಿಲ್ಲ. ನಾವು ಗ್ಯಾರಂಟಿ ಯೋಜನೆಗಳಿಗೆ ಸುಮಾರು 65,000 ಕೋಟಿ ರೂ ಹೊಂದಿಸಬೇಕಿದೆ. ನಾನು ಆರ್ಥಿಕ ಸಲಹೆಗಾರನಾಗಿರುವುದರಿಂದ ಹೇಗಾದರೂ ಮಾಡಿ ಅನುದಾನ ಪಡೆಯುತ್ತಿದ್ದೇನೆ. ಗ್ಯಾರಂಟಿ ಯೋಜನೆಗಳು ಸರಕಾರಕ್ಕೆ ಹೊರೆಯಾಗಿ ಪರಿಣಮಿಸಿವೆ. ‘ನರು ಅಭಿವೃದ್ಧಿ ಬಯಸುತ್ತಿದ್ದಾರೆ. ಆದರೆ, ಸರ್ಕಾರದ ಬಳಿ ಹಣವಿಲ್ಲ. ನಾನು ಆರ್ಥಿಕ ಸಲಹೆಗಾರನಾಗಿದ್ದರಿಂದ ಇಲ್ಲಿನ ಕೆರೆ ಅಭಿವೃದ್ಧಿ ಯೋಜನೆಗೆ ಹಣ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.
ಏತನ್ಮಧ್ಯೆ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಇಲ್ಲ. ಗ್ಯಾರಂಟಿ ಯೋಜನೆಗಳು ಯಾವುದೇ ಸಂಪನ್ಮೂಲಗಳನ್ನು ನುಂಗುತ್ತಿಲ್ಲ. ಯೋಜನೆಗಳನ್ನು ನಾವು ಮುಂದುವರಿಸುತ್ತೇವೆಂದು ತಿಳಿಸಿದರು.ನಾವು ಮತಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿಲ್ಲ, ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದ ಪರಿಣಾಮ ಬೀರುವ ಅವರ ಜೀವನವನ್ನು ಸುಧಾರಿಸಲು ಜಾರಿಗೆ ತರಲಾಗಿದೆ ಎಂದರು.
