ತವರಿನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿ RCB…..!

ಬೆಂಗಳೂರು:

     ತವರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಸೋತಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇದೀಗ ತನ್ನ ಮನೆಯಂಗಳಲ್ಲಿ ಮೊದಲ ಗೆಲುವು ಸಾಧಿಸುವ ಹಂಬಲದಲ್ಲಿದೆ. ಐಪಿಎಲ್ 18ನೇ ಆವೃತ್ತಿಯಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಇಲ್ಲಿ ನಡೆದಿದ್ದ ಕಳೆದ ಎರಡು ಪಂದ್ಯಗಳಲ್ಲಿಯೂ ಆರ್‌ಸಿಬಿ ಟಾಸ್‌ ಸೋತು ಪಂದ್ಯ ಕಳೆದುಕೊಂಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್‌ ಗೆದ್ದರೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ. ಪಂದ್ಯಕ್ಕೆ ಮಳೆ ಭೀತಿ ಕೂಡ ಇದೆ.

    ಆರ್​ಸಿಬಿ ಮತ್ತು ಪಂಜಾಬ್​ ತಂಡಗಳು ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ತಲಾ 4 ಜಯ, 2 ಸೋಲಿನೊಂದಿಗೆ 8 ಅಂಕ ಕಲೆಹಾಕಿವೆ. ರನ್​ರೇಟ್​ ಲೆಕ್ಕಾಚಾರದಲ್ಲಿ ಆರ್​ಸಿಬಿ ತುಸು ಮೇಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವೂ ಒಲಿಯಬಹುದು. ಕರ್ನಾಟಕದ ವೇಗಿ ವೈಶಾಕ್​ ವಿಜಯ್​ಕುಮಾರ್ ಈ ಬಾರಿ​ ಪಂಜಾಬ್​ ತಂಡದಲ್ಲಿದ್ದು, ತವರಿನ ಅಂಗಣದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

   ಕಳೆದ ಬಾರಿ ಆರ್‌ಸಿಬಿ ಪರ ಆಡಿದ್ದರು. ಉತ್ತಮ ಬೌಲಿಂಗ್‌ ಲಯದಲ್ಲಿರುವ ಚಹಲ್‌ ಪಂಜಾಬ್‌ ತಂಡದ ಟ್ರಂಪ್‌ ಕಾರ್ಡ್‌ ಬೌಲರ್‌ ಆಗಿದ್ದಾರೆ. ಅದರಲ್ಲೂ ಅವರು ಚಿನ್ನಸ್ವಾಮಿ ಮೈದಾನದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಈ ಹಿಂದೆ ಆರ್​ಸಿಬಿ ತಂಡದ ಪರವೇ ಆಡಿದ್ದ ಚಹಲ್‌ ಈ ಮೈದಾನದಲ್ಲಿ ಸರ್ವಾಧಿಕ 139 ವಿಕೆಟ್​ ಕಬಳಿಸಿದ ದಾಖಲೆ ಹೊಂದಿದ್ದಾರೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್​ನಲ್ಲಿ ಅವರು ಹಿಡಿತ ಸಾಧಿಸಬಹುದು. ಇದರಿಂದ ಆರ್​ಸಿಬಿ ಬ್ಯಾಟರ್​ಗಳು ಚಾಹಲ್​ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಬೇಕಾಗುತ್ತದೆ. 

   ಬ್ಯಾಟಿಂಗ್‌ ಸ್ನೇಹಿ ಚಿನ್ನಸ್ವಾಮಿಯಲ್ಲಿ ಇಂದು ರನ್‌ ಮಳೆ ಹರಿಯುವ ಸಾಧ್ಯತೆ ಇದೆ. ಮೊದಲು ಬ್ಯಾಟಿಂಗ್‌ ಮಾಡುವ ತಂಡಕ್ಕೆ ದೊಡ್ಡ ಮೊತ್ತ ಪೇರಿಸುವ ಸವಾಲು ಎದುರಾಗಲಿದೆ. ಜತೆಗೆ ಬೌಲರ್​ಗಳಿಗೆ ನಿಜವಾದ ಸತ್ವಪರೀಕ್ಷೆ ಎದುರಾಗಲಿದೆ. ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಇದುವರೆಗಿನ ಐಪಿಎಲ್‌ ಇತಿಹಾಸದಲ್ಲಿ ಒಟ್ಟು 33 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಪಂಜಾಬ್‌ 17 ಪಂದ್ಯ ಗೆದ್ದಿದ್ದರೆ, ಆರ್‌ಸಿಬಿ 16 ಪಂದ್ಯಗಳಲ್ಲಿ ಜಯಿಸಿದೆ. ಕಳೆದ ಎರಡು ವರ್ಷಗಳಿಂದ ಪಂಜಾಬ್‌ ಆರ್‌ಸಿಬಿ ವಿರುದ್ಧ ಪಂದ್ಯ ಗೆದ್ದಿಲ್ಲ.

Recent Articles

spot_img

Related Stories

Share via
Copy link