ಆರ್‌ಸಿಬಿ ಎದುರಿನ ಪಂದ್ಯಕ್ಕೂ ಸಂಜು ಸ್ಯಾಮ್ಸನ್‌ ಅಲಭ್ಯ

ಜೈಪುರ: 

   ಪಾರ್ಶ್ವ ಸ್ನಾಯು ಸೆಳೆತದಿಂದ ಬಳಲುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಅವರು ಆರ್‌ಸಿಬಿ ಎದುರಿನ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ಅವರು ಪಾರ್ಶ್ವ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ಇದರಿಂದ ಲಕ್ನೋ ವಿರುದ್ಧದ ಜೈಪುರ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಆರ್‌ಸಿಬಿ ಎದುರು ಕೂಡ ಆಡದಿರಲು ನಿರ್ಧರಿಸಿದ್ದಾರೆ. ಆರ್‌ಸಿಬಿ ಮತ್ತು ರಾಜಸ್ಥಾನ್‌ ನಡುವಣ ಪಂದ್ಯ ಏ.24 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಸಂಜು ಅನುಪಸ್ಥಿತಿಯಲ್ಲಿ ರಾಜಸ್ಥಾನ್‌ ತಂಡವನ್ನು ರಿಯಾನ್‌ ಪರಾಗ್‌ ಮುನ್ನಡೆಸಲಿದ್ದಾರೆ.

   ಹಾಲಿ ಆವೃತ್ತಿಯಲ್ಲಿ ರಾಜಸ್ಥಾನ್‌ ತಂಡ ಆಡಿದ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದು 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಕ್ಷೀಣ ಪ್ಲೇ-ಆಫ್‌ ಅವಕಾಶ ಹೊಂದಿರುವ ರಾಜಸ್ಥಾನ್‌ಗೆ ಇನ್ನು 6 ಪಂದ್ಯಗಳು ಬಾಕಿ ಉಳಿದಿವೆ. ಈ ಪೈಕಿ ಒಂದು ಪಂದ್ಯ ಸೋತರೂ ತಂಡ ಪ್ಲೇ-ಆಫ್ ರೇಸ್‌ನಿಂದ ಬಹುತೇಕ ಹೊರಬೀಳಲಿದೆ.

   ಕಳೆದ ಶನಿವಾರ ನಡೆದಿದ್ದ ಲಕ್ನೋ ಸೂಪರ್‌ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್‌ ತಂಡ 2 ರನ್‌ಗಳ ವಿರೋಚಿತ ಸೋಲು ಕಂಡಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಲಕ್ನೋ ತಂಡ, ಐಡೆನ್‌ ಮಾರ್ಕ್ರಮ್‌ ಹಾಗೂ ಆಯುಷ್‌ ಬದೋನಿ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 180 ರನ್‌ಗಳನ್ನು ಕಲೆ ಹಾಕಿತ್ತು. 

   ದಿಟ್ಟ ರೀತಿಯಲ್ಲಿ ಗುರಿ ಬೆನ್ನಟ್ಟಿಕೊಂಡು ಹೋದ ರಾಜಸ್ಥಾನ್‌ 17ನೇ ಓವರ್‌ವರೆಗೂ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಾದ ಅವಕಾಶವನ್ನು ಹೊಂದಿತ್ತು. ಆದರೆ 18 ಮತ್ತು 20ನೇ ಓವರ್‌ನಲ್ಲಿ ಆವೇಶ್‌ ಖಾನ್‌ ಪರಿಣಾಮಕಾರಿ ಬೌಲಿಂಗ್‌ ನಡೆಸಿ ರಾಜಸ್ಥಾನ್‌ ತಂಡವನ್ನು ಕಟ್ಟಿ ಹಾಕಿದರು. ಪರಿಣಾಮ ಕೇವಲ 2 ರನ್‌ ಅಂತರದಿಂದ ರಾಜಸ್ಥಾನ್‌ ಸೋಲು ಕಂಡಿತ್ತು. ಇದಕ್ಕೂ ಮುನ್ನ ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಇದೇ ರೀತಿ ಸುಲಭವಾಗಿ ಗೆಲ್ಲುವ ಪಂದ್ಯವನ್ನು ಟೈ ಮಾಡಿಕೊಂಡು ಕೊನೆಗೆ ಸೂಪರ್‌ ಓವರ್‌ನಲ್ಲಿ ಸೋಲು ಕಂಡಿತ್ತು.

Recent Articles

spot_img

Related Stories

Share via
Copy link