ಬೆಂಗಳೂರು:
HAL ವಿಮಾನ ನಿಲ್ದಾಣವನ್ನು ಮತ್ತೆ ತೆರೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುಬೇಕೆಂದು ಸಂಸದ ತೇಜಸ್ವಿ ಸೂರ್ಯ ನವದೆಹಲಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮನವಿ ಮಾಡಿದರು.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಆಯ್ದ ಸಂಸತ್ ಸದಸ್ಯರನ್ನು ಒಳಗೊಂಡಿದ್ದು, ಕೇಂದ್ರ ಸರ್ಕಾರದ ಆದಾಯ ಮತ್ತು ವೆಚ್ಚವನ್ನು ಲೆಕ್ಕಪರಿಶೋಧನೆ ಕೆಲಸ ಮಾಡುತ್ತದೆ. TNIE ಜೊತೆ ಮಾತನಾಡಿದ ತೇಜಸ್ವಿಸೂರ್ಯ, ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸೂಕ್ತ ಸ್ಥಳವನ್ನು ಗುರುತಿಸಲು ನಡೆಯುತ್ತಿರುವ ಕ್ರಮದೊಂದಿಗೆ ಈ ಮನವಿಯನ್ನು ಪರಿಗಣಿಸಬಹುದು ಎಂದು ಹೇಳಿದರು.
ನಗರದಲ್ಲಿ ಮೂರು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸಿದರೆ ಬೆಂಗಳೂರಿಗೆ ನಿಜವಾಗಿಯೂ ಸಹಾಯವಾಗುತ್ತದೆ. ನ್ಯೂಯಾರ್ಕ್, ಪ್ಯಾರಿಸ್ ಮತ್ತು ಲಂಡನ್ನಂತಹ ಜಾಗತಿಕ ನಗರಗಳು ಬಹು ವಿಮಾನ ನಿಲ್ದಾಣಗಳನ್ನು ಹೊಂದಿವೆ ಎಂದು ಅವರು ಹೇಳಿದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ನ MD ಮತ್ತು CAO ಹರಿ ಮಾರಾರ್ ಅವರನ್ನು ಎರಡು ವಾರಗಳ ಹಿಂದೆ ಭೇಟಿಯಾಗಿದ್ದಾಗಿ ಸಂಸದರು ಉಲ್ಲೇಖಿಸಿದ್ದಾರೆ. BIAL ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅದು ಮೇ 24, 2032 ರವರೆಗೆ KIA ಯ 150 ಕಿಲೋಮೀಟರ್ ವೈಮಾನಿಕ ವ್ಯಾಪ್ತಿಯೊಳಗೆ ಯಾವುದೇ ಹೊಸ ವಿಮಾನ ನಿಲ್ದಾಣದ ಅಭಿವೃದ್ಧಿ ಅಥವಾ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳ ಮೇಲ್ದರ್ಜೆಗೇರಿಸುವಿಕೆಯನ್ನು ನಿರ್ಬಂಧಿಸುತ್ತದೆ.
BIAL 25 ವರ್ಷಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಿದ್ದು, 2033 ರಿಂದ ಬೆಂಗಳೂರಿನಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಬಹುದಾಗಿದೆ. ಈ ಒಪ್ಪಂದದ ಮೇರೆಗೆ, HAL ನಲ್ಲಿ ವಾಣಿಜ್ಯ ಕಾರ್ಯಾಚರಣೆಗಳನ್ನು BIAL ವಹಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ತೇಜಸ್ವಿ ಸೂರ್ಯ ಚರ್ಚಿಸಿದರು. ಈ ಸಂಬಂಧ ಸಹಕರಿಸಲು HAL ಜೊತೆ ಒಪ್ಪಂದ ಮಾಡಿಕೊಳ್ಳಬಹುದು” ಎಂದು ಅವರು ಸೂಚಿಸಿದರು. ಹೆಚ್ಚುವರಿಯಾಗಿ, ದಕ್ಷಿಣ ಬೆಂಗಳೂರನ್ನು ಎರಡನೇ ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳವೆಂದು ಪರಿಗಣಿಸಬೇಕೆಂದು ಶಿಫಾರಸು ಮಾಡಿ ಆರು ತಿಂಗಳ ಹಿಂದೆ ತೇಜಸ್ವಿ ಸೂರ್ಯ ನಾಗರಿಕ ವಿಮಾನಯಾನ ಸಚಿವರಿಗೆ ಪತ್ರ ಬರೆದಿದ್ದಾರೆ.
ದಕ್ಷಿಣ ಬೆಂಗಳೂರಿನ ನಿವಾಸಿಗಳಿಗೆ ಸಹಾಯ ಮಾಡಲು ಅವರು ಆನೇಕಲ್ ಅಥವಾ ಬಿಡದಿಯನ್ನು ಸಂಭಾವ್ಯ ವಿಮಾನ ನಿಲ್ಗಾಣ ತಾಣಗಳಾಗಿ ಪ್ರಸ್ತಾಪ ಸಲ್ಲಿಸಿದ್ದಾರೆ, ಸದ್ಯ ದಕ್ಷಿಣ ಬೆಂಗಳೂರು ನಾಗರಿಕರು ವಿಮಾನ ನಿಲ್ದಾಣ ತಲುಪಲು 2 ರಿಂದ 2.5 ಗಂಟೆಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಉಲ್ಲೇಖಿಸಿದ್ದಾರೆ.
