ರಿಕಿ ರೈ ಮೇಲಿನ ಗುಂಡಿನ ದಾಳಿ :ಶೂಟೌಟ್‌ ಹಿಂದೆ ಮಲತಾಯಿ-ಸಹಚರರ ಕೈವಾಡ..!?

ಬೆಂಗಳೂರು:

    ಮುತ್ತಪ್ಪ ರೈ ಪುತ್ರನ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಿಕ್ಕಿ ರೈ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಹೇಳಿಕೆ ವೇಳೆ ಮಹತ್ವದ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.ಬಿಡದಿ ಫಾರ್ಮ್‌ ಹೌಸ್‌ ಬಳಿ ಮೂವರು ದುಷ್ಕರ್ಮಿಗಳು ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗಿದ್ದರು. ಪರಿಣಾಮ ರಿಕ್ಕಿ ರೈ ಅವರ ಮೂಗು ಹಾಗೂ ಬಲ ಬುಜಕ್ಕೆ ಗುಂಡು ತಗುಲಿತ್ತು. ಆ ಕೂಡಲೇ ಅವರನ್ನು ಮಣಿಪಾಲ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ರಿಕ್ಕಿ ರೈ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

   ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರಿಕ್ಕಿ ರೈ ಅವರು ಪೊಲೀಸರ ಮುಂದೆ ಘಟನೆ ಬಗ್ಗೆ ವಿವರವಾಗಿ ಹೇಳಿಕೆ ನೀಡಿದ್ದಾರೆ. ಎಫ್​ಐಆರ್​ನಲ್ಲಿ ಉಲ್ಲೇಖಿಸಿರುವ ಆರೋಪಿಗಳಾದ ರಾಕೇಶ್ ಮಲ್ಲಿ, ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್ ಇವರೇ ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾರೆ‌ ಎಂದು ಹೇಳಿಕೆ ನೀಡಿದ್ದಾರೆಂದು ತಿಳಿದುಬಂದಿದೆ. ಆಸ್ತಿ ವಿಚಾರವೇ ಗುಂಡಿನ ದಾಳಿಗೆ ಕಾರಣ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

    ನಾನು ರಷ್ಯಾದಲ್ಲಿದ್ದೆ, ಜಾಮೀನು ವಿವಾದ ಸಂಬಂಧ ಕೋರ್ಟ್ ನಲ್ಲಿ ಕೇಸ್ ಇತ್ತು. ಹೀಗಾಗಿ, ಬೆಂಗಳೂರಿಗೆ ಬಂದಿದ್ದೆ. ನಾನು ಬೆಂಗಳೂರಿನ ಸದಾಶಿವನಗರ ಹಾಗೂ ಬಿಡದಿ ವಾಸವಿರುತ್ತಿದ್ದೆ. 12 ಗಂಟೆಗೆ ಎರಡು ಕಾಲ್ ಬಂದಿತ್ತು. ಹಾಗಾಗಿ ಹೊರಟಿದ್ದೆ. ಸದಾಶಿವನಗರ ಮನೆಗೆ ಹೋಗುವಾಗ ಮನೆಯಿಂದ ಹೊರಗಿನ ರಸ್ತೆಗೆ ಬಂದಾಗ ದಾಳಿ ನಡೆಸಲಾಯಿತು. ನನ್ನ ಕೈ ಹಾಗೂ ಮುಗಿಗೆ ಗುಂಡು ತಗಲಿದೆ. ನನ್ನ ಸ್ನೇಹಿತರು ಹಾಗೂ ಡ್ರೈವರ್ ಆಸ್ಪತ್ರೆಗೆ ಸೇರಿಸಿದರು. ರಾಕೇಶ್ ಮಲ್ಲಿ ಹಾಗೂ ಅನುರಾಧರೇ ಅಟ್ಯಾಕ್ ಮಾಡಿಸಿದ್ದಾರೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.

   ಘಟನೆ ಸಂಬಂಧ ರಿಕ್ಕಿ ರೈ ಅವರ ಕಾರು ಚಾಲಕ ಬಸವರಾಜು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅನುರಾಧ, ಸಹಚರರಾದ ರಾಕೇಶ್ ಮಲ್ಲಿ, ನಿತೇಶ್ ವಿರುದ್ಧ ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಏತನ್ಮಧ್ಯೆ, ಪ್ರಕರಣದ ತನಿಖೆ ನಡೆಸಲು ಮತ್ತು ಶೂಟರ್ ಅನ್ನು ಪತ್ತೆಹಚ್ಚಲು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

 

Recent Articles

spot_img

Related Stories

Share via
Copy link