ಬೆಂಗಳೂರು:
ಈ ಬಾರಿ ಯುಗಾದಿ ಹಬ್ಬ ಬಹಳ ವಿಶೇಷ ಎಂದರೆ ತಪ್ಪಿಲ್ಲ. ಏಕೆಂದರೆ, ಸಾಮಾನ್ಯವಾಗಿ ಈ ಹಬ್ಬದ ಸಂದರ್ಭದಲ್ಲಿ ಒಂದೆರಡು ಚಿತ್ರಗಳು ಬಿಡುಗಡೆಯಾಗುವುದು ಸಹಜ. ಆದರೆ, ಈ ಬಾರಿ ದಾಖಲೆಯ ಏಳು ಚಿತ್ರಗಳು ಬಿಡುಗಡೆಯಾಗುತ್ತಿವೆ. ಮೊದಲು ಎಂಟು ಚಿತ್ರಗಳಾಗಬೇಕಿತ್ತು.ಆದರೆ, ‘ತ್ರಿಕೋನ’ ಚಿತ್ರವು ಏ.08ಕ್ಕೆ ಮುಂದೂಡಲ್ಪಟ್ಟಿದ್ದರಿಂದ, ಕೊನೆಗೆ ಏಳು ಚಿತ್ರಗಳು ಬಿಡುಗಡೆಯಾಗಲಿವೆ.
ಹೋಮ್ ಮಿನಿಸ್ಟರ್:
ಈ ಪೈಕಿ ಅತ್ಯಂತ ನಿರೀಕ್ಷಿತ ಚಿತ್ರ ಎಂದರೆ ಅದು ಉಪೇಂದ್ರ ಅಭಿನಯದ ‘ಹೋಂ ಮಿನಿಸ್ಟರ್’. ಐದು ವರ್ಷಗಳ ಹಿಂದೆಯೇ ಈ ಚಿತ್ರ ಪ್ರಾರಂಭವಾಗಿತ್ತು. ಆದರೆ, ಕರೊನಾ ಮುಂತಾದ ಕಾರಣಗಳಿಂದ ಚಿತ್ರ ವಿಳಂಬವಾಗಿ, ಏಪ್ರಿಲ್ 01ಕ್ಕೆ ಬಿಡುಗಡೆಯಾಗುತ್ತಿದೆ. ಈ ಕಥೆ ಕೇಳಿ ಉಪೇಂದ್ರ ಅವರಿಗೆ ಇಷ್ಟವಾದರೂ, ಭಯವಾಯಿತಂತೆ.
ಜನ ಈ ಕಥೆಯನ್ನು ಹೇಗೆ ತೆಗೆದುಕೊಳ್ಳುತ್ತಾರೋ ಎಂದು ಗೊಂದಲವಾಯಿತಂತೆ. ಆದರೆ, ಎಲ್ಲರ ಒತ್ತಾಯದ ಮೇರೆಗೆ ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಉಪೇಂದ್ರಗೆ ನಾಯಕಿಯಾಗಿ ವೇದಿಕಾ ನಟಿಸಿದ್ದು, ತಾನ್ಯಾ ಹೋಪ್, ಸಾಧು ಕೋಕಿಲ, ರಾಜೇಶ್ ನಟರಂಗ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಬಾಡಿಗಾಡ್:
ಗುರುಪ್ರಸದ್ ಅಭಿನಯದ ‘ಬಾಡಿ ಗಾಡ್’ ಮತ್ತು ಸುಮನ್ ನಗರ್ಕರ್ ನಟಿಸಿರುವ ‘ಸ್ಟಾಕರ್’ ಚಿತ್ರಗಳು ಬಿಡುಗಡೆಯಾಗಲಿವೆ. ಪ್ರಭು ಶ್ರೀನಿವಾಸ್ ನಿರ್ದೇಶನದ ‘ಬಾಡಿ ಗಾಡ್’ ಚಿತ್ರವು ಹೆಣವೊಂದರ ಸುತ್ತ ಸುತ್ತಲಿದ್ದು, ಮುಂಚೆ ತಮಿಳಿನಲ್ಲಿ ನಿರ್ವಣವಾಗಬೇಕಿತ್ತಂತೆ. ಅಷ್ಟೇ ಅಲ್ಲ, ವಿಜಯ್ ಸೇತುಪತಿ ಈ ಚಿತ್ರದಲ್ಲಿ ನಟಿಸಬೇಕಿತ್ತಂತೆ. ಕೊನೆಗೆ ಈ ಕಥೆಯನ್ನು ಕನ್ನಡದಲ್ಲಿ ಮಾಡಲಾಗಿದೆ.
ಸ್ಟಾಕರ್:
ಹೆಸರೇ ಹೇಳುವಂತೆ ಪೀಡಕನೊಬ್ಬನ ಸುತ್ತ ಈ ಚಿತ್ರ ಸುತ್ತಲಿದ್ದು, ಸುಮನ್ ನಗರ್ಕರ್ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಮಗೋಪಾಲ್ ವರ್ವ ಬಳಿ ಸಹಾಯಕರಾಗಿದ್ದ ಕಿಶೋರ್ ಭಾರ್ಗವ್ ಈ ಚಿತ್ರ ನಿರ್ದೇಶಿಸಿದ್ಧಾರೆ.
ರಾಜ್ಯದ ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿಸುದ್ದಿ : ತಿಂಗಳಲ್ಲಿ 1 ದಿನ `ಸಿರಿಧಾನ್ಯ’ದ ಬಿಸಿಯೂಟ
ಲೋಕಲ್ ಟ್ರೇನ್:
‘ಡಾರ್ಲಿಂಗ್’ ಕೃಷ್ಣ ಅಭಿನಯದ ‘ಲೋಕಲ್ ಟ್ರೇನ್’ ಈ ವಾರ ಬಿಡುಗಡೆಯಾಗುತ್ತಿರುವ ಇನ್ನೊಂದು ಚಿತ್ರ. ಚಿತ್ರದ ಕಥೆ ರೈಲಿನಲ್ಲೇ ಹೆಚ್ಚಾಗಿ ಸಾಗುವುದರಿಂದ, ಚಿತ್ರಕ್ಕೆ ‘ಲೋಕಲ್ ಟ್ರೖೆನ್’ ಎಂದು ಹೆಸರಿಡಲಾಗಿದೆ ಎನ್ನುತ್ತಾರೆ ಕೃಷ್ಣ. ಈ ಚಿತ್ರದಲ್ಲಿ ಅವರಿಗೆ ನಾಯಕಿಯರಾಗಿ ಮೀನಾಕ್ಷಿ ದೀಕ್ಷಿತ್ ಮತ್ತು ಎಸ್ತರ್ ನರೋನ್ಹಾ ನಟಿಸಿದ್ದಾರೆ. ಡಿ. ರಾಜೇಂದ್ರ ಬಾಬು ಸೇರಿದಂತೆ ಹಲವು ಹಿರಿಯ ನಿರ್ದೇಶಕರ ಜತೆಗೆ ಕೆಲಸ ಮಾಡಿ ಅನುಭವವಿದ್ದ ರುದ್ರಮುನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಇನ್ಸ್ಟಂಟ್ ಕರ್ಮ:
ಸಂದೀಪ್ ಮಹಾಂತೇಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಇನ್ಸ್ಟಂಟ್ ಕರ್ಮ’ ನೈಜ ಘಟನೆ ಆಧರಿತ ಸಿನಿಮಾ. ಸಂದೀಪ್ ತಮ್ಮ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದ ಸಂದರ್ಭದಲ್ಲಿ, ಒಂದು ಘಟನೆ ನಡೆಯಿತಂತೆ. ಆ ಘಟನೆಯನ್ನು ಆಧರಿಸಿ ಈ ಚಿತ್ರ ಮಾಡಿದ್ದಾರೆ ಅವರು. ಈ ಚಿತ್ರದಲ್ಲಿ ಯಶ್ ಶೆಟ್ಟಿ, ಕೆಂಡ ಶ್ರೇಷ್ಠ, ಅಂಜನ್ ದೇವ್, ಪ್ರಜ್ವಲ್ ಶೆಟ್ಟಿ, ಹರಿ ಧನಂಜಯ್ ಪ್ರಮುಖ ಪಾತ್ರದಲ್ಲಿದ್ದಾರೆ.
ಶೀಘ್ರವೇ ರಾಜ್ಯದಲ್ಲಿ `ಅಸ್ಪೃಶ್ಯತೆ ತಡೆಗೆ `ವಿನಯ ಸಾಮರಸ್ಯ’ ಯೋಜನೆ ಜಾರಿ
ತಲೆದಂಡ:
ಬಿಡುಗಡೆಯಾಗದಿರುವ ಸಂಚಾರಿ ವಿಜಯ್ ಅಭಿನಯದ ಚಿತ್ರಗಳ ಪೈಕಿ ‘ತಲೆದಂಡ’ ಸಹ ಒಂದು. ಬುದ್ಧಿಮಾಂದ್ಯ ನೊಬ್ಬನ ಪರಿಸರ ಪ್ರೇಮದ ಕಥೆ ಈ ಚಿತ್ರದಲ್ಲಿದ್ದು, ಅದರ ಜತೆಗೆ ಒಂದು ಮುದ್ದಾದ ಪ್ರೇಮಕಥೆ, ರಾಜಕೀಯ, ಅಧಿಕಾರ … ಇವೆಲ್ಲವೂ ಇರಲಿದೆಯಂತೆ. ಪ್ರವೀಣ್ ಕೃಪಾಕರ್ ನಿರ್ದೇಶಿಸಿ ರುವ ಈ ಚಿತ್ರಕ್ಕೆ ಮಲಯಾಳಂ ಸ್ಟಾರ್ ನಟ ಮಮ್ಮೂಟ್ಟಿ ಸಾಥ್ ನೀಡಿದ್ದಾರೆ. ಈ ಚಿತ್ರವನ್ನು ನೋಡುವುದಾಗಿ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ವಿಜಯ್ಗೆ ಜೋಡಿಯಾಗಿ ಚೈತ್ರಾ ಆಚಾರ್ ನಟಿಸಿದ್ದು, ಮಿಕ್ಕಂತೆ ರಂಗಾಯಣ ರಘು ಪತ್ನಿ ಮಂಗಳಾ, ಮಂಡ್ಯ ರಮೇಶ್, ರಮೇಶ್ ಪಂಡಿತ್, ಬಿ ಸುರೇಶ್ ಸೇರಿ ಹಲವರು ಚಿತ್ರದಲ್ಲಿದ್ದಾರೆ.
ಕನ್ನಡಿಗರ ಬಂಜಾರ ಚಿತ್ರ:
ಕರ್ನಾಟಕದಲ್ಲಿ ಇದುವರೆಗೂ ತುಳು, ಕೊಡವ, ಬ್ಯಾರಿ, ಕೊಂಕಣಿ ಮುಂತಾದ ಪ್ರಾದೇಶಿಕ ಭಾಷೆಯ ಚಿತ್ರಗಳು ಬಿಡುಗಡೆಯಾಗಿವೆ. ಈಗ ‘ಸೇವಾ ದಾಸ್’ ಎಂಬ ಬಂಜಾರ ಚಿತ್ರವೊಂದು ಸದ್ದಿಲ್ಲದೆ ತಯಾರಾಗಿದ್ದು, ಇದೇ ಏ.01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಹಿರಿಯ ನಟ ಸುಮನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ‘ನಾನು ಹುಟ್ಟಿದ್ದು ಚೆನ್ನೈನಲ್ಲಿ. ತಂದೆ-ತಾಯಿ ಮಂಗಳೂರಿನವರು. ಕಳೆದ 40 ವರ್ಷಗಳಲ್ಲಿ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ.
ಇದೇ ಮೊದಲ ಬಾರಿ ಬಂಜಾರ ಚಿತ್ರವೊಂದರಲ್ಲಿ ನಟಿಸಿದ್ದು, ಸಂತ ಸೇವಾಲಾಲ್ ಅವರ ಕೃಪೆಯಿಂದ ಒಳ್ಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ. ಕೆ.ಪಿ.ಎನ್. ಚೌಹಾಣ್ ನಿರ್ದೇಶಿಸಿರುವ ಈ ಚಿತ್ರವನ್ನು ಸೀತಾರಾಂ ಬಡಾವತ್ ನಿರ್ಮಾಣ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಅವರು, ‘ಬಂಜಾರ ಭಾಷೆ ಮಾತನಾಡುವ ಜನ ಕರ್ನಾಟಕ ಸೇರಿದಂತೆ ದೇಶದ ವಿವಿದೆಡೆ ಇದ್ದಾರೆ. ನಮ್ಮ ಜನಾಂಗದ ಶಕ್ತಿಯಾಗಿರುವ ಸಂತ ಸೇವಾಲಾಲ್ ಅವರ ಕೃಪೆಯಿಂದ ಇದೇ ಮೊದಲ ಬಾರಿಗೆ ಈ ಚಿತ್ರವನ್ನು ಭಾರತದ ಹಲವು ಕಡೆ ಬಿಡುಗಡೆ ಮಾಡುತ್ತಿದ್ದೇವೆ. ವಿದೇಶದಲ್ಲೂ ಚಿತ್ರ ಬಿಡುಗಡೆ ಆಗಲಿದೆ’ ಎನ್ನುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
