ತುಮಕೂರು:
ಮಹಾಶಿವರಾತ್ರಿ ಪ್ರಯುಕ್ತ ಜಿಲ್ಲೆ ಹಾಗೂ ನಗರದ ವಿವಿಧೆಡೆಯ ಶಿವ ದೇವಾಲಯಗಳಲ್ಲಿ ಹಾಗೂ ಇತರೆ ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿ ಆಚರಣೆ ಮಾಡಲಾಯಿತು. ಸಿದ್ದಗಂಗಾ ಮಠದಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಜಾತ್ರೆ ಅಂಗವಾಗಿ ಬರುವ ಭಕ್ತರಿಗೆ ತಂಬಿಟ್ಟಿನ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರದ ಬಿ.ಎಚ್.ರಸ್ತೆಯ ಸೋಮೇಶ್ವರ ಸ್ವಾಮಿಗೆ ಕುಂಭಾಭಿಷೇಕ, ರುದ್ರಾಭಿಷೇಕ, ಬಿಲ್ವಪತ್ರೆ ಅರ್ಚನೆ, ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು.
ಹನುಮಂತಪುರ ರಸ್ತೆಯಲ್ಲಿರುವ ಸರಪಳಿ ಸ್ವಾಮಿ ಮಠದಲ್ಲಿನ ದ್ವಾದಶ ಜ್ಯೋರ್ತಿಲಿಂಗಗಳಿಗೆ ಶ್ರೀ ಜ್ಞಾನಾನಂದಪುರಿ ಸ್ವಾಮಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಗರದ ಹೊರಪೇಟೆ ರಸ್ತೆಯ ಕಾಶಿವಿಶ್ವೇಶ್ವರಸ್ವಾಮಿ ಮಂದಿರ, ಕರಿಬಸವೇಶ್ವರಸ್ವಾಮಿ ಮಠ, ಹಿರೆಮಠದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ, ಅರಳೆಪೇಟೆ ಬಸವೇಶ್ವರಸ್ವಾಮಿ, ಕೋಡಿ ಬಸವೇಶ್ವರಸ್ವಾಮಿ, ಚಿಕ್ಕಪೇಟೆಯ ಗಂಗಾಧರೇಶ್ವರ ಸ್ವಾಮಿ, ಕ್ಯಾತ್ಸಂದ್ರದ ಶ್ರೀ ಚಂದ್ರಮೌಳೇಶ್ವರಸ್ವಾಮಿ, ಎಪಿಎಂಸಿ ಆವರಣದ ಪಶುಪತಿ ದೇವಾಲಯ, ಬೆಣ್ಣೆ ಬಸವೇಶ್ವರ ದೇವಾಲಯ, ಟಿ.ಜಿಎಂಸಿ ಬ್ಯಾಂಕ್ ಆವರಣದಲ್ಲಿರುವ ದೇವಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ಏರ್ಪಡಿಸಲಾಗಿತ್ತು.
ನಗರದ ಬನಶಂಕರಿ ಬಡಾವಣೆಯಲ್ಲಿರುವ ಈಶ್ವರ ಪ್ರತಿಮೆಗೆ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ತುಮಕೂರು ತಾಲ್ಲೂಕಿನ ಅರೆಯೂರು ಶ್ರೀ ವೈದ್ಯನಾಥೇಶ್ವರ, ಕೊರಟಗೆರೆಯ ಗವಿಗಂಗಾಧರೇಶ್ವರ, ಸಿದ್ದರಬೆಟ್ಟದ ಸಿದ್ದೇಶ್ವರ, ಚಿಕ್ಕತೊಟ್ಲುಕೆರೆಯ ಅಟವಿ ಮಠದಲ್ಲಿ ಅಟವೀಶ್ವರ ಸ್ವಾಮಿ ಮತ್ತಿತರ ದೇವಾಲಯಗಳಲ್ಲಿ ಶಿವರಾತ್ರಿ ಪೂಜೆ ನೆರವೇರಿದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/02/Untitled-11-11.jpg)