ನವದೆಹಲಿ:
ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಶೋಯೆಬ್ ಅಖ್ತರ್ ಅವರ ಯೂಟ್ಯೂಬ್ ಚಾನೆಲ್ ಅನ್ನು ಸೋಮವಾರ(ಎ.28) ಭಾರತದಲ್ಲಿ ನಿರ್ಬಂಧಿಸಲಾಗಿದೆ. ಕಾಶ್ಮೀರ ಕಣಿವೆಯಲ್ಲಿ 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಭಾರತದ ಸೇನೆಯ ವಿರುದ್ಧ ಪ್ರಚೋದನಕಾರಿ, ಕೋಮು ಸೂಕ್ಷ್ಮ ವಿಷಯ ಮತ್ತು ಸುಳ್ಳು ನಿರೂಪಣೆಗಳನ್ನು ಹರಡಿದ್ದಕ್ಕಾಗಿ ಭಾರತವು 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳನ್ನು ನಿಷೇಧಿಸಿದೆ ಎಂದು ಮೂಲಗಳು ತಿಳಿಸಿವೆ.
ಶೋಯೆಬ್ ಅಖ್ತರ್ ಅವರ ಕ್ರಿಕೆಟ್ ವಿಶ್ಲೇಷಣೆಯ ಯೂಟ್ಯೂಬ್ ಚಾನೆಲ್ ಭಾರತದಲ್ಲಿಯೂ ಖ್ಯಾತಿ ಪಡೆದಿತ್ತು. ಅವರು ಹೆಚ್ಚಾಗಿ ಕ್ರಿಕೆಟ್ ವಿಚಾರವಾಗಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡುತ್ತಿದ್ದರು. ಅಲ್ಲದೆ ಕೆಲವು ಕ್ರಿಕೆಟ್ ಸಲಹೆಯನ್ನು ಕೂಡ ನೀಡುತ್ತಿದ್ದರು. ಹೀಗಾಗಿ ಭಾರತದಲ್ಲಿಯೂ ಅವರ ಯೂಟ್ಯೂಬ್ ವಿಶ್ಲೇಷಣೆಯನ್ನು ಹೆಚ್ಚಾಗಿ ನೋಡುತ್ತಿದ್ದರು. ಅಖ್ತರ್ ಅವರ ಯೂಟ್ಯೂಬ್ ಚಾನೆಲ್ 3.5 ಮಿಲಿಯನ್ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿತ್ತು.
ಡಾನ್ ನ್ಯೂಸ್, ಸಮಾ ಟಿವಿ, ಎಆರ್ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ಜಿಯೋ ನ್ಯೂಸ್ ಮತ್ತು ಸುನೋ ನ್ಯೂಸ್ನಂತಹ ಪ್ರಮುಖ ಪಾಕಿಸ್ತಾನಿ ಸುದ್ದಿ ಚಾನೆಲ್ಗಳು ನಿಷೇಧಿತ ಪಟ್ಟಿಯಲ್ಲಿ ಸೇರಿದೆ.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತೀಯ ಸೇನೆಯೇ ಕಾರಣ ಎಂದು ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಆರೋಪಿಸಿದ್ದಲ್ಲದೆ, ಸೇನೆಯನ್ನು ‘ನಿಷ್ಪ್ರಯೋಜಕ’ ಎಂದು ಹೇಳಿದ್ದರು. ಇದರ ಜತೆಗೆ ಬಲೂಚಿಸ್ತಾನದಲ್ಲಿನ ಅಶಾಂತಿಗೂ ಭಾರತವೇ ಕಾರಣ ಎಂದು ದೂರಿದ್ದರು.
