ಹೈದರಾಬಾದ್:
ಮದುವೆ ಎಂದರೆ ನನಗೆ ತುಂಬಾ ಭಯವಿದೆ. ನಂಬಿಕೆ ಮತ್ತು ಬದ್ಧತೆಗಳನ್ನು ಒಂದು ಕಾಗದದ ತುಂಡಿನ ಮೇಲೆ ಬರೆದಿಡುವ ಕಲ್ಪನೆಯೇ ನನಗೆ ಇಷ್ಟವಿಲ್ಲ. ಮದುವೆ ಬಗ್ಗೆ ಭಯವಿದ್ದರೂ ತಾಯಿಯಾಗಬೇಕು ಎನ್ನುವ ಅಸೆ ಇದೆ. ಮಕ್ಕಳನ್ನು ಪಡೆಯಲು ಮದುವೆಯಾಗಬೇಕು ಎಂದೇನಿಲ್ಲ. ದತ್ತು ಕೂಡ ಪಡೆಯಬಹುದು. ಮಕ್ಕಳು ಎಲ್ಲರೂ ಸುಂದರರಾಗಿರುತ್ತಾರೆ. ಅವರಿಗೆ ಇಬ್ಬರು ಪೋಷಕರೂ ಬಹುಮುಖ್ಯವಾಗಿರುತ್ತಾರೆ ಎಂದು ನಟಿ, ಗಾಯಕಿ ಶ್ರುತಿ ಹಾಸನ್ ಹೇಳಿದ್ದಾರೆ.
ರಣವೀರ್ ಅಲ್ಲಾಬಾಡಿಯಾ ಅವರೊಂದಿಗೆ ಪಾಡ್ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ನಟಿ ಶ್ರುತಿ, ಮದುವೆಯ ಬಗ್ಗೆ ತಮಗಿರುವ ಭಯವನ್ನು ಹೊರಹಾಕಿದ್ದಾರೆ. ಅಲ್ಲದೇ ತಮಗೆ ಮಗು ಹೊಂದುವ ಆಸೆ ಇದೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ.
ಮದುವೆಯ ಮೇಲೆ ನನಗೆ ನಂಬಿಕೆ ಇದೆ. ಅದರಲ್ಲಿರುವ ನಿಷ್ಠೆಯನ್ನು ಗೌರವಿಸಿದರೂ ಮದುವೆಯು ಒಳಗೊಂಡಿರುವ ಬದ್ಧತೆಯ ಬಗ್ಗೆ ಭಯವಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ತಾವು ಈ ಹಿಂದೆ ಸಂತನು ಹಜಾರಿಕಾ ಅವರೊಂದಿಗೆ ಸಂಬಂಧದಲ್ಲಿದ್ದು, ಹೊಂದಾಣಿಕೆಯ ಕೊರತೆಯಿಂದಾಗಿ ಕಳೆದ ವರ್ಷ ತಮ್ಮಿಬ್ಬರ ಸಂಬಂಧ ಮುರಿದುಬಿದ್ದಿರುವುದಾಗಿ ತಿಳಿಸಿದರು.
ಮದುವೆಯಾಗದಿರಲು ತಾವು ನಿರ್ಧರಿಸಿರುವುದಾಗಿ ಹೇಳಿದ ಅವರು, ಮದುವೆಯ ಬದ್ಧತೆ ಮತ್ತು ನಿಷ್ಠೆಯನ್ನು ಗೌರವಿಸುವುದಾಗಿ ತಿಳಿಸಿದರು. ಮದುವೆಯಾಗುವ ಕಲ್ಪನೆಯೇ ನನ್ನಲ್ಲಿ ಭಯ ಹುಟ್ಟಿಸುತ್ತದೆ ಎಂದ ನಟಿ, ಈ ಹಿಂದೆ ತಾವು ಮದುವೆಯಾಗಲು ಬಹುತೇಕ ನಿರ್ಧರಿಸಿದ್ದೆ. ಆದರೆ ನಮ್ಮಿಬ್ಬರ ನಡುವಿನ ವ್ಯತ್ಯಾಸಗಳಿಂದಾಗಿ ಮದುವೆ ಯೋಚನೆ ಮುಂದುವರಿಯಲಿಲ್ಲ ಎಂದು ಹೇಳಿದರು.
ಅನಂತರ ತಾನು ಒಂಟಿಯಾಗಿದ್ದೇನೆ ಎಂದು ದೃಢಪಡಿಸಿದ, ಇದರಿಂದಲೇ ಹೆಚ್ಚು ಶಾಂತಿಯಿಂದ ಇರಲು ಸಾಧ್ಯ ಎಂಬುದನ್ನು ಕಲಿಯುತ್ತಿದ್ದೇನೆ. ನಾನು ಈಗ ನನ್ನನ್ನು ಹೆಚ್ಚು ಪ್ರೀತಿಸುತ್ತೇನೆ ಎಂದರು. ಮದುವೆಯ ಕಲ್ಪನೆಯೇ ನನಗೆ ಭಯ ಕೊಡುತ್ತದೆ. ಜೀವನದುದ್ದಕ್ಕೂ ನಾನು ನಾನಾಗಿರಲು ತುಂಬಾ ಶ್ರಮಿಸಿದ್ದೇನೆ. ಅದನ್ನು ಒಂದು ಕಾಗದದ ತುಂಡಿನಲ್ಲಿ ಲಗತ್ತಿಸುವ ಕಲ್ಪನೆಯೇ ನನಗೆ ನಿಜವಾಗಿಯೂ ಭಯಾನಕವೆನಿಸುತ್ತದೆ. ಆದರೆ ನಾನು ಬದ್ಧತೆ, ನಿಷ್ಠೆಯನ್ನು ನಂಬುತ್ತೇನೆ ಮತ್ತು ಮದುವೆ ಪ್ರತಿನಿಧಿಸುವ ಎಲ್ಲಾ ಸುಂದರವಾದ ವಿಷಯಗಳನ್ನು ನಾನು ನಂಬುತ್ತೇನೆ. ನಾನು ಅದನ್ನು ನಾನೇ ಮಾಡಬಹುದು. ನನಗೆ ಕಾಗದದ ತುಂಡು ಅಗತ್ಯವಿಲ್ಲ ಎಂದರು.
ತಾಯಿಯಾಗಬೇಕು ಎನ್ನುವ ಆಸೆ ಇದೆ ಎಂದ ಶ್ರುತಿ, ನಾನು ಎಂದಿಗೂ ಒಂಟಿ ತಾಯಿಯಾಗಲು ಬಯಸುವುದಿಲ್ಲ. ಯಾಕೆಂದರೆ ಮಗುವಿಗೆ ಇಬ್ಬರು ಪೋಷಕರು ಮುಖ್ಯ. ಮಕ್ಕಳ ಜವಾಬ್ದಾರಿ ಇಬ್ಬರು ಪೋಷಕರಿಗೂ ಇದೆ. ಅದು ಸಾಧ್ಯವಾದರೆ ಉತ್ತಮ. ಹಾಗಂತ ಸಿಂಗಲ್ ಪೇರೆಂಟ್ಸ್ ಆಗಿರುವವರನ್ನು ಖಂಡಿತ ದೂರುವುದಿಲ್ಲ. ಮಕ್ಕಳು ಆಕರ್ಶಕರು. ಒಂದು ವೇಳೆ ಸಿಂಗಲ್ ಪೇರೆಂಟ್ಸ್ ಆಗಬೇಕು ಎಂದಿದ್ದರೆ ಅದಕ್ಕೆ ಮದುವೆಯ ಅಗತ್ಯವಿಲ್ಲ. ಮಕ್ಕಳನ್ನು ದತ್ತು ಪಡೆಯಬಹುದು ಎಂದರು.
