ಗುವಾಹಟಿ:
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರನ್ನು ಹೊರಗಿಡಲಾಗಿದ್ದು, ಬಿಸಿಸಿಐ ಅವರನ್ನು ಶುಕ್ರವಾರ ತಂಡದಿಂದ ಬಿಡುಗಡೆ ಮಾಡಿದೆ. ಕುತ್ತಿಗೆ ನೋವಿನಿಂದ ಬಳಲುತ್ತಿರುವ ಗಿಲ್, ಹೆಚ್ಚಿನ ಮೌಲ್ಯಮಾಪನ ಮತ್ತು ಗಾಯದ ನಿರ್ವಹಣೆಗಾಗಿ ತಜ್ಞರನ್ನು ಸಂಪರ್ಕಿಸಲು ಮುಂಬೈ ತೆರಳಲಿದ್ದಾರೆ. ಗಿಲ್ ಅಲಭ್ಯತೆಯಲ್ಲಿ ಉಪನಾಯಕ ರಿಷಭ್ ಪಂತ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಆ ಮೂಲಕ ಭಾರತ ಟೆಸ್ಟ್ ಕ್ರಿಕೆಟ್ ತಂಡದ 38ನೇ ನಾಯಕರೆನಿಸಲಿದ್ದಾರೆ.
ಕೋಲ್ಕತಾದಿಂದ ಸಹ ಆಟಗಾರರ ಜತೆಗೆ ಗಿಲ್ ಗುವಾಹಟಿಗೆ ಪ್ರಯಾಣಿಸಿದ್ದರೂ ಕೂಡ ಗುರುವಾರ ತಂಡದ ಜತೆ ತರಬೇತಿ ಪಡೆಯಲಿಲ್ಲ ಮತ್ತು ಶುಕ್ರವಾರ ಅಂತಿಮ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಿತ್ತು. ವೈದ್ಯಕೀಯ ತಂಡವು ಯಾವುದೇ ಅಪಾಯಗಳನ್ನು ತೆಗೆದುಕೊಳ್ಳದಂತೆ ಸಲಹೆ ನೀಡಿದ್ದರಿಂದ ಅವರು ಪಂದ್ಯದಿಂದ ಹಿಂದೆ ಸರಿದರು.
ಗಿಲ್ ಸ್ಥಾನಕ್ಕೆ ಸಾಯಿ ಸುದರ್ಶನ್ ಹಾಗೂ ಕರ್ನಾಟಕದ ದೇವದತ್ತ ಪಡಿಕ್ಕಲ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಮೂರನೇ ಕ್ರಮಾಂಕದಲ್ಲಿ ಆಡಿರುವುದರಿಂದ ಸುದರ್ಶನ್ ಅವರನ್ನೇ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಈಗಾಗಲೇ ಆರು ಎಡಗೈ ಆಟಗಾರರನ್ನು ಕಣಕ್ಕಿಳಿಸಿತ್ತು. ವೇಗದ ಪಿಚ್ ಆಗಿರುವ ಕಾರಣ ಅಕ್ಷರ್ ಪಟೇಲ್ ಅವರನ್ನು ಕೈ ಬಿಟ್ಟು ಅವರ ಸ್ಥಾನದಲ್ಲಿ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಕೋಲ್ಕತ್ತಾ ಟೆಸ್ಟ್ ಪಂದ್ಯದ 2 ನೇ ದಿನದಂದು ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಕುತ್ತಿಗೆಗೆ ಗಾಯವಾಗಿತ್ತು, ದಿನದ ಆಟ ಮುಗಿದ ನಂತರ ಅವರನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮರುದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಮಾಡಲಾಗಿತ್ತು. ಸದ್ಯ ಗಿಲ್ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ತೆರಳಿದ್ದಾರೆ. ಹೀಗಾಗಿ ಅವರು ಏಕದಿನ ಸರಣಿಗೂ ಅನುಮಾನ ಎನ್ನಲಾಗಿದೆ.
ಗುವಾಹಟಿಯಲ್ಲಿ ಸೂರ್ಯಾಸ್ತವು ಬೇಗನೇ ಆಗುದರಿಂದ ೀ ಟೆಸ್ಟ್ ಪಂದ್ಯದ ಸಮಯದಲ್ಲಿಯೂ ವ್ಯತ್ಯಾಸವಾಗಿದೆ. ಬೆಳಿಗ್ಗೆ 8.30ಕ್ಕೆ ಟಾಸ್ ಆಗಲಿದೆ. ಬೆಳಿಗ್ಗೆ 9ಕ್ಕೆ ಆಟ ಆರಂಭವಾಗುವುದು. ಇದರಿಂದಾಗಿ ಚಹಾ ಮತ್ತು ಭೋಜನ ವಿರಾಮವು ಅದಲು ಬದಲಾಗಿದೆ. ಬೆಳಿಗ್ಗೆ 11 ಗಂಟೆಗೆ ಚಹಾ ವಿರಾಮ ಇರಲಿದೆ. 11.20ರಿಂದ ಮಧ್ಯಾಹ್ನ 1.20ರವರೆಗೆ ಎರಡನೇ ಅವಧಿ ಆಟ ನಡೆಯುವುದು. 1.20ರಿಂದ 2 ಗಂಟೆಯವರೆಗೆ ಊಟದ ವಿರಾಮ. ನಂತರ ಸಂಜೆ 4ರವರೆಗೆ ಆಟ ನಡೆಯಲಿದೆ.
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ಧ್ರುವ್ ಜುರೆಲ್,ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಆಕಾಶ್ ದೀಪ್, ನಿತೀಶ್ ಕುಮಾರ್ ರೆಡ್ಡಿ.








