ಶಿರಾ :
ಉಪ ಚುನಾವಣೆ ನಡೆದು ಕೇವಲ ಒಂದು ವಾರವೂ ಆಗಿಲ್ಲವಾದರೂ ರಾಜ್ಯದ ಮುಖ್ಯಮಂತ್ರಿಗಳು ಮದಲೂರು ಕೆರೆಗೆ ನೀರು ಹರಿಸುವ ಸಂಬಂಧವಾಗಿ ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯು ಕಳೆದ ಎರಡು ದಿನಗಳಿಂದಲೂ ಕೆರೆಯಲ್ಲಿ ಬೆಳೆದ ಹತ್ತಾರು ಎಕರೆಯಷ್ಟು ನಾಡಜಾಲಿ ಗಿಡಗಳನ್ನು ತೆಗೆಯುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದೆ.
ಕಳೆದ 30-40 ವರ್ಷಗಳಿಂದಲೂ ಮಳೆಯ ನೀರಿನಿಂದಲೂ ತುಂಬದ ಮದಲೂರು ಕೆರೆಯಲ್ಲಿ ಅಕ್ರಮ ಮರಳು ದಂಧೆ ನಡೆಯೆ ಜಾಸ್ತಿಯಾಗಿದ್ದು, ಇಡೀ ಕೆರೆಯ ತುಂಬಾ ನಾಡಜಾಲಿ ಗಿಡಗಳು ಬೆಳೆದು ನಿಂತಿವೆ. ಹೇಮಾವತಿ ನೀರನ್ನು ಹರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮದಲೂರು ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಸುಮಾರು 20 ಕ್ಕೂ ಹೆಚ್ಚು ಜೆ.ಸಿ.ಬಿ.ಗಳು ಕೆರೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿವೆ.
ಇತ್ತೀಚೆಗಷ್ಟೆ ನಡೆದ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಬಿ.ಜೆ.ಪಿ. ಪಕ್ಷವು ಕೂಡ ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸುವ ಭರವಸೆಯನ್ನು ಚುನಾವಣಾ ಪ್ರಚಾರದ ವೇಳೆ ನೀಡಿತ್ತು. ಆರಂಭದಲ್ಲಿ ಕೆರೆಯ ಸ್ವಚ್ಛತಾ ಕಾರ್ಯ ನಡೆದಿದ್ದು, ಮಂಗಳವಾರ ಸಂಜೆ ಸದರಿ ಸ್ಥಳಕ್ಕೆ ನೂತನ ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ಭೇಟಿ ನೀಡಿ ಕೆರೆಯ ಪರಿಶೀಲನೆ ಹಾಗೂ ಸ್ವಚ್ಛತಾ ಕಾರ್ಯವನ್ನು ಅವಲೋಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗುಣವಾಗಿದ್ದು, ಇಡೀ ತಾಲ್ಲೂಕಿನ ಹಾಗೂ ನೆರೆಯ ತಾಲ್ಲೂಕುಗಳ ಅಂತರ್ಜಲವನ್ನು ವೃದ್ಧಿಸುವ ಮದಲೂರು ಕೆರೆಯನ್ನು ಹೇಮಾವತಿಯಿಂದ ತುಂಬಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
