ಶಿರಾ :
ಅನಾರೋಗ್ಯದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಮೃತಪಟ್ಟ ಸಹಕಾರ ರತ್ನ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಎಸ್.ಎನ್.ಕೃಷ್ಣಯ್ಯ ಅವರು ಸಹಕಾರ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ನಿಜಕ್ಕೂ ಸ್ಮರಣಾರ್ಹವಾಗಿದ್ದು, ಎಲ್ಲರ ಮಾರ್ಗದರ್ಶಕರಾಗಿದ್ದ ಅವರ ಗುರಿ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್.ಎನ್.ಕೃಷ್ಣಯ್ಯ ಅವರ ಪುಣ್ಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಕಾಂಗ್ರೆಸ್ ಪಕ್ಷದ ಕಟ್ಟಾಳುವಿನಂತೆ ದುಡಿದ ಕೃಷ್ಣಯ್ಯ ಜಾತ್ಯತೀತ ಭಾವನೆಯ ವ್ಯಕ್ತಿ. ಅಹಿಂದ ಸಂಘಟನೆಯಲ್ಲೂ ದಣಿವರಿಯದಂತೆ ದುಡಿದಿದ್ದ ಅವರು, ಅಜಾತ ಶತ್ರುವೇ ಆಗಿದ್ದರು. ಜಿಲ್ಲೆಯಲ್ಲಿನ ಕಾಂಗ್ರೆಸ್ ಮುಖಂಡರಲ್ಲಿ ಅತ್ಯಂತ ಹಿರಿಯರೂ ಆಗಿದ್ದ ಕೃಷ್ಣಯ್ಯ ಪಕ್ಷ ನಿಷ್ಠೆಯಲ್ಲಿ ಪ್ರಮುಖರಾಗಿದ್ದರಲ್ಲದೆ, ಯುವ ಪೀಳಿಗೆಯ ಮಾರ್ಗದರ್ಶಕರಾಗಿದ್ದರು. ಅತ್ಯಂತ ಕಿರಿಯರನ್ನೂ ಗೌರವವಾಗಿ ಕಂಡ ಸೌಜನ್ಯಮೂರ್ತಿಯಾಗಿದ್ದ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಆಶಿಸಿದರು.
ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ, ವಿಜಯಕುಮಾರ್, ದಿ.ಎಸ್.ಎನ್.ಕೆ. ಅವರ ಪುತ್ರ ರೂಪೇಶ್ ಕೃಷ್ಣಯ್ಯ, ಚಿದಾನಂದ್, ವೆಂಕಟೇಶ್, ಅಜಯ್ಕುಮಾರ್, ಧರಣಿಕುಮಾರ್ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/01/sira-photo-number-310.1.2021-e1610343788455.jpg)