ಶಿರಾ :
ವಿಶ್ವದಲ್ಲಿ ಇರುವುದು ಒಂದೇ ಜಾತಿ ಅದು ಮನುಷ್ಯ ಜಾತಿ ಮಾತ್ರ. ಜಾತೀಯ ವಿಷ ಬೀಜಗಳನ್ನು ಬಿತ್ತುವ ಮೂಲಕ ಸಮಾಜದಲ್ಲಿನ ಅನ್ಯೂನ್ಯತೆಯ ಭಾವಗಳನ್ನು ಯಾರೂ ಕೂಡಾ ಕದಡ ಬಾರದು ಎಂದು ರಂಗನಾಥ್ ಟೈರ್ ತಿಳಿಸಿದರು.
ತಾಲ್ಲೂಕಿನ ಯಂಜಲಗೆರೆ, ವಾಜರಹಳ್ಳಿ, ಚಂಗಾವರ, ರಾಮಲಿಂಗಾಪುರ, ಕಳ್ಳಂಬೆಳ್ಳ ಹಾಗೂ ಕಳಾಪುರ ಗ್ರಾಮಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ, ಹಾಗೂ ತಾಲ್ಲೂಕು ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ಸಹಯೋಗದೊಂದಿಗೆ ಅಸ್ಪೃಶ್ಯತಾ ನಿವಾರಣಾ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನುಷ್ಯ ಮನುಷ್ಯರ ನಡುವೆ ಸ್ವಾವಲಂಬನೆ, ಸೌಹಾರ್ದತೆ ಮೂಡಬೇಕು. ನೀರು, ಗಾಳಿ, ಪ್ರಕೃತಿಗೆ ಜಾತಿ ವ್ಯವಸ್ಥೆ ಇಲ್ಲದಿರುವಾಗ ನಮಗೇಕೆಬೇಕು. ಈ ದೇಶದಲ್ಲಿ ಮಾತ್ರ ಶ್ರೇಣಿ ಕೃತ ಜಾತಿ ವ್ಯವಸ್ಥೆ ಇದ್ದು ಒಬ್ಬರ ಮೇಲೆ ಒಬ್ಬರು ಜಾತಿಯ ಹೆಸರಿನಲ್ಲಿ ತುಳಿಯುತ್ತಿದ್ದಾರೆ. ವಿಶ್ವದಲ್ಲಿ ಇರುವುದು ಒಂದೇ ಜಾತಿ ಅದು ಮನುಷ್ಯ ಜಾತಿ. ಈ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಸರ್ವರಿಗೂ ಸಾಮಾಜಿಕ ಜ್ಞಾನದ ಅರಿವು ಮೂಡಬೇಕು ಎಂದರು.
ಶಿವಾಜಿನಗರದ ತಿಪ್ಪೇಸ್ವಾಮಿ ಮಾತನಾಡಿ ನಮ್ಮನಾಳುವ ಸರ್ಕಾರಗಳು ಜಾತಿ ಹೆಸರಿನಲ್ಲಿ ನಮ್ಮನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ. ನಾವುಗಳು ಸರ್ಕಾರದ ಸೌಲಭ್ಯ ಪಡೆದು ಆರ್ಥಿಕವಾಗಿ ಮುಂದುವರೆಯಲು ಮಾತ್ರಾ ಜಾತಿ ಹೆಸರು ಎಂದರು.
ಕೆಂಪನಹಳ್ಳಿ ಶಾಂತಕುಮಾರ್ ಮಾತನಾಡಿ ಪ್ರಪಂಚದಲ್ಲಿ ಯಾವ ಧರ್ಮದಲ್ಲಿಯೂ ಸಹ ಜಾತಿ ವ್ಯವಸ್ಥೆ ಇಲ್ಲ. ಇದ್ದರೆ ಅದು ಭಾರತ ದೇಶದಲ್ಲಿ ಅದರಲ್ಲೂ ಹಿಂದೂ ಧರ್ಮದಲ್ಲಿ ಮಾತ್ರ. ಯಾರೂ ಅಸ್ಪೃಶ್ಯತಾ ಆಚರಣೆ ಮಾಡಬಾರದು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಮಟ್ಟದ ಕಲಾವಿದ ದ್ವಾರನಕುಂಟೆ ಲೋಕೇಶ್ ಮತ್ತು ಕಲಾತಂಡದವರಿಂದ ಸಾರ್ವಜನಿಕರಿಗೆ ಅಸ್ಪೃಶ್ಯತಾ ನಿರ್ಮೂಲನೆ ಹಾಗೂ ಅರಿವು ಮೂಡಿಸುವ ವಿವಿಧ ಗೀತೆಗಳನ್ನು ಹಾಡುವ ಮೂಲಕ ಮತ್ತು ಸರ್ಕಾರದ ನಿಯಮಗಳ ಬಗ್ಗೆ ವಿಚಾರ ತಿಳಿಸಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಕಾರೇಹಳ್ಳಿರಂಗನಾಥ್, ಮತ್ತು ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ