ನಿವೇಶನ ಹಂಚಿಕೆ : ಅಧಿಕಾರಿಗಳು ಒತ್ತಡಕ್ಕೆ ಮಣಿಯಬೇಡಿ

ಶಿರಾ : 

      ಯಾವುದೇ ಒತ್ತಡಕ್ಕೆ ಮಣಿಯದೆ ನೈಜ ಬಡ ಕುಟುಂಬದ ನಿವೇಶನ ರಹಿತರನ್ನು ಆದ್ಯತೆಯ ಮೇಲೆ ಗುರ್ತಿಸಿ ಆಶ್ರಯ ಯೋಜನೆಯ ನಿವೇಶನಕ್ಕೆ ಆಯ್ಕೆ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

      ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಗರಸಭಾ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ನೀಡಲು ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ನಿರಾಶ್ರಿತರಿಗೆ ನಿವೇಶನಗಳನ್ನು ನೀಡುವುದು ನಮ್ಮ ಕರ್ತವ್ಯವಾಗಬೇಕು. ಈಗಾಗಲೆ ನಿವೇಶನ ಹೊಂದಿದವರು ಪಟ್ಟಿಯಲ್ಲಿ ನೋಂದಾಯಿಸಿದ್ದರೆ ಅಂತಹ ಪಟ್ಟಿಯ ಪರಿಷ್ಕರಣೆ ಮಾಡಬೇಕು. ಸರ್ಕಾರದ ನಿವೇಶನ ಸಿಗುತ್ತದೆ ಎಂಬ ಆಸೆಯಿಂದ ಈಗಾಗಲೆ ವಿವಿಧ ಯೋಜನೆಗಳಡಿ ನಿವೇಶನ ಪಡೆದವರು ಕೂಡ ಅರ್ಜಿ ಸಲ್ಲಿಸಿರುವ ಸಾಧ್ಯತೆಗಳಿವೆಯಲ್ಲದೆ, ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ಅರ್ಹರನ್ನು ಗುರ್ತಿಸಬೇಕು. ನಗರ ವ್ಯಾಪ್ತಿಯಲ್ಲಿನ ಮುಖ್ಯ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೂಡಲೆ ಅಂತಹ ಜನನಿಬಿಡ ರಸ್ತೆಗಳಲ್ಲಿ ರಸ್ತೆ ಹುಬ್ಬುಗಳನ್ನು ನಿರ್ಮಿಸುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯುವಂತೆ ಚಿದಾನಂದ್ ಎಂ.ಗೌಡ ಸೂಚನೆ ನೀಡಿದರು.

      ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಮಾತನಾಡಿ, ಸರ್ಕಾರದ ಯಾವುದೆ ಸೌಲಭ್ಯಗಳು ಅರ್ಹರಿಗೆ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದ್ದು, ಅಧಿಕಾರಿಗಳು ಅರ್ಹರನ್ನು ಗುರ್ತಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು ಎಂದರು.

      ತಹಸೀಲ್ದಾರ್ ಮಮತಾ, ನಗರ ಸಭೆ ಆಯುಕ್ತ ಪರಮೇಶ್ವರಪ್ಪ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ್, ಬೆಸ್ಕಾಂ ಎಂಜಿನಿಯರ್ ಶಾಂತರಾಜು, ನಗರ ಠಾಣಾ ಸಿಪಿಐ ಹನುಮಂತರಾಯಪ್ಪ, ಸ್ಲಂ ಬೋರ್ಡ್ ಅಭಿಯಂತರರು ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link