ಶಿರಾ :
ಶಿರಾ ನಗರಸಭೆ ಈಗ ಬರೀ ಹೋಳಾಗಿಯೇ ಕಾಣುತ್ತಿದೆ. ಕಳೆದ 8 ವರ್ಷಗಳಿಂದಲೂ ನಡೆಯದ ಇಲ್ಲಿನ ನಗರಸಭೆಯ ಚುನಾವಣೆ ನಡೆಸಲೇಬೇಕೆಂಬ ಕಾತರವನ್ನು ಸರ್ಕಾರ ಕೂಡ ವ್ಯಕ್ತಪಡಿಸಲೇ ಇಲ್ಲ. ರಾಜ್ಯದಲ್ಲಿನ ಎಲ್ಲಾ ಉಪ ಚುನಾವಣೆಗಳು, ಪುರಸಭೆ, ನಗರಸಭೆ, ಮಹಾ ನಗರಪಾಲಿಕೆ, ಪಟ್ಟಣ ಪಂಚಾಯ್ತಿಗಳ ಚುನಾವಣೆಗಳು ನಡೆದಿದ್ದರೂ ಶಿರಾ ನಗರಸಭಾ ಚುನಾವಣೆ ಮಾತ್ರ ಕೊನೆಗೂ ನೆನೆಗುದಿಗೆ ಬಿದ್ದೇ ಬಿಟ್ಟಿದೆ.
ಈ ಹಿಂದೆ ಇಲ್ಲಿನ ನಗರಸಭೆಯ ಚುನಾವಣೆ ನಡೆದದ್ದು 7.3.2013. ಮತ ಎಣಿಕೆ ನಡೆದಿದ್ದು 11.3.2013, ಅಧ್ಯಕ್ಷರ ಚುನಾವಣೆ ನಡೆದಿದ್ದು 12.3.2014. ಮೊದಲ ಕೌನ್ಸಿಲ್ ಸಭೆ ನಡೆದಿದ್ದು 9.5.2014. ಚುನಾಯಿತ ಮಂಡಳಿ ಮುಕ್ತಾಯಗೊಂಡಿದ್ದು 12.3.2019 ರಂದು. ಅಂದರೆ ನಗರಸಭೆಯ ಚುನಾವಣೆ ನಡೆದು ಇಲ್ಲಿಗೆ 8 ವರ್ಷಗಳೆ ಸಂದಿದ್ದರೂ ಮತ್ತೊಂದು ಚುನಾವಣೆ ಈವರೆಗೂ ನಡೆದೇ ಇಲ್ಲ ಅಂಬುದು ಅಚ್ಚರಿಯಷ್ಟೇ ಅಲ್ಲ ದಿಟದ ಸಂಗತಿಯೂ ಹೌದು.
ಮೀಸಲಾತಿಗೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದಲೂ ಕೋರ್ಟು-ಕಛೇರಿಗಳ ತಿಕ್ಕಾಟಗಳ ನಡುವೆ ಸದಸ್ಯರ ಚುನಾವಣೆಗೂ ಕೂಡ ಸರ್ಕಾರ ಎಳ್ಳು-ನೀರು ಬಿಟ್ಟಿದೆ. 8 ವರ್ಷಗಳಿಂದಲೂ ನಡೆಯದ ಚುನಾವಣೆಯಿಂದಾಗಿ ಇಲ್ಲಿ ಯಾವೊಬ್ಬ ಜನಪ್ರತಿನಿಧಿಗಳೂ ಇಲ್ಲವಾದ್ದರಿಂದ ಇಲ್ಲಿನ ಆಡಳಿತದ ನೊಗ ದಿಕ್ಕು ತಪ್ಪಿ ನಡೆಯುತ್ತಿದೆ.
ಇಲ್ಲಿನ ನಗರಸಭೆಯ ವ್ಯಾಪ್ತಿಯಲ್ಲಿ ದಿನ ಬೆಳಗಾದರೆ ನೋಡಲಿಕ್ಕೆ ಎಲ್ಲವೂ ಚೆಂದ ಅನ್ನಿಸುತ್ತದೆ. ಆದರೆ ನಗರದ ಬಡಾವಣೆಗಳ ಒಳ ಹೊಕ್ಕಿ ನೋಡಿದರೆ ನಗರಸಭೆಯ ಇಡೀ ಆಡಳಿತ ವೈಫಲ್ಯವೇ ಹೋಳು ಹೋಳಾಗಿ ಕಂಡು ಜನರ ಕಣ್ಣು ಕುಕ್ಕುತ್ತಿದೆ.
ಕಳೆದ 20 ವರ್ಷಗಳಿಂದಲೂ ಶಿರಾ ನಗರದ ಜನರ ಬಾಯಾರಿಕೆಯನ್ನು ನಿವಾರಿಸುತ್ತಿದ್ದ ಹೇಮಾವತಿಯ ನೀರು ದೊಡ್ಡ ಕೆರೆಯ ಜಲಸಂಗ್ರಹಾಗಾರದಲ್ಲಿ ದಿನದಿನಕ್ಕೂ ಕಡಿಮೆಯಾಗಿ ಇದೀಗ ಇಡೀ ಕೆರೆಯ ನೀರು ಖಾಲಿಯಾಗುವತ್ತ ಸಾಗಿದೆ.
ಕುಡಿಯುವ ನೀರನ್ನು ಹಿತವಾಗಿ, ಮಿತವಾಗಿ ಬಳಸದ ಜನರ ತಪ್ಪೋ ಅಥವಾ ಸಾರ್ವಜನಿಕ ನಲ್ಲಿಗಳಿಗೆ ಸರಿಯಾಗಿ ವಾಲ್ವ್ಗಳನ್ನು ಹಾಕದೇ ಕೈಚೆಲ್ಲಿ ಕೂತ ನಗರಸಭೆಯ ತಪ್ಪೋ, ಒಟ್ಟಾರೆ ಇನ್ನೂ ಒಂದೆರಡು ತಿಂಗಳುಗಳವರೆಗೆ ಪೂರೈಕೆ ಮಾಡಬಹುದಾಗಿದ್ದ ಹೇಮಾವತಿಯ ನೀರು ಇನ್ನೇನು 15-20 ದಿನಗಳಲ್ಲಿ ಸಂಪೂರ್ಣವಾಗಿ ಖಾಲಿಯಾಗುವ ಹಂತವನ್ನು ತಲುಪಿದೆ.
ನಗರದ ಶಿರಸ್ತೆದಾರ್ ಕಟ್ಟೆಯಲ್ಲಿ ಕೊರೆಸಲಾಗಿದ್ದ ನೂರಾರು ಕೊಳವೆ ಬಾವಿಗಳ ಪೈಕಿ ಇದೀಗ ನೀರು ಪೂರೈಕೆಯಾಗುತ್ತಿರುವುದು 12 ರ ಪೈಕಿ ಕೇವಲ 10 ಕೊಳವೆ ಬಾವಿಗಳಿಂದ ಮಾತ್ರ. ಈ ಹತ್ತು ಕೊಳವೆ ಬಾವಿಗಳ ನೀರನ್ನು ಓವರ್ ಹೆಡ್ ಟ್ಯಾಂಕ್ಗೆ ಪೂರೈಸಿಕೊಂಡು ಹೇಮಾವತಿ ನೀರಿನ ಜೊತೆಗೆ ಕೂಡಿಸಿ ಸಾರ್ವಜನಿಕರಿಗೆ ಪೂರೈಕೆ ಮಾಡಲಾಗುತ್ತಿತ್ತು.
ಈ ನಡುವೆ ಹಿತ, ಮಿತವಾಗಿ ಬಳಸದ ನೀರಿನಿಂದಾಗಿ ಡೊಡ್ಡಕೆರೆಯ ಹೇಮಾವತಿ ನೀರಿನ ಜಲ ಸಂಗ್ರಹಾಗಾರ ಖಾಲಿಯಾಗುವತ್ತ ಸಾಗಿದೆ. ಕೆರೆಯಲ್ಲಿನ ನೀರನ್ನು ಸಮರ್ಪಕವಾಗಿ ಶುದ್ಧೀಕರಿಸಿ ನೀಡುವ ಮೂಲಕ ಈವರೆಗೆ ಜನರ ನೀರಿನ ಬವಣೆ ನೀಗಿಸುತ್ತಿದ್ದ ನಗರಸಭೆಗೆ ಈಗ ಸಂಪೂರ್ಣ ಗರ ಬಡಿದಿದೆ. ಕಳೆದ ಒಂದು ತಿಂಗಳಿಂದಲೂ ಶುದ್ಧೀಕರಣ ಘಟಕದಲ್ಲಿ ನೀರನ್ನು ಶುದ್ಧೀಕರಿಸಿ ನೀಡದೆ ಕೆರೆಯ ನೀರನ್ನೇ ನೇರವಾಗಿ ಪೂರೈಕೆ ಮಾಡಲಾಗುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ನಗರದಲ್ಲಿ ಒಟ್ಟು 31 ವಾರ್ಡುಗಳಿದ್ದು ಈ 31 ವಾರ್ಡುಗಳಲ್ಲೂ ಕೂಡ ಈ ಹಿಂದೆ ಆಯ್ಕೆಯಾಗಿ ಅಧಿಕಾರ ಕಳೆದುಕೊಂಡ ಸದಸ್ಯರು ತಮ್ಮ ಉಸಾಬರಿಯನ್ನು ಕಳೆದುಕೊಂಡ ಪರಿಣಾಮ ವಾರ್ಡುಗಳ ಬಗ್ಗೆ ತಲೆಕೆಡಿಸಿಕೊಳ್ಳುವವರೆ ಇಲ್ಲವಾಗಿದೆ. ನಗರಸಭೆಯಿಂದ ವಾರಕ್ಕೊಮ್ಮೆ, 15 ದಿನಕ್ಕೊಮ್ಮೆ ಪೂರೈಸುವ ಕೆರೆಯ ನೀರನ್ನು ಶುದ್ಧೀಕರಿಸಿ ನೀಡದ ಪರಿಣಾಮ ನಗರದ ಜನತೆ ನಗರಸಭೆಗೆ ಹಿಡಿ ಶಾಪ ಹಾಕುವಂತಾಗಿದೆ.
ನಗರಸಭೆಯು ಸಾರ್ವಜನಿಕರ ಮನೆಗಳಿಗೆ ನೀರನ್ನು ಪೂರೈಕೆ ಮಾಡುತ್ತಿದ್ದಂತೆಯೇ ನೀರು ದುರ್ವಾಸನೆಯಿಂದ ಕೂಡಿದ್ದು ಕಸ, ಅನೈರ್ಮಲ್ಯದಿಂದ ತುಂಬಿದ ನೀರು ಮನೆಯ ನೀರಿನ ಸಂಪುಗಳಿಗೆ ಹರಿದು ಬರುತ್ತಿದೆ. ನೀರನ್ನು ನೀರಿನ ತೊಟ್ಟಿಗಳಿಗೆ ಹರಿಯ ಬಿಟ್ಟ ಕೂಡಲೇ ಚರಂಡಿಯ ವಾಸನೆಯಂತೆ ನೀರು ಶೇಖರಣೆಯಾಗುತ್ತಿದ್ದು, ಕುಡಿಯಲಷ್ಟೇ ಅಲ್ಲ, ಕನಿಷ್ಠ ಸ್ನಾನ ಮಾಡಲು ಕೂಡ ಈ ನೀರು ಯೋಗ್ಯವಲ್ಲವೆಂಬ ಅಂಶ ಸಾರ್ವಜನಿಕರಿಗೆ ದೃಢಪಟ್ಟಿದ್ದರೂ ನಗರಸಭೆಯ ಅಧಿಕಾರಿಗಳು ಮಾತ್ರ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ.
ಲಕ್ಷ ಲಕ್ಷ ರೂ.ಗಳನ್ನು ತೆತ್ತು ಕೊಂಡು ತಂದ ಆಲಂನ್ನು ಕೂಡ ಶುದ್ಧೀಕರಣಕ್ಕೆ ಬಳಸುತ್ತಿಲ್ಲವೆಂಬ ವ್ಯಾಪಕ ಆರೋಪಗಳು ವ್ಯಕ್ತವಾಗಿದ್ದು, ಆಲಂ ಹಾಕುವುದಿರಲಿ ನೀರನ್ನೇ ಶುದ್ಧೀಕರಿಸುತ್ತಿಲ್ಲವೆಂಬ ವ್ಯಾಪಕ ವಿರೋಧ ಸಾರ್ವಜನಿಕರಿಂದ ವ್ಯಕ್ತಗೊಳ್ಳುತ್ತಿದೆ.
ಮನೆಗಳ ನೀರಿನ ತೊಟ್ಟಿಗಳಿಗೆ ಪೂರೈಕೆಯಾಗುತ್ತಿರುವ ನೀರು ಚರಂಡಿಯ ನೀರಿನಂತೆ ಕೂಡಿದ್ದು, ಈ ನೀರನ್ನು ಬಳಸಿದರೆ ಜನರಲ್ಲಿ ಚರ್ಮರೋಗಗಳ ಭಯವೂ ಕಾಡಹತ್ತಿದೆ. ಈಗಾಗಲೇ ಅನೇಕ ಮಂದಿ ಈ ನೀರಿನ ಬಳಕೆಯಿಂದ ಆಸ್ಪತ್ರೆಗಳಿಗೂ ದಾಖಲಾಗುತ್ತಿದ್ದು ಸೋಂಕಿನಂತಹ ರೋಗಗಳು ಜನರನ್ನು ಕಾಡಹತ್ತಿವೆ.
ಸಾರ್ವಜನಿಕರ ದೂರಿನ ಮೇರೆಗೆ ಕ್ಷೇತ್ರದ ಶಾಸಕರು ಇತ್ತೀಚೆಗಷ್ಟೇ ಕೆರೆಗೆ ಹಾಗೂ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಬಂದು ಸರಿಯಾಗಿ ಶುದ್ಧೀಕರಿಸಿದ ನೀರನ್ನು ನೀಡುವಂತೆ ಸೂಚನೆ ನೀಡಿ ಬಂದಿದ್ದರಾದರೂ ಶಾಸಕರ ಆದೇಶಕ್ಕೂ ನಗರಸಭೆ ಸೊಪ್ಪು ಹಾಕದೆ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ನಗರದಲ್ಲಿ ಕೇವಲ ಶುದ್ಧ ಕುಡಿಯುವ ನೀರಿನ ಸಮಸ್ಯೆಯಷ್ಟೇ ಅಲ್ಲದೆ ಮೂಲಭೂತ ಸಮಸ್ಯೆಗಳು ಕೂಡ ಸಾರ್ವಜನಿಕರನ್ನು ಕಾಡಹತ್ತಿವೆ. ಖಾತೆ ಬದಲಾವಣೆ, ಖಾತಾ ನಕಲು, ಬೀದಿ ದೀಪ ಸಮಸ್ಯೆ, ಜನನ-ಮರಣ ಪ್ರಮಾಣ ಪತ್ರ, ಆಶ್ರಯ ನಿವೇಶನ, ಮನೆ ಕಟ್ಟಿಕೊಳ್ಳಲು ಸಹಾಯಧನದಂತಹ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಗರಸಭೆಗೆ ಬರುವ ಸಾರ್ವಜನಿಕರು ಅಷ್ಟು ಸುಲಭವಾಗಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವೆ ಇಲ್ಲವೆಂಬಂತಹ ಸ್ಥಿತಿ ಇಲ್ಲಿ ನಿರ್ಮಾಣಗೊಂಡಿದೆ.
ಇಲ್ಲಿ ಆರೋಗ್ಯ ನಿರೀಕ್ಷಕರು ಕೂಡ ಒಂದು ರೀತಿಯ ಆಯುಕ್ತರೆ ಆಗಿಬಿಟ್ಟಿದ್ದಾರೆ. ಬಡಾವಣೆಗಳ ಚರಂಡಿಗಳ, ಕಸ ವಿಲೇವಾರಿ, ನೈರ್ಮಲ್ಯ ಕಾಪಾಡುವಲ್ಲೂ ಕೂಡ ತಾರತಮ್ಯವೆಸಗಲಾಗುತ್ತಿದೆ. ಸ್ಥಿತಿವಂತರ ಹಾಗೂ ರಾಜಕಾರಣಿಗಳ ಬೆಂಬಲವಿರುವ ಮನೆಗಳ ಮುಂದಿನ ಅನೈರ್ಮಲ್ಯದ ಬಗ್ಗೆ ಗಮನ ಹರಿಸುವ ಕೆಲ ಆರೋಗ್ಯ ನಿರೀಕ್ಷಕರುಗಳು, ಜನ ಸಾಮಾನ್ಯರ ಬಡಾವಣೆಗಳತ್ತ ತಲೆ ಹಾಕಿಯೂ ಮಲಗುವುದಿಲ್ಲ. ಈವರೆಗೂ ಕೋವಿಡ್ನ್ನೇ ಮುಂದು ಮಾಡಿಕೊಂಡು ಕಾಲ ಹರಣ ಮಾಡಿದ ಆರೋಗ್ಯ ನಿರೀಕ್ಷಕರಿಗೆ ಶಾಸಕರು ಬಿಸಿ ಮುಟ್ಟಿಸಲೆ ಬೇಕಿದೆ.
ನಗರಸಭೆಯ ಇಂತಹ ಕೆಲಸ ಕಾರ್ಯಗಳಿಗೆಂದು ಬಂದು ಹೋದವರು ಸುಮ್ಮನೆಯಂತೂ ಕೂರದೆ ಈ ಸಂಬಂಧ ನಗರದ ಬಹುತೇಕ ಸಾರ್ವಜನಿಕರು ಕ್ಷೇತ್ರದ ಶಾಸಕರಿಗೆ ತಮ್ಮ ನಿವೇದನೆಯನ್ನು ಭಿನ್ನವಿಸಿಕೊಂಡಿದ್ದರೂ ಯಾವುದೇ ಪ್ರಯೋಜನವೂ ಇಲ್ಲದಂತಾಗಿದೆ. ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರೂ ಆ ಸೂಚನೆಗಳೆಲ್ಲವೂ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಾಲಿಗೆ ಗಾಳಿಯಲ್ಲಿ ತೇಲಿ ಹೋದ ಬಲೂನಿನಂತಾಗಿದೆ.
ಅತ್ತ ಹಾಯುವುದೂ ಇಲ್ಲ, ಇತ್ತ ಒದೆಯುವುದೂ ಇಲ್ಲವೆಂಬಂತಹ ಶಾಸಕರ ಮೃದುತ್ವದ ಭಾವನೆಗಳನ್ನು ಚೆನ್ನಾಗಿಯೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ನಗರಸಭೆಯ ಸಿಬ್ಬಂದಿ ಶಾಸಕರ ಸೂಚನೆಯನ್ನೂ ಧಿಕ್ಕರಿಸಿ ನಡೆಯುವಂತಾಗಿರುವುದು ನಗರದ ಜನತೆಯ ದೌರ್ಭಾಗ್ಯವೇ ಸರಿ.
ಶಿರಾ ನಗರಸಭೆಗೆ ಅತಿ ಹೆಚ್ಚಾಗಿ ಸಾರ್ವಜನಿಕರ ಒಡನಾಟಕ್ಕಿಂತಲೂ ಈಗ ಗುತ್ತಿಗೆದಾರರ ಒಡನಾಟವೆ ಹೆಚ್ಚಾಗಿದೆ. ಹೇಳುವವರು, ಕೇಳುವವರೆ ಇಲ್ಲದೆ ನಡೆದ ಕಾಮಗಾರಿಗಳ ಹಣ ಪಾವತಿಗಾಗಿ ನಗರಸಭೆಯಲ್ಲಿ ಹಿಂದೆ ನಡೆಯದ ಎಲ್ಲಾ ಕಣ್ಣಾಮುಚ್ಚಾಲೆ ಆಟಗಳೂ ನಡೆಯುತ್ತಿದ್ದು, ನಗರಸಭೆಯ ಅನುದಾನ ತಿಂದು ತೇಗುವವರ ಪಾಲಾಗಿದೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಮಧ್ಯವರ್ತಿಗಳ ಹಾವಳಿಯೂ ಹೆಚ್ಚಾಗಿದೆ.
ಈವರೆಗೆ ಕೋವಿಡ್ ಇದ್ದದ್ದರಿಂದ ಕ್ಷೇತ್ರದ ಶಾಸಕರಾದಿಯಾಗಿ ಅಧಿಕಾರಿಗಳು ಕೂಡ ಕೋವಿಡ್ ವಾರಿಯರ್ಸ್ಗಳಂತೆ ಕೆಲಸ ಮಾಡುತ್ತಿರುವುದನ್ನು ಕಂಡು ನಗರಸಭೆಯ ಬೆಟ್ಟದಂತಹ ಸಮಸ್ಯೆಗಳು ಕಣ್ಣು ಮುಂದೆ ಇದ್ದರೂ ಸುಮ್ಮನಿದ್ದ ಜನತೆ ಇದೀಗ ತಮ್ಮ ಸಮಸ್ಯೆಗಳ ಭಾವನೆಗಳ ಕಟ್ಟೆಯೊಡೆದಿದ್ದು ನಗರಸಭೆಯ ಆಡಳಿತ ವೈಫಲ್ಯದ ಬಗ್ಗೆ ವ್ಯಾಪಕ ವಿರೋಧವೇ ಉಂಟಾಗುತ್ತಿದೆ.
ನಗರದಲ್ಲಿನ ಸಮಸ್ಯೆಗಳ ಮಹಾಪೂರಗಳನ್ನು ಕಂಡೂ ಕಾಣದಂತಿರುವ ಶಾಸಕರು ಈ ಕೂಡಲೇ ಜನತೆಯ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪ, ಚರಂಡಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆದರೂ ಅಚ್ಚರಿಯೇ ಇಲ್ಲ.
ಶಿರಾ ನಗರಸಭೆಗೆ ಅತಿ ಹೆಚ್ಚಾಗಿ ಸಾರ್ವಜನಿಕರ ಒಡನಾಟಕ್ಕಿಂತಲೂ ಈಗ ಗುತ್ತಿಗೆದಾರರ ಒಡನಾಟವೇ ಹೆಚ್ಚಾಗಿದೆ. ಹೇಳುವವರು, ಕೇಳುವವರೆ ಇಲ್ಲದೆ ನಡೆದ ಕಾಮಗಾರಿಗಳ ಹಣ ಪಾವತಿಗಾಗಿ ನಗರಸಭೆಯಲ್ಲಿ ಈ ಹಿಂದೆ ನಡೆಯದ ಎಲ್ಲಾ ಕಣ್ಣಾಮುಚ್ಚಾಲೆ ಆಟಗಳೂ ನಡೆಯುತ್ತಿದ್ದು, ನಗರಸಭೆಯ ಅನುದಾನ ತಿಂದು ತೇಗುವವರ ಪಾಲಾಗಿದೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಮದ್ಯವರ್ಥಿಗಳ ಹಾವಳಿಯೂ ಹೆಚ್ಚಾಗಿದೆ.
ಅತ್ತ ಹಾಯುವುದೂ ಇಲ್ಲ, ಇತ್ತ ಒದೆಯುವುದೂ ಇಲ್ಲವೆಂಬಂತಹ ಶಾಸಕರ ಮೃದುತ್ವದ ಭಾವನೆಗಳನ್ನು ಚೆನ್ನಾಗಿಯೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ನಗರಸಭೆಯ ಸಿಬ್ಬಂದಿ ಶಾಸಕರ ಸೂಚನೆಯನ್ನೂ ಧಿಕ್ಕರಿಸಿ ನಡೆಯುವಂತಾಗಿರುವುದು ನಗರದ ಜನತೆಯ ದೌರ್ಭಾಗ್ಯವೇ ಸರಿ.
ಈವರೆಗೆ ಕೋವಿಡ್ ಇದ್ದದ್ದರಿಂದ ಕ್ಷೇತ್ರದ ಶಾಸಕರಾದಿಯಾಗಿ ಅಧಿಕಾರಿಗಳು ಕೂಡ ಕೋವಿಡ್ ವಾರಿಯರ್ಸ್ಗಳಂತೆ ಕೆಲಸ ಮಾಡುತ್ತಿರುವುದನ್ನು ಕಂಡು ನಗರಸಭೆಯ ಬೆಟ್ಟದಂತಹ ಸಮಸ್ಯೆಗಳು ಕಣ್ಣು ಮುಂದೆ ಇದ್ದರೂ ಸುಮ್ಮನಿದ್ದ ಜನತೆ ಇದೀಗ ತಮ್ಮ ಸಮಸ್ಯೆಗಳ ಭಾವನೆಗಳ ಕಟ್ಟೆಯೊಡೆದಿದ್ದು ನಗರಸಭೆಯ ಆಡಳಿತ ವೈಫಲ್ಯದ ಬಗ್ಗೆ ವ್ಯಾಪಕ ವಿರೋಧವೆ ಉಂಟಾಗುತ್ತಿದೆ.
(ಬರಗೂರು ವಿರೂಪಾಕ್ಷ)
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
