ಶಿರಾ :
ಕಳೆದ ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದ ಸತಿ-ಪತಿಗಳಿಬ್ಬರು ತಮ್ಮ ಕುಟುಂಬದಲ್ಲಿ ಉಂಟಾದ ಕೆಲ ಭಿನ್ನಾಭಿಪ್ರಾಯಗಳಿಂದ ದೂರವಿದ್ದರಲ್ಲದೆ, ಸಂಸಾರದಲ್ಲಿ ವಿರಸ ಉಂಟಾಗಿತ್ತು. ಗ್ರಾಪಂ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಮತ ಚಲಾಯಿಸಲು ಗ್ರಾಮಕ್ಕೆ ಬಂದಿದ್ದ ಇಬ್ಬರೂ ಕೂಡ ಭಿನ್ನಾಭಿಪ್ರಾಯ ಮರೆತು ಒಂದಾದ ಪ್ರಸಂಗ ತಾಲ್ಲೂಕಿನ ಹುಳಿಗೆರೆ ಗ್ರಾಮದ ಮತಗಟ್ಟೆಯಲ್ಲಿ ನಡೆಯಿತು.
ಕಳೆದ ನಾಲ್ಕು ವರ್ಷದ ಹಿಂದೆ ಹುಳಿಗೆರೆ ಗ್ರಾಮದ ಗೋವಿಂದಪ್ಪ ಎಂಬಾತ ಇದೇ ತಾಲ್ಲೂಕಿನ ಸೀಗಲಹಳ್ಳಿ ಗ್ರಾಮದ ಗುರುಶಾಂತಮ್ಮ ಎಂಬಾಕೆಯನ್ನು ವಿವಾಹವಾಗಿದ್ದರು. ವಿವಾಹವಾದ ಕೆಲವೇ ವರ್ಷದಲ್ಲಿ ಇಬ್ಬರಲ್ಲೂ ಕೆಲ ವಿಚಾರಗಳಿಗೆ ಕೌಟುಂಬಿಕ ಕಲಹಗಳಾಗಿ ದೂರವೇ ಉಳಿದಿದ್ದರು.
ಪತಿ ಗೋವಿಂದಪ್ಪ ಊರನ್ನು ಬಿಟ್ಟು ಬೆಂಗಳೂರಿಗೆ ತೆರಳಿ ದುಡಿಮೆ ಮಾಡಿಕೊಂಡಿದ್ದರೆ, ಇತ್ತ ಪತ್ನಿ ಗುರುಶಾಂತಮ್ಮ ತಮ್ಮ ತವರೂರಾದ ಸೀಗಲಹಳ್ಳಿ ಗ್ರಾಮದ ತವರು ಸೇರಿದ್ದರು. ಮದಲೂರು ಗ್ರಾಮ ಪಂಚಾಯ್ತಿಗೆ ಸೇರಿದ್ದ ಹುಳಿಗೆರೆ ಗ್ರಾಮದಲ್ಲಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯಾಗಿದ್ದ ಪತ್ರಕರ್ತ ಚಂದ್ರಶೇಖರ್ ಈ ಸತಿ-ಪತಿಗಳಿಬ್ಬರನ್ನು ತಮಗೆ ಮತ ಚಲಾಯಿಸಲು ಕರೆಸಿಕೊಂಡಿದ್ದರು.
ಇಬ್ಬರೂ ಏಕಕಾಲದಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ ಪರಸ್ಪರ ಮುಖಗಳನ್ನು ನೋಡಿ ಹಲವು ವರ್ಷಗಳೇ ಆಗಿದ್ದ ದಂಪತಿಗೆ ತಮ್ಮ ಬಾಂಧವ್ಯದ ನೆನಪುಗಳು ಮರುಕಳಿಸಿ, ಇಬ್ಬರೂ ಕಷ್ಟ-ಸುಖಗಳ ಉಭಯಕುಶಲೋಪರಿಯನ್ನು ಮಾತನಾಡಿಕೊಂಡರು. ಕೆಲವು ಮುಖಂಡರ ಸಮ್ಮುಖದಲ್ಲಿಯೇ ಹಳೆಯ ಘಟನೆಗಳನ್ನು ಮರೆತು ಒಂದಾಗಿಯೇ ಬಿಟ್ಟರು…!
ಒಟ್ಟಾರೆ ಹಲವು ವರ್ಷಗಳಿಂದಲೂ ಒಗ್ಗೂಡದೆ ವಿರಸವನ್ನು ಕಂಡಿದ್ದ ಈರ್ವರ ನಡುವಿನ ಭಿನ್ನಾಭಿಪ್ರಾಯಗಳನ್ನು ಗ್ರಾಪಂ ಚುನಾವಣೆ ಶಮನಗೊಳಿಸಿ ಒಂದಾಗುವಂತೆ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
